ಕರ್ನಾಟಕ

ರೈತರಲ್ಲಿ ಗೊಂದಲವನ್ನುಂಟು ಮಾಡುತ್ತಿರುವ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ

Pinterest LinkedIn Tumblr


ಬೆಂಗಳೂರು: ಲೋಕಸಭೆ ಚುನಾವಣೆಗೂ ಮುಂಚೆ ದೇಶದ ರೈತರಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ರಾಜ್ಯದ ರೈತರಿಗೆ ಏಕ ರೂಪದಲ್ಲಿ ದೊರೆಯುತ್ತಿಲ್ಲವೆಂಬ ಆರೋಪ ಕೇಳಿ ಬರುತ್ತಿವೆ. ಕೆಲವು ರೈತರಿಗೆ 2-3 ಕಂತಿನ ಹಣ ಜಮೆಯಾಗಿದ್ದು, ಕೆಲವು ರೈತರ ಖಾತೆಗೆ ಇದುವರೆಗೂ ಹಣ ಜಮೆಯಾಗದಿರುವುದು ರೈತರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ 2019ರ ಲೋಕಸಭೆ ಚುನಾವಣೆಗೂ ಮೊದಲು ತಮ್ಮ ಸರ್ಕಾರದ ಮೊದಲ ಅವಧಿಯ ಕೊನೆಯ ಬಜೆಟ್‌ನಲ್ಲಿ ದೇಶದ ಎಲ್ಲ ರೈತರಿಗೂ ವಾರ್ಷಿಕ 6 ಸಾವಿರ ರೂ.ನೀಡುವ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್‌ ಯೋಜನೆಯನ್ನು ಘೊಷಣೆ ಮಾಡಿದರು. ಅದರಂತೆ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗುವಂತೆ ಪ್ರತಿ ನಾಲ್ಕು ತಿಂಗಳಿಗೆ 2 ಸಾವಿರ ರೂ.ನಂತೆ ವರ್ಷದಲ್ಲಿ ಮೂರು ಕಂತಿನಲ್ಲಿ ಹಣ ನೀಡಲಿದೆ. ಪ್ರತಿ ರೈತರಿಗೂ ವಾರ್ಷಿಕ ಆರು ಸಾವಿರ ರೂ.ವನ್ನು 3 ಕಂತಿನಲ್ಲಿ ನೀಡಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ರಾಜ್ಯದ ರೈತರಿಗೆ ಬಿಡುಗಡೆ ಮಾಡುವ ಮೂರು ಕಂತಿನ ಹಣ ಬಿಡುಗಡೆಯಾಗಿದ್ದು, ಆದರೆ, ರಾಜ್ಯದ ಬಹುತೇಕ ರೈತರಿಗೆ ಮಾತ್ರ ತಲುಪಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ರಾಜ್ಯದಲ್ಲಿ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್‌ ಯೋಜನೆಗೆ 52.53 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಮೂಲಗಳ ಪ್ರಕಾರ ಪ್ರತ್ಯೇಕವಾಗಿ ಮೂರು ಕಂತುಗಳಲ್ಲಿ ರೈತರ ಖಾತೆಗಳಿಗೆ ಹಣ ಜಮೆ ಮಾಡಿದ್ದು, ಮೊದಲ ಕಂತಿನಲ್ಲಿ 40.82 ಲಕ್ಷ ರೈತರು, ಎರಡನೇ ಕಂತಿನಲ್ಲಿ 33.70 ಲಕ್ಷ ರೈತರು, ಮೂರನೇ ಕಂತಿನಲ್ಲಿ 3.65 ಲಕ್ಷ ರೈತರಿಗೆ ಹಣ ತಲುಪಿಸಲಾಗಿದೆ. ಅದೇ ರೀತಿ ಕೇಂದ್ರ ಸರ್ಕಾರದ ಯೋಜನೆಗೆ ಬೆಂಬಲವಾಗಿ ರಾಜ್ಯ ಸರ್ಕಾರವೂ 4 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೊದಲ ದಿನವೇ ಘೋಷಣೆ ಮಾಡಿದರು. ಅದರಂತೆ ರಾಜ್ಯ ಸರ್ಕಾರದ ಪಾಲಿನ ಮೊದಲ ಕಂತಿನ 2 ಸಾವಿರ ರೂ.ಗಳನ್ನು 24.45 ಲಕ್ಷ ರೈತರಿಗೆ ವಿಸ್ತರಣೆ ಮಾಡಲಾಗಿದೆ.

