ಕರ್ನಾಟಕ

ಕಲ್ಲಡ್ಕ ಪ್ರಭಾಕರ್ ಯಾರು?: ಡಿ.ಕೆ. ಶಿವಕುಮಾರ್

Pinterest LinkedIn Tumblr


ಬೆಂಗಳೂರು: ಕನಕಪುರದಲ್ಲಿ ಬಿಜೆಪಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳು ಹಮ್ಮಿಕೊಂಡಿರುವ ಕನಕಪುರ ಚಲೋ ಪ್ರತಿಭಟನೆಯ ನೇತೃತ್ವ ವಹಿಸಿರುವ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಯಾರು? ಎನ್ನುವುದು ಗೊತ್ತಿಲ್ಲ. ಅವರನ್ನು ಭೇಟಿಯೇ ಆಗಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರಿಗೆ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತಮ್ಮ ಹಾಗೂ ಸಹೋದರ ಮತ್ತು ಪಕ್ಷದ ಕಾರ್ಯಕರ್ತರನ್ನು ಬಿಜೆಪಿ ಮನಸೋಇಚ್ಛೆ ಬೈದರೂ ತಮಗೆ ಯಾವುದೇ ಬೇಜಾರಿಲ್ಲ. ಬಿಜೆಪಿಗೆ ಆಡಳಿತ ಅಧಿಕಾರವಿದೆ. ಏನೂ ಬೇಕಾದರೂ ಮಾಡುತ್ತಾರೆ. ಅದಕ್ಕೆ ಯಾವುದೇ ಪ್ರತಿಕ್ರಿಯಿಸದೇ ಶಾಂತಿ ಕಾಪಾಡಿಕೊಳ್ಳುವಂತೆ ಕ್ಷೇತ್ರದ ಜನತೆಗೂ ಪಕ್ಷದ ಕಾರ್ಯಕರ್ತರಿಗೂ ಮನವಿ ಮಾಡಿದರು.

ಕಪಾಲಿ ಬೆಟ್ಟದಲ್ಲಿ ಕಾವೇರಿ ನೀರಿನ ಟ್ಯಾಂಕ್ ಕಟ್ಟಿಸಿರುವೆ, ಪವರ್ ಪ್ಲಾಂಟ್ ಕೂಡ ಆಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷ -ಆಡಳಿತ ಇರಬೇಕು. ವಿರೋಧಿಸುವವರು ಇದ್ದಾಗಲೇ ಬೆಳೆಯಲು ಸಾಧ್ಯ. ರಾಜಕಾರಣದಲ್ಲಿ ಯಾರು ಯಾವಾಗ ಎಲ್ಲಿ ಎನ್ನುವುದು ಗೊತ್ತಾಗುವುದಿಲ್ಲ. ಎಲ್ಲಿ ಇರುತ್ತಾರೆ ಎನ್ನುವುದನ್ನು ಹೇಳಲಾಗದು. ರಾಜಕಾರಣದ ನೆರಳನ್ನು ನೋಡಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಕ್ರೈಸ್ತ ಸಮುದಾಯದವರನ್ನು ಭೇಟಿಯಾಗಿ ಏನು ಮಾತನಾಡಿದ್ದಾರೆ ಎನ್ನುವುದು ತಮಗೆ ಗೊತ್ತಿದೆ. ಯಡಿಯೂರಪ್ಪ ಮುಂದೆ 150 ಸ್ಥಾನಗಳನ್ನು ಗೆದ್ದು ತೋರಿಸುವಂತೆ ಶುಭಕೋರುವುದಾಗಿ ಸೂಚ್ಯವಾಗಿ ಹೇಳಿದರು.

ಕನಕಪುರದಲ್ಲಿ ಯಾವುದೇ ಮತಾಂತರವಾಗುತ್ತಿಲ್ಲ. ಸಚಿವರು ಅಲ್ಲಿಗೆ ಬೇಕಾದರೆ ಹೋಗಿ ಕಣ್ಣು ಬಾಯಿ ತೆರೆದು ನೋಡಲಿ. ರಾಮನಗರವನ್ನು ಬಿಜೆಪಿ ನವಬೆಂಗಳೂರಾದರೂ ಮಾಡಿಕೊಳ್ಳಲಿ ನವಭಾರತವನ್ನಾದರೂ ಮಾಡಿಕೊಳ್ಳಲಿ ಎಂದು ಕುಟುಕಿದರು. ಇನ್ನೂ 114 ಅಡಿ ಎತ್ತರದ ಯೇಸುವಿನ ಪ್ರತಿಮೆ ನಿರ್ಮಾಣ ಮಾಡುವುದೋ ಬೇಡವೋ ಎಂಬುದನ್ನು ಜನ ನಿರ್ಧರಿಸುತ್ತಾರೆ, ನಾನಲ್ಲ ಎಂದು ಹೇಳಿದ ಶಿವಕುಮಾರ್, ಕಳೆದ 30 ವರ್ಷದಿಂದ ಶಾಸಕನಾಗಿದ್ದೇನೆ ಹೀಗಾಗಿ ಜನರ ನಿರ್ಧಾರವನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ತಾವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾಗ ತುಮಕೂರಿನ ಸಿದ್ಧಗಂಗಾ ಶ್ರೀಗಳ ಪುತ್ಥಳಿ ನಿರ್ಮಾಣಕ್ಕೆ ಗೋಮಾಳದ 16 ಎಕರೆ ಜಾಗವನ್ನು ಹಾಗೂ ಬಾಲಗಂಗಾಧರನಾಥ ಸ್ವಾಮೀಜಿ ಪ್ರತಿಮೆ ನಿರ್ಮಾಣಕ್ಕೂ ಜಾಗ ಮೀಸಲಿಟ್ಟು ಸಚಿವ‌ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದೆ.

