ಕರ್ನಾಟಕ

‘ಮೋದಿಯಷ್ಟು ನಂಬಿಕೆ ದ್ರೋಹ ಇನ್ಯಾರೂ ಮಾಡಿಲ್ಲ’! ದೇವನೂರು ಮಹದೇವ

Pinterest LinkedIn Tumblr


ಮೈಸೂರು: ದೇಶದ ಜನ ಮೋದಿಯವರನ್ನು ನಂಬಿದಷ್ಟು ಬೇರೆ ಯಾರನ್ನೂ ನಂಬಲಿಲ್ಲ. ಅದೇ ರೀತಿ ಮೋದಿ ದೇಶದ ಜನತೆಗೆ ಮಾಡಿದಷ್ಟು ನಂಬಿಕೆ ದ್ರೋಹ ಬೇರೆ ಯಾರೂ ಮಾಡಲಿಲ್ಲ ಎಂಬ ಭಾವನೆ ಬರುತ್ತಿದೆ ಎಂದು ಸಾಹಿತಿ ದೇವನೂರು ಮಹದೇವ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮೋದಿ ಅವರನ್ನು ಜನ ನಂಬಿದಕ್ಕೆ ತೆತ್ತ ಬೆಲೆ ಎಷ್ಟು ಎಂಬುದನ್ನು ಲೆಕ್ಕ ಹಾಕಬೇಕಿದೆ ಎಂದರು.

ನೋಟ್‌ ಬ್ಯಾನ್‌ನಿಂದ ಆಗಿರುವ ಅನಾಹುತ ಇನ್ನೂ ಭಾರತವನ್ನು ಸುಡುತ್ತಿದೆ. ಎಲ್ಲವೂ ಮಹಾಭಾರತದ ಉತ್ತರನ ಪೌರುಷದಂತೆ ಕಂಡುಬರುತ್ತಿದೆ ಎಂದು ದೇವನೂರು ಮಹದೇವ ಕಿಡಿಕಾರಿದ್ದಾರೆ. ಜಾತಿ, ಭಾಷೆ ಭಾವನೆಗಳನ್ನು ಕೆರಳಿಸಿ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುತ್ತಿರುವಂತೆ ಮೋದಿಯವರ ಆಳ್ವಿಕೆಯ ವೈಖರಿ ಇದೆ ಎಂದು ಮಹದೇವ ಬಣ್ಣಿಸಿದ್ದಾರೆ. ಮೋದಿಯವರ ನೀತಿಗೆ ಇತ್ತೀಚಿನ ಉದಾಹರಣೆ, ಪೌರತ್ವ ಕಾಯಿದೆ ಜಾರಿ. ಇಂಥವುಗಳಿಂದಾಗಿ ದೇಶ ಮತ್ತಷ್ಟು ಆರ್ಥಿಕ ಕುಸಿತ, ಉದ್ಯೋಗ ನಾಶ, ಬೆಲೆ ಏರಿಕೆ, ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಎದುರಿಸಲಿದೆ ಎಂದು ದೇವನೂರು ಮಹದೇವ ಆತಂಕ ವ್ಯಕ್ತಪಡಿಸಿದರು. ಜನಮುಖಿ ಸಂಘಟನೆಗಳು, ಪ್ರತಿಪಕ್ಷಗಳು ಮಾತ್ರವಲ್ಲ, ಆರ್‌ಎಸ್‌ಎಸ್‌, ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಲ್ಲಿ ಇರುವ ಮುಗ್ಧರು ಮಾತನಾಡಬೇಕಾದ ಕಾಲ ಬಂದಿದೆ ಎಂದು ದೇವನೂರು ಮಹದೇವ ಕರೆ ನೀಡಿದ್ದಾರೆ.

ಸಿಲ್ಲಿ ಲಲ್ಲಿ ಮತ್ತು ಮೋದಿ

ಮೋದಿ ಅವರನ್ನು ನೋಡಿದರೆ ಸಿಲ್ಲಿಲಲ್ಲಿ ಧಾರಾವಾಹಿಯ ಸಮಾಜಸೇವಕಿ ಲಲತಾಂಬ ಪಾತ್ರ ನೆನಪಾಗುತ್ತಿದೆ ಎಂದು ದೇವನೂರು ಮಹಾದೇವ ಲೇವಡಿ ಮಾಡಿದರು. ಆ ಪಾತ್ರ ಬಾಯಿ ಬಿಟ್ಟರೆ ನನ್ನ ನಂಬಿ, ನನ್ನ ನಂಬಿ ಪ್ಲೀಸ್‌ ಅಂತಿರುತ್ತದೆ. ಪೌರತ್ವ ತಿದ್ದುಪಡಿಯನ್ನು ಕಾಯಿದೆ ಮಾಡಿದ ನಂತರ ಆತಂಕಗೊಂಡ ಜನ ಸಮುದಾಯವನ್ನು ಉದ್ದೇಶಿಸಿ ನಮ್ಮ ಪ್ರಧಾನಿ, ಆತಂಕಕ್ಕೆ ಒಳಗಾಗಬೇಡಿ, ನನ್ನನ್ನು ನಂಬಿ, ನಾನು ನಿಮ್ಮ ಸೇವಕ ಎಂದಿದ್ಧಾರೆ. ಇವರಿಗೂ ಧಾರಾವಾಹಿಯ ಲಲತಾಂಬ ಮಾತಿಗೂ ತಾಳಮೇಳ ಆಗುತ್ತಿದೆ ಎಂದು ಮಹದೇವ ವ್ಯಂಗ್ಯವಾಡಿದರು.

ಸಾಹಿತಿ ದೇವನೂರು ಮಹಾದೇವ, ರೈತ ಸಂಘದ ಬಡಗಲಪುರ ನಾಗೇಂದ್ರ ಸೇರಿದಂತೆ ಪ್ರಮುಖರ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ಡಿಸೆಂಬರ್ 19ರಂದು ಮೈಸೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದೆ.
ಬೆಳಗ್ಗೆ 11 ಗಂಟೆಗೆ ಮೈಸೂರಿನ ಟೌನ್‌ಹಾಲ್‌ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ. ಇದಕ್ಕೆ ಪೌರತ್ವ ಕಾಯಿದೆ ವಿರೋಧಿಸುವ ಎಲ್ಲಾ ಸಂಘಟನೆಗಳು ಕೈಜೋಡಿಸಲಿವೆ. ಮೋದಿ ನೇತೃತ್ವದ ಕೇಂದ್ರ ಸರಕಾರದ ನಡೆಯನ್ನು ಈ ಸಂದರ್ಭ ಖಂಡಿಸಲಾಗುವುದು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Comments are closed.