ಬೆಂಗಳೂರು(ಜ.28): ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ನಿಷೇಧಿಸಿ ತಮ್ಮ ತಾಕತ್ತು ತೋರಿಸಬೇಕಿತ್ತು ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸವಾಲ್ ಹಾಕಿದರು. ಇಂದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಮಾಜಿ ಸಿಎಂ ಕುಮಾರಸ್ವಾಮಿ ಆರ್ಎಸ್ಎಸ್ ನಿಷೇಧ ಮಾಡಬೇಕೆಂದು ಆಗ್ರಹ ಮಾಡುತ್ತಾರೆ. ಇವರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆರ್ಎಸ್ಎಸ್ ಮೇಲೆ ನಿಷೇಧ ಹೇರುವ ಮೂಲಕ ತಮ್ಮ ತಾಕತ್ತು ಪ್ರದರ್ಶಿಸಬೇಕಿತ್ತು ಎಂದರು.
ಆರ್ಎಸ್ಎಸ್ ಮತ್ತು ಬಜರಂಗದಳ ದೇಶಸೇವೆ ಮಾಡುತ್ತಿವೆ. ಜನರಿಗೆ ದೇಶಭಕ್ತಿ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಗೋಮಾತೆ ಮತ್ತು ಮಹಿಳೆಯರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೇವೆ. ಯಾರನ್ನೂ ಹೊಡೆಯುವ, ಬಡಿಯುವ ಸಂಸ್ಕೃತಿ ನಮ್ಮದಲ್ಲ. ಹೀಗಿದ್ದರೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರ್ಎಸ್ಎಸ್ ಬಗ್ಗೆ ಸುಖಾಸುಮ್ಮನೇ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು ಕಲ್ಲಡ್ಕ ಪ್ರಭಾಕರ್ ಭಟ್.
ಹಿಂದೂ ಸಮಾಜದ ರಕ್ಷಣೆ ನಮ್ಮ ಹೊಣೆ. ಆರ್ಎಸ್ಎಸ್ ಹಿಂದೆ ಇಡೀ ಹಿಂದೂ ಸಮಾಜವೇ ಬರುತ್ತಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈ ಹಿಂದೆಯೂ ಮಹಾತ್ಮ ಗಾಂಧೀಜಿ ಕೊಲೆ ಪ್ರಕರಣ ಮುಂದಿಟ್ಟುಕೊಂಡು ಆರ್ಎಸ್ಎಸ್ ಮೇಲೆ ನೀಷೇಧ ಹೇರಲಾಗಿತ್ತು. ಅಷ್ಟೇ ಬೇಗ ಆರ್ಎಸ್ಎಸ್ ಮೇಲಿನ ನಿಷೇಧ ತೆರವುಗೊಳಿಸಲಾಗಿತ್ತು ಎಂದು ತಿಳಿಸಿದರು.
ಇನ್ನು ಮುಸ್ಲಿಮರು ಮತ್ತು ಕ್ರೈಸ್ತರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಹೊಂದಿದ್ದಾರೆ. ಹಿಂದೂ ಸಮಾಜದ ಹೆಣ್ಣುಮಕ್ಕಳನ್ನು ಮೋಸ ಮಾಡಿ ಮದುವೆ ಆಗುತ್ತಿದ್ದಾರೆ. ಗೋವುಗಳ ಮಾರಣಹೋಮ ನಡೆಯುತ್ತಿದೆ. ಇದನ್ನು ತಡೆಯುವುದು ಆರ್ಎಸ್ಎಸ್ ಕರ್ತವ್ಯ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಕುಟುಕಿದರು.
ಈ ಹಿಂದೆಯೇ ಆರ್ಎಸ್ಎಸ್ ಮತ್ತು ಭಜರಂಗ ದಳ ಕೋಮುದ್ವೇಷ ಬಿತ್ತುತ್ತಿವೆ. ಸಮಾಜದಲ್ಲಿ ಪ್ರತಿಯೊಬ್ಬರು ಶಾಂತಿ ಹಾಗೂ ನೆಮ್ಮದಿಯಿಂದ ಬದುಕಬೇಕು. ಈ ಬದಲಾವಣೆ ಆರ್ಎಸ್ಎಸ್ ನಿಷೇಧದಿಂದ ಸಾಧ್ಯ. ಸಮಾಜದ ನೆಮ್ಮದಿಗಾಗಿ ಮೊದಲು ಆರ್ಎಸ್ಎಸ್ ಮತ್ತು ಭಜರಂಗ ದಳ ನಿಷೇಧಿಸಬೇಕು. ಮಹಾತ್ಮ ಗಾಂಧಿಯವರನ್ನೇ ಕೊಂದ ಆರ್ಎಸ್ಎಸ್ ನನ್ನನ್ನು ಬಿಡುತ್ತಾ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದರು.
Comments are closed.