ಒಂದೆಡೆ ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾಗಿದ್ದರೇ, ಇನ್ನೊಂದೆಡೆ ಅತೃಪ್ತರಾಗಿ ಬಳಿಕ ಅನರ್ಹರಾದ ಶಾಸಕರ ಭವಿಷ್ಯ ಮುಗಿಯಿತು ಎಂಬರ್ಥ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿದೆ. ಈ ಎಲ್ಲ ವಿಚಾರಗಳ ಕುರಿತು ಜೆಡಿಎಸ್ನ ಅನರ್ಹ ಶಾಸಕ ಎಚ್.ವಿಶ್ವನಾಥ್ ಮಾತನಾಡಿದ್ದು, ಪರೋಕ್ಷವಾಗಿ ಮಾಜಿ ಸಚಿವ ಸಾ.ರಾ.ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನರ್ಹ ಶಾಸಕ ಎಚ್.ವಿಶ್ವನಾಥ್, ನಮ್ಮ ರಾಜಕೀಯ ಭವಿಷ್ಯಮುಗಿಯಿತು ಎಂಬಂತೆ ಬಿಂಬಿಸಬೇಡಿ. ನಮಗೆ ಸುಪ್ರೀಂ ಕೋರ್ಟನಲ್ಲಿ ನ್ಯಾಯ ಸಿಗುವ ಭರವಸೆ ಇದೆ ಎಂದಿದ್ದಾರೆ. ಅಲ್ಲದೇ ನಾನು ಜೆಡಿಎಸ್ಗೆ ವಿಷ ಇಟ್ಟಂತೆ ಎಂಬಂತೆ ಕೆಲ ನಾಯಕರು ಮಾತನಾಡಿದ್ದಾರೆ. ಆದರೆ ಜೆಡಿಎಸ್ಗೆ ನಿಜವಾಗಿ ವಿಷ ಇಟ್ಟಿದ್ದು ಯಾರು ಎಂಬುದನ್ನು ರಾಜ್ಯದ ಜನರು ಅರಿತಿದ್ದಾರೆ ಎಂದು ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ಅಲ್ಲದೇ ಎಚ್ಡಿಕೆಯೊಂದಿಗೆ ಸದಾಕಾಲ ಕಾಣಿಸಿಕೊಳ್ಳುತ್ತಿದ್ದ ಶಿವರಾಮೇಗೌಡರಂತಹ ನಾಯಕರೆಲ್ಲ ಈಗ ಎಲ್ಲಿ ಹೋದ್ರು ಎಂದು ಪ್ರಶ್ನಿಸಿದ್ದಲ್ಲದೇ ಎಚ್ಡಿ ದೇವೆಗೌಡರ ಬಗ್ಗೆ ನನಗೆ ಈಗಲೂ ಗೌರವವಿದೆ. ನಾವು ದುಡ್ಡಿಗಾಗಿ ಪಕ್ಷ ಬಿಟ್ಟಿಲ್ಲ. ಬದಲಾಗಿ ಕಾಂಗ್ರೆಸ್-ಜೆಡಿಎಸ್ನಲ್ಲಿ ನಮ್ಮನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ ಎಂದು ಪಕ್ಷ ತ್ಯಜಿಸಿದ್ದೇವೆ ಎಂದಿದ್ದಾರೆ.
ಸಾ,ರಾ.ಮಹೇಶ್ ವಿರುದ್ಧ ಪರೋಕ್ಷವಾಗಿ ಗಂಭೀರ ಆರೋಪ ಮಾಡಿದ ವಿಶ್ವನಾಥ್, ಬ್ಲೂಫಿಲಂ ತಯಾರಿಸಿ ಮಾರುತ್ತಿದ್ದವರೆಲ್ಲ ಈಗ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ನಾಯಕನ ಮನೆಯಲ್ಲಿ ಟೀ-ಕಾಫಿ ಮಾಡ್ತಿದ್ದವರೆಲ್ಲ ರಾಜಕೀಯಕ್ಕೆ ಬಂದು ನನ್ನನ್ನೇ ಟೀಕಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
Comments are closed.