ಕರ್ನಾಟಕ

ಅಮ್ಮನ ಹತ್ತಿರ 100 ರೂ. ಪಡೆದು ಕಾಲೇಜಿಗೆ ಹೋದ ಯುವಕ ಕಾಣೆ

Pinterest LinkedIn Tumblr


ಮಂಡ್ಯ: ಕಾಲೇಜಿಗೆ ಹೋಗುತ್ತೇನೆ ಎಂದು ಹೋದ ಮಗ ಇದೀಗ ಕಾಣೆಯಾಗಿದ್ದು, ತಂದೆ-ತಾಯಿಯಲ್ಲಿ ಆತಂಕ ಸೃಷ್ಟಿಸಿರುವ ಘಟನೆ ಮಂಡ್ಯ ತಾಲೂಕಿನ ಹುಲಿವಾಹನ ಗ್ರಾಮದಲ್ಲಿ ನಡೆದಿದೆ.

ಹುಲಿವಾಹನ ಗ್ರಾಮದ ವಿಜಯ್‍ಕುಮಾರ್ ಮತ್ತು ಶೋಭಾ ದಂಪತಿಯ ಮಗ ಚೇತನ್‍ಕುಮಾರ್ (17) ಕಳೆದ ಶುಕ್ರವಾರದಿಂದ ಕಾಣೆಯಾಗಿದ್ದಾನೆ. ಮಂಡ್ಯದ ಅನಿಕೇತನ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಚೇತನ್‍ಕುಮಾರ್ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾನೆ.

ಚೇತನ್‍ಕುಮಾರ್ ಕಳೆದ ಶುಕ್ರವಾರ ಬೆಳಗ್ಗೆ 9.30ಕ್ಕೆ ಕಾಲೇಜಿಗೆ ಹೋಗುವಾಗ ನನಗೆ ಪರೀಕ್ಷೆ ಹತ್ತಿರ ಬರುತ್ತಿದೆ. ನಾನು ಹಾಸ್ಟೆಲ್‍ನಲ್ಲಿ ಇರುತ್ತೇನೆ ಎಂದು ತಾಯಿ ಶೋಭಾ ಬಳಿ 100 ರೂ. ತೆಗೆದುಕೊಂಡು ಹೋಗಿದ್ದ. ಅದೇ ದಿನ ಬೆಳಗ್ಗೆ 11.30ಕ್ಕೆ ಚೇತನ್ ತಂದೆ ವಿಜಯ್‍ಕುಮಾರ್ ಅವರಿಗೆ ಅನಿಕೇತ ಕಾಲೇಜು ಆಡಳಿತ ಮಾಡಿ ಫೋನ್ ಮಾಡಿ, ನಿಮ್ಮ ಮಗ ಕಾಲೇಜಿಗೆ ಬಂದಿಲ್ಲ ಎಂದು ತಿಳಿಸಿದ್ದರು. ನಂತರ ವಿಜಯ್‍ಕುಮಾರ್ ಮಗನನ್ನು ಹಾಸ್ಟೆಲ್, ಮಂಡ್ಯ ನಗರ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ.

ವಿಜಯ್‍ಕುಮಾರ್ ದಂಪತಿ ಪುತ್ರ ಚೇತನ್‍ಕುಮಾರ್‌ನ ಸ್ನೇಹಿತರು ಹಾಗೂ ಸಂಬಂಧಿಕರನ್ನು ಸಹ ವಿಚಾರಿಸಿದ್ದಾರೆ. ಆದರೆ ಎಲ್ಲೂ ಸಹ ಮಗನ ಸುಳಿವು ಸಿಕ್ಕಿಲ್ಲ. ಸದ್ಯ ಈ ಬಗ್ಗೆ ಕೆರಗೊಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಚೇತನ್‍ಕುಮಾರ್ ಸುಳಿವು ದೊರೆತವರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಪೊಲೀಸರು ಸಹ ಕೇಳಿಕೊಂಡಿದ್ದಾರೆ.

Comments are closed.