ಕರ್ನಾಟಕ

48 ದಿನಗಳ ತಿಹಾರ್ ಜೈಲ್ ಸೆರೆವಾಸದಿಂದ ಹೊರ ಬಂದ ಡಿಕೆಶಿ!

Pinterest LinkedIn Tumblr


ನವದೆಹಲಿ: ನನಗೋಸ್ಕರ ರಸ್ತೆಗಿಳಿದು ಹೋರಾಟ ಮಾಡಿದವರಿಗೆ ನನ್ನದೊಂದು ದೊಡ್ಡ ನಮಸ್ಕಾರ ಎಂದು ಮಾಜಿ ಸಚಿವರ ಡಿ.ಕೆ.ಶಿವಕುಮಾರ್ ಬೆಂಬಲಿಗರಿಗೆ ಧನ್ಯವಾದ ತಿಳಿಸಿದರು.

ತಿಹಾರ್ ಜೈಲಿನಿಂದ ಹೊರ ಬಂದು ಮಾತನಾಡಿದ ಮಾಜಿ ಸಚಿವರು, ನನ್ನ ಬಂಧುಗಳು, ಕಾಂಗ್ರೆಸ್ ಕಾರ್ಯಕರ್ತರು, ನನ್ನ ಹಿತೈಶಿಗಳು, ನಾಯಕರು ನನಗಾಗಿ ಹೋರಾಡಿದರು. ಕೆಲವರು ಪೂಜೆ ಮಾಡಿ ಬೇಗ ಬಿಡುಗಡೆಯಾಗುವಂತೆ ದೇವರಲ್ಲಿ ಪಾರ್ಥನೆ ಸಲ್ಲಿಸಿದರು. ಅವರಿಗೆ ಹಾಗೂ ದೆಹಲಿ ಮತ್ತು ಬೆಂಗಳೂರಿನಲ್ಲಿ ನನ್ನ ಪರ ವಾದ ಮಂಡಿಸಿದ ವಕೀಲರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ನನ್ನಿಂದ ಅನೇಕ ಜನ ಕಣ್ಣೀರಿಟ್ಟಿದ್ದಾರೆ, ಕಷ್ಟ ಎದುರಿಸಿದ್ದಾರೆ, ಸಂತೋಷಪಟ್ಟಿದ್ದಾರೆ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ. ಮುಖ್ಯ ವಿಚಾರವಾಗಿ ನಾನು ವಕೀಲರನ್ನು ನಾಳೆ ಭೇಟಿಯಾಗಬೇಕಿದೆ. ಆಮೇಲೆ ಉಳಿದ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಜಾಮೀನು ಮಂಜೂರು ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ತಿಹಾರ್ ಜೈಲಿನಿಂದ ರಾತ್ರಿ 9:30ರ ಸುಮಾರಿಗೆ ಹೊರ ಬಂದಿದ್ದಾರೆ. ಈ ಮೂಲಕ ಮಾಜಿ ಸಚಿವರ 48 ದಿನಗಳ ತಿಹಾರ್ ಜೈಲ್ ಸೆರೆವಾಸ ಅಂತ್ಯವಾಗಿದೆ. ಜೈಲಿನಿಂದ ಹೊರ ಬಂದ ಮಾಜಿ ಸಚಿವರನ್ನು ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿದರು.

ಡಿ.ಕೆ.ಶಿವಕುಮಾರ್ ಅವರು ಗುರುವಾರ ವಕೀರಲನ್ನು ಭೇಟಿ ಮಾಡಲಿದ್ದಾರೆ. ಹೀಗಾಗಿ ಇಂದು ದೆಹಲಿಯ ಸಂಸದ ಡಿ.ಕೆ.ಸುರೇಶ್ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಗಳಿವೆ.

ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ಸಂಬಂಧ ಗುರುವಾರ (ಅಕ್ಟೋಬರ್ 17)ರಂದು ಸುಮಾರು 3 ಗಂಟೆಗೂ ಅಧಿಕ ಕಾಲ ವಾದ-ಪ್ರತಿವಾದ ಆಲಿಸಿದ ದೆಹಲಿ ಹೈಕೋರ್ಟ್ ನ್ಯಾ. ಸುರೇಶ್ ಕುಮಾರ್ ಕೈಟ್ ಇಂದಿಗೆ ಆದೇಶವನ್ನು ಕಾಯ್ದಿರಿಸಿದ್ದರು. ಇಂದು ಬೆಳಗ್ಗೆ ಡಿಕೆ ಶಿವಕುಕಮಾರ್ ಅವರನ್ನು ತಿಹಾರ್ ಜೈಲಿನಲ್ಲಿ ಸೋನಿಯಾ ಗಾಂಧಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಭೇಟಿ ವೇಳೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಸೋನಿಯಾ ಜೊತೆ ಆಗಮಿಸಿದ್ದರು.

Comments are closed.