ಕರ್ನಾಟಕ

ಕತ್ತು ಕೊಯ್ದುಕೊಂಡು ನವವಿವಾಹಿತ ಆತ್ಮಹತ್ಯೆಗೆ ಶರಣು

Pinterest LinkedIn Tumblr


ಚಿಕ್ಕಬಳ್ಳಾಪುರ: ಮನೆಯಲ್ಲಿ ಕತ್ತು ಕೊಯ್ದುಕೊಂಡು ನವವಿವಾಹಿತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚಾಕವೇಲು ಗ್ರಾಮದಲ್ಲಿ ನಡೆದಿದೆ.

ನಾಗರಾಜು(25) ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತ. ತಂದೆ ಹಾಗೂ ತಾಯಿಯ ಅಗಲಿಕೆ ನಂತರ ನಾಗರಾಜ್ ತನ್ನ ತಮ್ಮನೊಂದಿಗೆ ವಾಸವಾಗಿದ್ದನು. ಕಳೆದ ಐದು ತಿಂಗಳ ಹಿಂದೆಯಷ್ಟೇ ನಾಗರಾಜ್ ಇದೇ ಗ್ರಾಮದ ವಿಜಯಲಕ್ಷ್ಮಿ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದನು. ವೃತ್ತಿಯಲ್ಲಿ ಪೇಂಟರ್ ಆಗಿದ್ದ ನಾಗರಾಜ್ ಮದುವೆಯಾದ ನಂತರ ನೆರೆ ರಾಜ್ಯ ಆಂಧ್ರದ ಕದಿರಿ ಬಳಿ ಪೇಂಟಿಂಗ್ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದನು.

ಕಳೆದ ಒಂದು ವಾರದ ಹಿಂದೆ ನಾಗರಾಜ್ ತನ್ನ ಪತ್ನಿ ವಿಜಯಲಕ್ಷ್ಮಿ ಜೊತೆಗೆ ಸ್ವಗ್ರಾಮ ಚಾಕವೇಲುಗೆ ವಾಪಸ್ಸಾಗಿದ್ದನು. ಆದರೆ ಅದೇನಾಯ್ತೋ ಏನೋ ತನ್ನ ಮನೆಯಲ್ಲಿದ್ದ ನಾಗರಾಜ್ ಮನೆಯ ಒಳಭಾಗದಿಂದ ಬಾಗಿಲು ಹಾಕಿಕೊಂಡು ತನ್ನ ಕತ್ತನ್ನು ತಾನೇ ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಂಜೆಯಾದರೂ ನಾಗರಾಜ್ ಮನೆಯಿಂದ ಹೊರ ಬಂದಿಲ್ಲ ಎಂದು ಅನುಮಾನಗೊಂಡ ಪತ್ನಿ ಹಾಗೂ ಮೃತನ ಸಹೋದರ ಸೇರಿದಂತೆ ಸಂಬಂಧಿಕರು ಮನೆಯ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ರಕ್ತದ ಮಡುವಿನಲ್ಲಿ ನಾಗರಾಜ್ ಪತ್ತೆಯಾಗಿದ್ದು, ಘಟನೆ ಕಂಡ ಸಂಬಂಧಿಕರು ಶಾಕ್ ಆಗಿದ್ದಾರೆ. ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಬಾಗೇಪಲ್ಲಿ ವೃತ್ತ ನಿರೀಕ್ಷಕ ನಯಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ನಾಗರಾಜ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಇತ್ತೀಚೆಗೆ ಮೃತ ನಾಗರಾಜ್ ತನ್ನ ಮನಸ್ಸಿಗೆ ಯಾಕೋ ಬೇಜಾರ್ ಆಗುತ್ತಿದೆ, ತಾನು ಸಾಯುವುದಾಗಿ ಸಂಬಂಧಿಕರ ಬಳಿ ಆಗಾಗ ಹೇಳಿಕೊಳ್ಳುತ್ತಿದ್ದನು ಎನ್ನಲಾಗಿದೆ. ಆದರೆ ಸಂಬಂಧಿಕರು ಎಲ್ಲೋ ತಮಾಷೆಗೆ ಈ ರೀತಿ ಹೇಳುತ್ತಿದ್ದಾನೆ ಎಂದು ಸ್ವಲ್ಪ ಬುದ್ಧಿವಾದ ಹೇಳಿ ಸುಮ್ಮನಾಗಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ಪೊಲೀಸರ ತನಿಖೆಯಿಂದ ಸಾವಿನ ಸತ್ಯ ತಿಳಿದು ಬರಬೇಕಿದೆ.

Comments are closed.