ರೈತರಲ್ಲಿ ಗೊಂದಲ ಸೃಷ್ಟಿ: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ವ್ಯಾಪ್ತಿಗೆ ಒಳಪಡಲು ರೈತರು ಆಧಾರ್‌, ಪಹಣಿ ಪತ್ರ ಹಾಗೂ ಬ್ಯಾಂಕ್‌ ಖಾತೆ ನಂಬರನ್ನು ಕೃಷಿ ಇಲಾಖೆಗೆ ರೈತರು ಸ್ವಯಂ ದೃಢೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ 52.53 ಲಕ್ಷ ರೈತರು ಈ ಯೋಜನೆ ಅಡಿಯಲ್ಲಿ ದಾಖಲೆಗಳನ್ನು ಸಲ್ಲಿಸಿ ಸ್ವಯಂ ದೃಢೀಕರಣ ಪತ್ರ ಸಲ್ಲಿಸಿದ್ದಾರೆ. ರಾಜ್ಯ ಕೃಷಿ ಇಲಾಖೆಗೆ ಸಲ್ಲಿಕೆಯಾದ ಅರ್ಜಿಗಳನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುತ್ತದೆ. ರೈತರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ಅವರ ಖಾತೆಗೆ ಕೇಂದ್ರ ಸರ್ಕಾರದಿಂದಲೇ ನೇರವಾಗಿ ಹಣ ಬಿಡುಗಡೆಯಾಗುತ್ತದೆ. ಈ ಯೋಜನೆ ವ್ಯಾಪ್ತಿಗೆ ಒಳಪಡಲು ರೈತರಿಗೆ ಯಾವುದೇ ಆದಾಯ ಮಿತಿ, ಸಣ್ಣ, ಅತಿ ಸಣ್ಣ ಅಥವಾ ದೊಡ್ಡ ರೈತರು ಎಂಬ ವ್ಯತ್ಯಾಸವಿಲ್ಲದೇ ಎಲ್ಲ ರೈತರೂ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ.

ಆದರೆ, ಸರ್ಕಾರ ಸೂಚಿಸಿರುವ ಎಲ್ಲ ದಾಖಲೆಗಳನ್ನು ಸಲ್ಲಿಸಿ ಆರು ತಿಂಗಳು ಕಳೆದರೂ ಕೆಲವು ರೈತರಿಗೆ ಒಂದು ಕಂತಿನ ಹಣವೂ ಬಾರದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೇ ಸಮಯದಲ್ಲಿ ದಾಖಲೆ ಸಲ್ಲಿಸಿರುವ ಕೆಲವು ರೈತರಿಗೆ ಎರಡು ಕಂತಿನ ಹಣ ಜಮೆಯಾಗಿದ್ದು, ಕೆಲವು ರೈತರಿಗೆ ಯಾವುದೇ ಹಣ ಬಾರದಿರುವುದು ರೈತರಲ್ಲಿಯೇ ಗೊಂದಲ ಉಂಟಾಗಲು ಕಾರಣವಾಗಿದೆ. ಈ ಬಗ್ಗೆ ರೈತರು ಬ್ಯಾಂಕ್‌ಗಳನ್ನು ಸಂಪರ್ಕಿಸಿದರೂ, ಬ್ಯಾಂಕ್‌ನವರು ಕೃಷಿ ಇಲಾಖೆಯ ಕಡೆಗೆ ಬೆರಳು ತೋರಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಕೃಷಿ ಇಲಾಖೆಯ ದಾಖಲೆಗಳೇ ಎಲ್ಲ ರೈತರಿಗೂ ಹಣ ಬಿಡುಗಡೆಯಾಗದಿರುವುದಕ್ಕೆ ಪುಷ್ಠಿ ನೀಡುವಂತಿವೆ.

