ಕರ್ನಾಟಕ

ಕೊಲೆಮಾಡಿ ಜೈಲು ಸೇರಿದ ಖೈದಿ ಬಿಡುಗಡೆಯಾಗದೇ ಬಟ್ಟೆ ವ್ಯಾಪಾರಿಯಾದ!

Pinterest LinkedIn Tumblr


ಮೈಸೂರು: ಜೈಲಿನಿಂದ ಬಂದವರು ಅಂದ್ರೆ ಸಾಮಾನ್ಯವಾಗಿ ಅಸಡ್ಡೆಯ ಭಾವನೆ ಇರುತ್ತೆ. ಅವರು ಇನ್ನೂ ತಪ್ಪಿತಸ್ಥರು ಎಂಬ ಮನೋಭಾವದಿಂದಲೇ ಪರಿಗಣಿಸುವ ನಾವು, ಅವರೆಲ್ಲಾ ಎಲ್ಲಿ ಬದಲಾಗುತ್ತಾರೆ ಬಿಡಿ ಎಂಬ ಧೋರಣೆಯಿಂದಲೇ ವ್ಯವಹರಿಸುತ್ತೇವೆ. ಮಾತುಮಾತಿಗೂ ಅವರೆದುರೇ ಚುಚ್ಚಿ ಹೇಳುತ್ತೇವೆ. ಆದರೆ, ಅವರು ಆ ತಪ್ಪು ಮಾಡಲು ಕಾರಣವೇನು ಅನ್ನೋದನ್ನ ಅರಿಯುವುದೇ ಇಲ್ಲ. ಅವರು ಬದಲಾಗುವುದೇ ಇಲ್ಲ ಮನೋಭಾವಕ್ಕೆ ಬಂದು ಬಿಡುತ್ತೇವೆ. ಆದರೆ ಇಲ್ಲೊಬ್ಬ ಸಜಾಬಂಧಿ ಎಲ್ಲರಿಗಿಂತ ವಿಭಿನ್ನವಾಗಿದ್ದಾರೆ. ಅವರನ್ನು ನೋಡಿದರೆ ನಾವು ಕೂಡ ಅವರಂತಾಗಬಾರದೇಕೆ ಎಂದೆನಿಸುತ್ತದೆ.

ಬನ್ನಿ, ಇಲ್ಲಿ ಬನ್ನಿ ನಿಮಗೇನು ಬೇಕು, ಎಲ್ಲಾ ತರಹದ ಕಾಟನ್ ಬಟ್ಟೆ ನಾವು ತೋರಿಸುತ್ತೇವೆ ಎಂದು ಕೂಗಿ ಹೇಳುವ ಇವರು ಮಾಜಿ ಖೈದಿ. ಬಿಳಿ ಶರ್ಟ್ ಹಾಗೆಯೇ ಬಿಳಿ ಟೋಪಿ ಹಾಕಿಕೊಂಡಿರುವ ಇವರು, ಪರಿವರ್ತನಾ ಖೈದಿ. ಮೈಸೂರಿನ ದಸರಾ ವಸ್ತು ಪ್ರದರ್ಶನದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಅರೆ, ಇದೇನಿದು ಜೈಲಿನಲ್ಲಿ ಇರಬೇಕಾದವರು ಇಲ್ಲಿಗೆ ಏಕೆ ಬಂದರು ಎಂದು ಅಚ್ಚರಿಯಾಗ್ತಿದೆಯೇ. ಅದಕ್ಕೂ ಉತ್ತರ ಇದೆ.