ಅದು ಈಗಿನ ಬಿಜೆಪಿ ಸರ್ಕಾರದ ಮುಂದೆಯೂ ಬರಲಿದೆ. ಮಾಗಡಿಯಲ್ಲಿ ಕ್ರೈಸ್ತ ಸಮುದಾಯಕ್ಕೆ ಸೇರಿದ 5 ಎಕರೆ ಜಮೀನನ್ನು ಮುಖಂಡ ಕೆ.ಜೆ.ಜಾರ್ಜ್ ಹಾಗೂ ಆರ್ಚ್ ಬಿಷಪ್ ಜೊತೆ ಚರ್ಚಿಸಿ ಅಲ್ಲಿ ಕೆಂಪೇಗೌಡ ಪ್ರಾಧಿಕಾರ ನಿರ್ಮಿಸಲಾಗಿದೆ. ಪದ್ಮಾವತಿ ಮೇಯರ್ ಆಗಿದ್ದಾಗ 50 ಕೋಟಿ ಅನುದಾನ ಪ್ರಾಧಿಕಾರದ ವಿಶ್ವವಿದ್ಯಾಲಯಕ್ಕೆ ನೀಡಲಾಗಿದೆ. ಜನರಿಗೆ ಅಗತ್ಯವಾದುದನ್ನು ಜಾತಿ – ಧರ್ಮ ಸಮುದಾಯ ನೋಡದೇ ಹಿಂದಿನಿಂದಲೂ ಕೈಲಾದ ಸೇವೆ ಮತ್ತು ಸಹಾಯ ಮಾಡುತ್ತಾ ಬಂದಿದ್ದೇನೆ.

ಬಿಜೆಪಿ ಸರ್ಕಾರ ಕನಕಪುರಕ್ಕೂ ನಮಗೂ ಉದ್ದೇಶಪೂರ್ವಕವಾಗಿ ಕೆಟ್ಟ ಹೆಸರು ಹೊರಟಿದೆ ಎಂದು ಶಿವಕುಮಾರ್ ಬೇಸರ ವ್ತಕ್ತಪಡಿಸಿದರು.

ರಾಜಕೀಯದಲ್ಲಿ ಏನಾದರೂ ಆಗಬಹುದು. ಮುಖ್ಯಮಂತ್ರಿ ಬಿ.ಎಸ್​​​ ಯಡಿಯೂರಪ್ಪ ಏನು ಮಾಡುತ್ತಿದ್ದಾರೆ ಎಂಬುದು ಅರಿವಿದೆ. ಅವರ ಪಕ್ಷಕೇನು ಬೇಕೋ ಅದನ್ನೇ ಮಾಡುತ್ತಾರೆ. ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಕನಕಪುರ ಕ್ಲೀನ್​​ ಮಾಡುತ್ತೇನೆ ಎಂದು ಹೇಳಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಮುಂದಿನ ಚುನಾವಣೆಯಲ್ಲಿ 150 ಸೀಟು ಗೆಲ್ಲಲಿ ಎಂದು ಹೇಳಿದರು.

ರಾಮನಗರ, ಕನಕಪುರ, ಚನ್ನಪಟ್ಟಣದಿಂದ ಎಷ್ಟು ವಾಹನಗಳಲ್ಲಿ ಜನ ಬಂದಿದ್ದಾರೆ ಎಂಬುದರ ಬಗ್ಗೆ ರಾಮನಗರದ ಮಾಜಿ ಸಚಿವರೇ ನನಗೆ ಮಾಹಿತಿ ನೀಡಿದ್ದಾರೆ. ಏನೋ ಮಾಡಿಕೊಂಡು ಹೋಗುತ್ತೇವೆ ತಪ್ಪಾಗಿ ತಿಳಿಯಬೇಡಿ ಎಂದಿದ್ದಾರೆ ಎಂದರು.

Comments are closed.