ಕೆಲವು ರೈತರಿಗೆ ಈಗಾಗಲೇ ಮೂರು ಕಂತಿನ ಹಣ ಜಮೆಯಾಗಿದ್ದು, ಕೇಂದ್ರ ಸರ್ಕಾರದ ಪಾಲಿನ ಎರಡು ಕಂತಿನ ನಾಲ್ಕು ಸಾವಿರ ಹಾಗೂ ರಾಜ್ಯ ಸರ್ಕಾರದ ಒಂದು ಕಂತಿನ ಎರಡು ಸಾವಿರ ರೂ. ಜಮೆಯಾಗಿದೆ. ಆದರೆ, ಒಮ್ಮೆ ದಾಖಲೆ ಸಲ್ಲಿಸಿದ ರೈತರಿಗೆ ಏಕಕಾಲಕ್ಕೆ ಹಣ ಜಮೆಯಾಗದೇ ಇರುವುದು ಸರ್ಕಾರದ ನಡವಳಿಕೆಯ ಬಗ್ಗೆ ರೈತರಿಗೆ ಅನುಮಾನ ಮೂಡುವಂತೆ ಮಾಡಿದೆ. ಪ್ರತಿ ಕಂತಿನ ಹಣ ಬಿಡುಗಡೆ ಮಾಡುವಾಗ ರೈತರ ಸಂಖ್ಯೆ ವ್ಯತ್ಯಾಸವಾಗಿರುವುದು ಕೂಡ ಸಂಶಯಕ್ಕೆ ಕಾರಣವಾಗಿದೆ.

ಸಾಲಮನ್ನಾ ರೈತರೂಮತ್ತೆ ಅರ್ಜಿ ಸಲ್ಲಿಸಬೇಕು: ಮೈತ್ರಿ ಸರ್ಕಾರ ಸಾಲ ಮನ್ನಾ ಯೋಜನೆ ಘೋಷಣೆ ಮಾಡಿ, ಅದರ ಲಾಭ ಪಡೆಯಲು ರೈತರಿಂದ ಪಹಣಿ ಪತ್ರ, ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಖಾತೆಯ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಲಾಗಿತ್ತು. ಅದರಂತೆ ಸುಮಾರು 45 ಲಕ್ಷ ರೈತರು ಸಾಲ ಮನ್ನಾ ಯೋಜನೆಗೆ ಆಧಾರ್‌ ಲಿಂಕ್‌ ಹೊಂದಿರುವ ಬ್ಯಾಂಕ್‌ ಖಾತೆ ಹಾಗೂ ಜಮೀನು ಹೊಂದಿರುವ ಬಗ್ಗೆ ಪಹಣಿ ಪತ್ರಗಳನ್ನು ಸಲ್ಲಿಸಿದ್ದರು. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ಮತ್ತೆ ಹೊಸದಾಗಿ ರೈತರು ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದ್ದು, ರೈತರು ಬ್ಯಾಂಕ್‌ಗೆ ಅಲೆದಾಡುವಂತೆ ಮಾಡಿದೆ.

ಬದಲಾದ ನಿಮಯ: ಆರಂಭರದಲ್ಲಿ ಎಲ್ಲ ರೈತರಿಗೂ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಅನ್ವಯವಾಗುತ್ತದೆ ಎಂದು ಘೋಷಿಸಲಾಗಿತ್ತು. ಆದರೆ, ಜೂನ್‌ ತಿಂಗಳಲ್ಲಿ ನಿಯಮಗಳನ್ನು ಬದಲಾಯಿಸಲಾಗಿದ್ದು, ಈ ಯೋಜನೆ ವ್ಯಾಪ್ತಿಗೊಳಪಡಲು ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಈ ಯೋಜನೆಯ ನಿಯಮದ ಪ್ರಕಾರ ತೆರಿಗೆ ಕಟ್ಟುವ, ಕನಿಷ್ಠ 10 ಸಾವಿರ ರೂ. ಪಿಂಚಣಿ ಪಡೆಯುವ, ಸರ್ಕಾರಿ ನೌಕರರಾಗಿರಬಾರದು, ಸಾಂವಿಧಾನಿಕ ಹುದ್ದೆಯಲ್ಲಿರಬಾರದು. ಎಂಜನಿಯರ್, ಲಾಯರ್, ಚಾರ್ಟೆಡ್‌ ಅಕೌಂಟೆಂಟ್‌ ಆಗಿದ್ದು, ರೈತರಾಗಿದ್ದರೂ ಈ ಯೋಜನೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಷರತ್ತುಗಳನ್ನು ವಿಧಿಸಲಾಗಿದೆ.