ಈ ಖೈದಿ ಹೆಸರು ನಂಜುಂಡಸ್ವಾಮಿ. ಮೂಲತಃ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬದನವಾಳು ನಿವಾಸಿ. ಇವರಿಗೆ ಪತ್ನಿ, ಎರಡು ಮಕ್ಕಳಿದ್ದಾರೆ. 10 ವರ್ಷದ ಹಿಂದೆ ನಂಜುಂಡಸ್ವಾಮಿ ಕೋಪದ ಕೈಗೆ ಬುದ್ಧಿಕೊಟ್ಟು ವ್ಯಕ್ತಿಯೊಬ್ಬನನ್ನು ಕೊಲೆಗೈದಿದ್ದರು. ಮಾಡಿದ ತಪ್ಪಿಗೆ ನ್ಯಾಯಾಲಯ ನಂಜುಂಡಸ್ವಾಮಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಆದರೆ ಈಗ ನಂಜುಂಡಸ್ವಾಮಿ ಓರ್ವ ಒಳ್ಳೆ ಮನುಷ್ಯನಾಗಿ ಹೊರಹೊಮ್ಮಿದ್ದು ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ.

ದಸರಾ ಮಹೋತ್ಸವದ ಅಂಗವಾಗಿ ಕರ್ನಾಟಕ ವಸ್ತು ಪ್ರದರ್ಶನ ಆವರಣದಲ್ಲಿ ಖೈದಿಗಳೇ ಮಾಡಿದ ವಸ್ತುಗಳನ್ನು ಉತ್ತೇಜಿಸಲು ಪ್ರದರ್ಶನ ಮತ್ತು ಮಾರಾಟ ಮಳಿಗೆ ಆರಂಭಿಸಲಾಗಿದೆ. ಜೈಲು ಹಕ್ಕಿಗಳು ತರಬೇತಿ ಪಡೆದು ಉತ್ಪಾದಿಸಿದ ಉತ್ಪನ್ನಗಳನ್ನು ಕಳೆದೆರಡು ದಶಕಗಳಿಂದ ಮಾರಾಟ ಮಾಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಪರಿವರ್ತನಾ ಖೈದಿಯನ್ನೇ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮೈಸೂರು ಜೈಲು ಸೂಪರಿಟೆಂಡೆಂಟ್ ದಿವ್ಯಾಶ್ರೀ ಅವರು ತಮ್ಮ ಮೇಲಧಿಕಾರಿಗಳ ಸೂಚನೆ ಮೇರೆಗೆ ಈ ಮಳಿಗೆಗೆ ಪರಿವರ್ತನಾ ಖೈದಿಯನ್ನು ಕರೆತಂದಿದ್ದಾರೆ.

ಮೈಸೂರು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ನಂಜುಂಡಸ್ವಾಮಿಗೆ ಮಳಿಗೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಸಿಕ್ಕಿದೆ. ಸಾಮಾನ್ಯ ಜನರಂತೆ ಖೈದಿಗಳನ್ನು ಮಾತಾಡಿಸಬೇಕು ಅನ್ನೋದು ಇಲಾಖೆಯ ಮುಖ್ಯ ಉದ್ದೇಶ. ಖೈದಿಗಳು ಹಾಗೂ ಜೈಲಿನಲ್ಲಿರುವ ವ್ಯವಸ್ಥೆ ಬಗ್ಗೆ ತಿಳುವಳಿಕೆಯಿಲ್ಲದೇ ಮಾತನಾಡುವವರಿಗೆ ಇದೊಂದು ಪಾಠವಾಗಿದೆ.

