ಕರ್ನಾಟಕ

ಬೈಕಿನಲ್ಲಿ ಯುವತಿಯೊಂದಿಗೆ ಹೋಗುತ್ತಿದ್ದ ರೌಡಿ ಶೀಟರ್‌ನ ಕೊಚ್ಚಿ ಕೊಚ್ಚಿ ಕೊಲೆ

Pinterest LinkedIn Tumblr


ಬೆಂಗಳೂರು: ಮಟ ಮಟ ಮಧ್ಯಾಹ್ನ ಮಾಲ್ ಮುಂದೆ ರೌಡಿ ಶೀಟರ್‌ನನ್ನ ಲಾಂಗ್, ಮಚ್ಚಿನಿಂದ ಬರ್ಬರವಾಗಿ ಕೊಲೆಗೈದ ಭಯಾನಕ ಘಟನೆ ಬೆಂಗಳೂರಿನ ಮಹದೇವಪುರದಲ್ಲಿ ನಡೆದಿದೆ.

ಮಾರತಹಳ್ಳಿ ಪೊಲೀಸ್ ಠಾಣೆಯ ಮಂಜುನಾಥ್ ಅಲಿಯಾಸ್ ಮಂಜು (28) ಕೊಲೆಯಾದ ರೌಡಿ ಶೀಟರ್. ಫೀನಿಕ್ಸ್ ಮಾಲ್ ಮುಂದೆ ಇಂದು ಮಧ್ಯಾಹ್ನ ಘಟನೆ ನಡೆದಿದೆ. ಮಂಜುನಾಥ್ ಯುವತಿಯೊಂದಿಗೆ ಜಾಲಿ ರೈಡ್ ಹೋಗುತ್ತಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿ, ಕೊಲೆ ಮಾಡಿದ್ದಾರೆ.

ಮಂಜುನಾಥ್ ಕಳೆದ ಒಂದೂವರೆ ವರ್ಷದ ಹಿಂದೆ ವರ್ತೂರು ಕೋಡಿ ಬಳಿ ನಡೆದ ಗ್ಯಾಂಗ್ ಅಟ್ಯಾಕ್‍ನಲ್ಲಿ ರೌಡಿ ಶೀಟರ್ ಸೋಮನನ್ನು ಬಚಾವ್ ಮಾಡಿದ್ದ. ಅಂದು ತಪ್ಪಿಸಿಕೊಂಡಿದ್ದ ಮಂಜ ಇಂದು ಮಧ್ಯಾಹ್ನ ಫೀನಿಕ್ಸ್ ಮಾಲ್ ಮುಂಭಾಗದಲ್ಲಿ ಸಿಕ್ಕಿದ್ದ. ಮಂಜು ತನ್ನ ರಾಯಲ್ ಎನ್‍ಫೀಲ್ಡ್ ಬೈಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ಜಾಲಿ ರೈಡ್ ಹೋಗುತ್ತಿದ್ದ. ಈ ವೇಳೆ ಆತನನ್ನು ಹಿಂಬಾಲಿಸಿಕೊಂಡು ಡಿಯೋ ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಫೀನಿಕ್ಸ್ ಮಾಲ್ ಬಳಿ ರಾಯಲ್ ಎನ್‍ಫೀಲ್ಡ್ ಬೈಕ್ ಗೆ ಡಿಕ್ಕಿ ಹೊಡೆದು ನೆಲಕ್ಕೆ ಉರುಳಿಸಿದ್ದಾರೆ.

ಹೆಲ್ಮೆಟ್ ಹಾಕಿದ್ದ ದುಷ್ಕರ್ಮಿಗಳು ಮಂಜುನಾಥ್ ಮೇಲೆ ಏಕಾಏಕಿ ದಾಳಿಗೆ ಮುಂದಾದರು. ಯುವತಿ ಹಾಗೂ ಬೈಕ್ ಅನ್ನು ನಡು ರಸ್ತೆಯಲ್ಲೇ ಬಿಟ್ಟು ಮಂಜುನಾಥ್ ತಪ್ಪಿಸಿಕೊಳ್ಳಲು ಯತ್ನಿಸಿದ. ಆದರೆ ಇದಕ್ಕೆ ಅವಕಾಶ ಕೊಡದ ದುಷ್ಕರ್ಮಿಗಳು ಮಂಜುನಾಥ್‍ನನ್ನು ಫೀನಿಕ್ಸ್ ಮಾಲ್ ಮುಂದೆ ಲಾಂಗ್, ಮಚ್ಚುಗಳಿಂದ ಕೊಚ್ಚಿ, ಕೊಚ್ಚಿ ಬರ್ಬರವಾಗಿ ಕೊಲೆಗೈದಿದ್ದಾರೆ. ಮಂಜುನಾಥ್ ಮುಖದ ಮೇಲೆ ಮಚ್ಚಿನಿಂದ ದಾಳಿ ಮಾಡಿದ ದುಷ್ಕರ್ಮಿಗಳು ಕಣ್ಣು ಗುಡ್ಡೆಗಳು ಹೊರ ಬಿದ್ದರೂ ದಾಳಿಯನ್ನು ನಿಲ್ಲಿಸಲಿಲ್ಲ. ಮಂಜುನಾಥ್ ಸಾವನ್ನಪ್ಪಿದ್ದಾನೆ ಎನ್ನುವುದು ಖಚಿತವಾದ ಮೇಲೆ ಕೊಲೆಗೆ ಬಳಸಿದ್ದ ಲಾಂಗ್ ಅನ್ನು ಶವದ ಮೇಲೆ ಇಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ದೃಶ್ಯವನ್ನು ಕಂಡ ಜನರು ಬೆಚ್ಚಿಬಿದ್ದಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ನಡೆಸಿದ್ದಾರೆ.

ಮಂಜುನಾಥ್ ಮತ್ತು ರೌಡಿಶೀಟರ್ ರೋಹಿತ್ ನಡುವೆ ದ್ವೇಷ ಇತ್ತು. ಹೀಗಾಗಿ ರೋಹಿತ್ ಗ್ಯಾಂಗ್ ಮಂಜುನಾಥ್‍ನನ್ನು ಕೊಲೆ ಮಾಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಇನ್ನೊಂದೆಡೆ ಯುವತಿ ವಿಚಾರಕ್ಕೆ ಕೊಲೆ ಆಗಿರಬಹುದಾ ಎನ್ನುವ ಅನುಮಾನ ಶುರುವಾಗಿದೆ. ಹೀಗಾಗಿ ಪೊಲೀಸರು ಈ ಪ್ರಕರಣವನ್ನು ಎರಡೂ ಆ್ಯಂಗಲ್‍ನಲ್ಲಿ ತನಿಖೆ ನಡೆಸುತ್ತಿದ್ದಾರೆ.

Comments are closed.