ಕರ್ನಾಟಕ

ಮಂಡ್ಯದಲ್ಲಿ ಕುಮಾರಸ್ವಾಮಿ ಮತ್ತೆ ಕಣ್ಣೀರು

Pinterest LinkedIn Tumblr


ಮಂಡ್ಯ: ನಾನೇನು ತಪ್ಪು ಮಾಡಿದೆ ಎಂದು ಜಿಲ್ಲೆಯ ಜನರಾದ ನೀವು ನನ್ನನ್ನು ಕೈ ಬಿಟ್ಟಿರಿ ಎಂದು ಭಾವುಕರಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ.

ಕಿಕ್ಕೇರಿಯಲ್ಲಿ ನಡೆದ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡುವಾಗ ಎಚ್‍ಡಿಕೆ ಭಾವುಕರಾಗಿದ್ದಾರೆ. ಸಮಾವೇಶದಲ್ಲಿ ಎಚ್‍ಡಿಕೆ ಸಿಎಂ ಆಗಿದ್ದಾಗ ಅಂದಿನ ಶಾಸಕರಾಗಿದ್ದ ನಾರಾಯಣಗೌಡ ಅವರು ಬರೆದ ಪತ್ರವನ್ನು ವೇದಿಕೆ ಮೇಲೆಯೇ ಓದಿದರು. ನಂತರ ನಾನೇನು ತಪ್ಪು ಮಾಡಿದೆ ಎಂದು ಸಭಿಕರನ್ನು ಪ್ರಶ್ನಿಸಿದರು. ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸಬೇಕೆಂದು ನಾನು ಬಯಸಿರಲಿಲ್ಲ. ನೀವೇ ಒತ್ತಾಯ ಮಾಡಿ ಚುನಾವಣೆಗೆ ನಿಲ್ಲುವಂತೆ ಮಾಡಿದಿರಿ. ಜಿಲ್ಲೆಯ ಜನರನ್ನು ಸ್ಪರ್ಧಿಸಲು ಅನುಮತಿ ನೀಡಿದೆ. ಆದರೆ ನೀವೇ ನನ್ನ ಕೈ ಬಿಟ್ಟಿರಿ ಎಂದು ಭಾವುಕರಾಗಿದ್ದಾರೆ.

ಜಿಲ್ಲೆಯ ಜನರೇ ನನ್ನನ್ನು ಕೈ ಬಿಟ್ಟ ಮೇಲೆ ನಾನು ಅಧಿಕಾರದಲ್ಲಿರಬೇಕೇ? ಜಿಲ್ಲೆಯ ಜನರ ಪ್ರೀತಿಯೇ ಇಲ್ಲದ ಮೇಲೆ ಮುಖ್ಯಮಂತ್ರಿ ಸೇರಿದಂತೆ ಉಳಿದ ಅಧಿಕಾರ ಯಕಶ್ಚಿತ್ ಎಂದು ಕಣ್ಣೀರು ಹಾಕಿದರು. ಅಲ್ಲದೆ ನಾನು ನನ್ನ ಮಗನನ್ನು ಚುನಾವಣೆಗೆ ಸ್ಪರ್ಧಿಸಬೇಕು ಎಂದುಕೊಂಡಿರಲಿಲ್ಲ. ನೀವೇ ಈ ಕುರಿತು ಒತ್ತಾಯ ಮಾಡಿ, ಬಲವಂತವಾಗಿ ನಿಲ್ಲಿಸಿದಿರಿ. ಜಿಲ್ಲೆಯ ಜನರೇ ನನ್ನ ಕೈ ಬಿಟ್ಟ ಮೇಲೆ ಸ್ವಾಭಿಮಾನ ಎಲ್ಲಿಂದ ಬಂತು? ನಾನು ಒಂದೇ ಒಂದು ದಿನವೂ ಸರಿಯಾಗಿ ನಿದ್ದೆ ಮಾಡಿಲ್ಲ. ಮೈತ್ರಿ ಸರ್ಕಾರದ ಅವಧಿಯಲ್ಲಿ ನನ್ನನ್ನು ಗುಲಾಮನ ರೀತಿಯಲ್ಲಿ ನಡೆಸಿಕೊಂಡರು ಎಂದು ಬೇಸರ ವ್ಯಕ್ತಪಡಿಸಿದರು.

