ಬೆಂಗಳೂರು: ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕದ 15 ವಿಧಾನಸಭೆಗೆ ನಡೆಯಬೇಕಿದ್ದ ಉಪಚುನಾವಣೆ ದಿನಾಂಕವನ್ನು ತಡೆಹಿಡಿಯಲಾಗಿತ್ತು. ಇದೀಗ ಈ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ದಿನಾಂಕವನ್ನು ನಿಗದಿ ಮಾಡಿದೆ.
ಡಿಸೆಂಬರ್ 5ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 9ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ನವೆಂಬರ್ 11ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದೆ. ನವೆಂಬರ್ 19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 21ರಂದು ನಾಮಪತ್ರ ಹಿಂಪಡೆದುಕೊಳ್ಳಲು ಕೊನೇ ದಿನವಾಗಿದೆ. ಒಟ್ಟಾರೆ ಡಿಸೆಂಬರ್ 11ರೊಳಗೆ ಚುನಾವಣಾ ಪ್ರಕ್ರಿಯೆ ಸಂಪೂರ್ಣ ಮುಕ್ತಾಯಗೊಳ್ಳಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಯಾವ ಕ್ಷೇತ್ರಗಳಿಗೆ ಉಪಚುನಾವಣೆ
ಅಥಣಿ
ಕಾಗವಾಡ
ಗೋಕಾಕ್
ಯಲ್ಲಾಪುರ
ಹಿರೇಕೆರೂರು
ರಾಣೆಬೆನ್ನೂರು
ವಿಜಯನಗರ
ಚಿಕ್ಕಬಳ್ಳಾಪುರ
ಕೆ.ಆರ್.ಪುರ
ಯಶವಂತಪುರ
ಮಹಾಲಕ್ಷ್ಮೀ ಲೇಔಟ್
ಶಿವಾಜಿನಗರ
ಹೊಸಕೋಟೆ
ಕೆ.ಆರ್.ಪೇಟೆ
ಹುಣಸೂರು
ಈ 15 ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಉಪಚುನಾವಣೆ ನಡೆಸುವುದಾಗಿ ಈ ಹಿಂದೆಯೇ ಆಯೋಗ ಘೋಷಿಸಿತ್ತು. ಆದರೆ, 15 ಕ್ಷೇತ್ರಗಳ ಶಾಸಕರ ಅನರ್ಹತೆ ಅರ್ಜಿ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಬಗ್ಗೆ ಕೂಲಂಕಷ ವಿಚಾರಣೆ ಆಗಬೇಕಿರುವುದರಿಂದ ಹಾಗೂ ಚುನಾವಣೆ ಮುಂದೂಡಿಕೆಗೆ ಆಯೋಗದ ಯಾವುದೇ ಅಭ್ಯಂತರ ಇಲ್ಲದಿದ್ದಾಗ ಸುಪ್ರೀಂಕೋರ್ಟ್ ಚುನಾವಣೆಯನ್ನು ಮುಂದೂಡಿತ್ತು. ಅದರಂತೆ ಇದೀಗ ಆಯೋಗ ಉಪಚುನಾವಣೆಗೆ ಮತ್ತೊಮ್ಮೆ ಹೊಸ ದಿನಾಂಕವನ್ನು ಪ್ರಕಟಿಸಿದೆ.
Comments are closed.