ಕೃಷಿ ಸಮ್ಮಾನ್‌ ಯೋಜನೆ ಫ‌ಲಾನುಭವಿಗಳು
ನೋಂದಾಯಿತ ರೈತರು- 52,53,000
ನೋಂದಾಯಿತರಲ್ಲಿ 1ನೇ ಕಂತಿನ ಹಣ ಪಡೆದವರು- 40,82,153
ನೋಂದಾಯಿತರಲ್ಲಿ 2ನೇ ಕಂತಿನ ಹಣ ಪಡೆದವರು- 33,,70,351
ನೋಂದಾಯಿತರಲ್ಲಿ – 3ನೇ ಕಂತು ಪಡೆದ ರೈತರು- 3,65,754
ರಾಜ್ಯ ಸರ್ಕಾರದ 1ನೇಕಂತು ಪಡೆದ ರೈತರು- 24,45,669

ಯೋಜನೆಯನ್ನು ರೈತರಿಗೆ ಹಂತ ಹಂತವಾಗಿ ತಲುಪಿಸಲಾಗುತ್ತಿದೆ. ದಾಖಲೆ ಸಲ್ಲಿಸಿದರೂ, ರೈತರ ಖಾತೆಗೆ ಹಣ ಜಮೆಯಾಗದಿದ್ದರೆ, ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ತಾವು ಸಲ್ಲಿಸಿರುವ ದಾಖಲೆಗಳು ಸರಿಯಾಗಿವೆಯೋ ಇಲ್ಲವೋ ಎಂದು ಪರಿಶೀಲಿಸಿಕೊಳ್ಳಬೇಕು. ಎಲ್ಲ ರೈತರಿಗೂ ಈ ಯೋಜನೆ ಲಾಭ ದೊರಕಿಸಿಕೊಡಲಾಗುತ್ತಿದೆ.
-ಬಿ.ವೈ. ಶ್ರೀನಿವಾಸ್‌, ಕೃಷಿ ನಿರ್ದೇಶಕರು

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಒಳ್ಳೆಯದೇ. ಕೇಂದ್ರ ಸರ್ಕಾರ ನಿಯಮಿತವಾಗಿ ಹಣ ಬಿಡುಗಡೆ ಮಾಡಬೇಕು. ರಾಜ್ಯದ ಎಲ್ಲ ರೈತರ ದಾಖಲೆಗಳು ಈ ಸ್ವತ್ತು ಪೋರ್ಟಲ್‌ನಲ್ಲಿ ಲಭ್ಯವಿದೆ. ಆದರೆ, ರಾಜ್ಯ ಸರ್ಕಾರ ಮತ್ತೆ ದಾಖಲೆಗಳನ್ನು ಕೇಳುವ ಮೂಲಕ ಅನಗತ್ಯ ವಿಳಂಬ ತಂತ್ರ ಅನುಸರಿಸುತ್ತಿದೆ.
-ಸಚಿನ್‌ ಮೀಗಾ, ಕೆಪಿಸಿಸಿ ಕಿಸಾನ್‌ ಘಟಕದ ಅಧ್ಯಕ್ಷ

ಕಿಸಾನ್‌ ಸಮ್ಮಾನ್‌ ಯೋಜನೆ ಎಲ್ಲ ರೈತರಿಗೂ ಬರುತ್ತಿಲ್ಲ. ಕೆಲವು ರೈತರಿಗೆ ಒಂದು ಕಂತು, ಕೆಲವರಿಗೆ ಎರಡು ಕಂತಿನ ಹಣ ಬಿಡುಗಡೆಯಾಗಿದ್ದು, ಕೆಲವರಿಗೆ ಒಂದು ಕಂತಿನ ಹಣವೂ ಬಂದಿಲ್ಲ. ಇದರಿಂದ ರೈತರಲ್ಲಿ ಗೊಂದಲ ಉಂಟಾಗುವಂತೆ ಮಾಡಿದೆ.
-ಸುಭಾಸ್‌, ರೈತ ಮುಖಂಡ, ಬಾಗಲಕೋಟೆ

Comments are closed.