ಕಣ್ಣೀರು ಹಾಕುತ್ತಲೇ ಮಾತನಾಡಿದ ಎಚ್‍ಡಿಕೆ, ಜಿಲ್ಲೆಯ ಜನರಿಗೆ 26 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದು ನನ್ನ ತಪ್ಪಾ? ಪತ್ರಿಕೆಯವರು, ಟಿವಿಯವರು ಏನಾದರೂ ಬರೆದುಕೊಳ್ಳಲಿ. ಮಹಿಳೆಯರನ್ನು ನೋಡಿ ನನಗೆ ಕಣ್ಣೀರು ತುಂಬಿಕೊಂಡಿದ್ದೆ. ಈಗ ಆ ನೀರು ಹೊರ ಬರುತ್ತಿದೆ ಎಂದು ಭಾವುಕರಾದರು.

ಬಾಂಬೆ ಕಳ್ಳನಿಗೆ ಟಿಕೆಟ್ ನೀಡಿದೆ
ಬಾಂಬೆ ಕಳ್ಳ ಎಂದು ಕರೆಯುವ ಈತನಿಗೆ 2013 ರಲ್ಲಿ ಟಿಕೆಟ್ ನೀಡಿ ಶಾಸಕನನ್ನಾಗಿ ಮಾಡಿದೆ. ಈಗ ನನ್ನ ಮೇಲೆಯೇ ಆರೋಪ ಮಾಡುತ್ತಿದ್ದಾರೆ. ನನ್ನ ಕರ್ಮ 2018 ರಲ್ಲಿ ನನ್ನ ತಂದೆಯ ವಿರೋಧದ ನಡುವೆಯೂ ನಾನು ಟಿಕೆಟ್ ನೀಡಿದೆ ಎಂದು ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

2019 ರ ಫೆಬ್ರವರಿಯಲ್ಲಿ ನಾನು ಬಜೆಟ್ ಸಿದ್ಧತೆಯಲ್ಲಿದ್ದೆ. ಆಗ ಜಿಲ್ಲೆಗೆ ಏನು ಕೊಡಬೇಕೆಂದು ಚಿಂತನೆ ಮಾಡುತ್ತಿದ್ದೆ. ಆದರೆ ಆಗ ಇವನು ಬಾಂಬೆಯಲ್ಲಿ ನಾಟಕವಾಡಿ ಆಸ್ಪತ್ರೆಯಲ್ಲಿದ್ದ. ಬಿಜೆಪಿಯವರಿಂದ ಹಣ ಪಡೆದು ಆಸ್ಪತ್ರೆಯಲ್ಲಿ ಮಲಗಿದ್ದ ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇದನ್ನು ದೇವರು ಮೆಚ್ಚುತ್ತಾನಾ ಎಂದು ಎಚ್‍ಡಿಕೆ ಸಿಎಂ ಆಗಿದ್ದಾಗ ನಾರಾಯಣಗೌಡ ಬರೆದ ಪತ್ರವನ್ನು ಓದಿ ಭಾವುಕರಾದರು.

ಡಿಸೆಂಬರ್ 9ರ ನಂತರ ರಾಜ್ಯದಲ್ಲಿ ರಾಜಕೀಯ ಧೃವೀಕರಣವಾಗಲಿದೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ಪತನ ಸುಳಿವನ್ನು ಎಚ್‍ಡಿಕೆ ಬಿಚ್ಚಿಟ್ಟಿದ್ದಾರೆ. ಡಿ.9ರ ನಂತರ ರಾಜಕೀಯ ಶುದ್ಧೀಕರಣ ನಡೆಯುತ್ತದೆ. ಬಿಜೆಪಿ ಸರ್ಕಾರ ಸ್ಥಿರವಾಗಿರುತ್ತದೆ ಎಂದು ನಾವು ಹೇಳಿಲ್ಲ. ಸರ್ಕಾರ ಸ್ಥಿರವಾಗಿರುತ್ತದೆ ಎಂದು ಹೇಳಿದ್ದೇವೆ ಅಷ್ಟೇ. ಅದು ಯಾವ ಸರ್ಕಾರ ಅನ್ನೋದು ಡಿ.9ರ ನಂತರ ತಿಳಿಯಲಿದೆ. ಮೈತ್ರಿ ಸರ್ಕಾರ ತೆಗೆದ ತಪ್ಪಿಗೆ ಮಹಾರಾಷ್ಟ್ರದಲ್ಲಿ ಅವರ ಸರ್ಕಾರ ಹೋಗಿದೆ ಎಂದು ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Comments are closed.