ವ್ಯಾಪಾರಕ್ಕೆ ಕುಳಿತಿದ್ದ ಖೈದಿ ನಂಜುಂಡಸ್ವಾಮಿಯವರನ್ನು ಮಾತಿಗೆ ಎಳೆದಾಗ ಅವರು ಜೈಲಿನ ಬಗ್ಗೆ, ಅಲ್ಲಿನ ವ್ಯವಸ್ಥೆ ಬಗ್ಗೆ ಹಾಗೂ ತಮ್ಮ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ‘ನಮ್ಮ ಅಂಗಡಿಯಲ್ಲಿ ಉತ್ತಮ ಗುಣಮಟ್ಟದ ರತ್ನಗಂಬಳಿಗಳು, ಟವೆಲ್‌ಗಳು, ಕರವಸ್ತ್ರ, ಮರದ ಪೀಠೋಪಕರಣಗಳು ಹಾಗೆಯೇ ತರಹೇವಾರಿ ಬೇಕರಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ನಾನು ಜೈಲಿನಲ್ಲಿಯೇ ಎಂ. ಎ ಮಾಡಿದ್ದೇನೆ. ಈಗ ಇಲಾಖೆವರು ನನ್ನನ್ನು ಒಬ್ಬ ಪರಿವರ್ತಾನ ಖೈದಿ ಎಂದು ಪರಿಗಣಿಸಿ ನನಗೆ ವ್ಯಾಪಾರ ಮಾಡಲು ಅವಕಾಶ ನೀಡಿದ್ದಾರೆ. ಇಲ್ಲಿ ಖೈದಿಗಳು ತಯಾರಿಸಿದ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುತ್ತೇನೆ. ಜೈಲಿನ ಕುರಿತು ಜನರಿಗೆ ಅಸಮಾಧಾನವಿದೆ. ನಮಗೆ ಅಲ್ಲಿ ಸ್ವಾತಂತ್ರ್ಯವಿಲ್ಲ ಅನ್ನೋದನ್ನು ಹೊರತುಪಡಿಸಿದರೆ, ಹೊರ ಜಗತ್ತಿಗಿಂತಾ ಭಿನ್ನವಾಗೇನೂ ಇಲ್ಲ. ಜೈಲಿನಲ್ಲಿ ನಮಗೆ ಎಲ್ಲಾ ರೀತಿಯ ಸೌಲಭ್ಯ ನೀಡುತ್ತಾರೆ. ವಿದ್ಯಾಭ್ಯಾಸಕ್ಕೆ ಅವಕಾಶ, ತರಬೇತಿ ನಂತರ ಉತ್ಪಾದನೆಗೆ ಅವಕಾಶ ನೀಡುತ್ತಾರೆ. ನನಗೆ ಕೊಲೆ ಮಾಡಬೇಕೆಂಬ ಉದ್ದೇಶವಿರಲಿಲ್ಲ. ಕೇವಲ ಆಕಸ್ಮಿಕ ಘಟನೆಯಿಂದಾಗಿ ನಾನು ಜೈಲು ಸೇರುವಂತಾಯಿತು. ನನ್ನ ಹೆಂಡತಿ ಟೈಲರಿಂಗ್ ಮಾಡಿ ನನ್ನ ಎರಡು ಮಕ್ಕಳನ್ನು ಸಾಕುತ್ತಿದ್ದಾಳೆ. ನಾನು ಮಾಡಿದ ತಪ್ಪಿನ ಅರಿವು ನನಗಾಗಿದೆ. ಕೋಪ ಬಂದಾಗ ಯಾರೂ ಸಹ ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡಿ’ ಎನ್ನುತ್ತಾರೆ ಪರಿವರ್ತನಾ ಖೈದಿ ನಂಜುಂಡಸ್ವಾಮಿ.

ತಪ್ಪನ್ನು ಸಮರ್ಥಿಸಿಕೊಳ್ಳುವುದಕ್ಕಿಂತ ಮಾಡಿದ ತಪ್ಪನ್ನು ಒಪ್ಪಿಕೊಂಡು ಜೀವನ ನಡೆಸುವುದು ಪ್ರಾಮಾಣಿಕತೆ. ಅಂತವರ ಪೈಕಿ ನಂಜುಂಡಸ್ವಾಮಿ ಕೂಡ ಒಬ್ಬರು. ಜನರು ನೋಡುವ ರೀತಿಯನ್ನು ಬದಲಿಸಬೇಕೆಂದು ಪೊಲೀಸ್ ಇಲಾಖೆ ತೆಗೆದುಕೊಂಡ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆ ಸಹ ವ್ಯಕ್ತವಾಗಿದೆ.

Comments are closed.