ಬೆಂಗಳೂರು (ಸೆಪ್ಟೆಂಬರ್.22); ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಆಯೋಗ ಉಪ-ಚುನಾವನೆಯನ್ನು ಘೋಷಣೆ ಮಾಡಿರುವ ಹಿನ್ನೆಲೆ, ತನ್ನ ಸರ್ಕಾರವನ್ನು ಕೆಡವಿದ ಅನರ್ಹ ಶಾಸಕರನ್ನು ಸೋಲಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವತಃ ಅಖಾಡಕ್ಕೆ ಧುಮುಕುವ ಸೂಚನೆ ನೀಡಿದ್ದಾರೆ.
ಕಳೆದ ಕೆಲ ದಿನಗಳಿಂದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಮಾಜಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಹಾಗೂ ಶಾಸಕ ಜಿ.ಟಿ. ದೇವೇಗೌಡ ಅವರಿಗೆ ಟಾಂಗ್ ನೀಡುವ ಸಲುವಾಗಿ ಹಾಗೂ ಮೈಸೂರಿನ ಭಾಗದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಸಭೆ ನಡೆಸುತ್ತಲೇ ಇದ್ದಾರೆ. ಈ ನಡುವೆ ಚುನಾವಣಾ ಆಯೋಗ ಶನಿವಾರ ಉಪ-ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡುತ್ತಿದ್ದಂತೆ, ರಾಜಧಾನಿಗೆ ಆಗಮಿಸಿರುವ ಕುಮಾರಸ್ವಾಮಿ ಸೋಮವಾರ ಬೆಂಗಳೂರಿನ ಯಶವಂತಪುರ ಹಾಗೂ ಮಹಾಲಕ್ಷ್ಮಿ ಲೇಔಟ್ನಲ್ಲಿ ಮುಖಂಡರ ಸಭೆ ನಡೆಸಲು ಮುಂದಾಗಿದ್ದಾರೆ.
ಯಶವಂತಪುರ ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ಹಾಗೂ ಮಹಾಲಕ್ಷ್ಮಿ ಲೇಔಟ್ ಜೆಡಿಎಸ್ ಶಾಸಕ ಕೆ. ಗೋಪಾಲಯ್ಯ ಕುಮಾರಸ್ವಾಮಿ ನೇತೃತ್ವದ ಕಳೆದ ಮೈತ್ರಿ ಸರ್ಕಾರವನ್ನು ಕೆಡವುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಈ ಇಬ್ಬರು ನಾಯಕರನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ ಮಾಜಿ ಸಿಎಂ ಕುಮಾರಸ್ವಾಮಿ ಈ ಎರಡೂ ಕ್ಷೇತ್ರದ ಮುಖಂಡರ ಜೊತೆ ನಾಳೆ ಜೆಪಿ ನಗರದ ಜೆಡಿಎಸ್ ಭವನದಲ್ಲಿ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಗಳು ಹಾಗೂ ಕ್ಷೇತ್ರದ ಮುಂಡರ ಜೊತೆ ಮಾಜಿ ಸಿಎಂ ಚರ್ಚೆ ನಡೆಸಲಿದ್ದು, ಪಕ್ಷವನ್ನು ಬೂತ್ ಮಟ್ಟದಿಂದ ಬಲ ಪಡಿಸಲು ಮತ್ತು ಅನರ್ಹ ಶಾಸಕರ ಸೋಲಿಗೆ ರಣತಂತ್ರ ಹೆಣೆಯುವ ಸಾಧ್ಯತೆ ಇದೆ. ಅಲ್ಲದೆ, ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕುಮಾರಸ್ವಾಮಿ ತನ್ನ ರಾಜಕೀಯ ಚಟುವಟಿಕೆಗೆ ಈ ಎರಡೂ ಕ್ಷೇತ್ರಗಳನ್ನೇ ಮೊದಲು ಆಯ್ಕೆ ಮಾಡಿಕೊಂಡಿರುವುದು ಸಹ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಪಕ್ಷಾಂತರ ಕಾಯ್ದೆ ಅನ್ವಯ ಕಳೆದ ಜುಲೈ ತಿಂಗಳಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ 17 ಶಾಸಕರನ್ನು ಉಪ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಿದ್ದರು. ಈ 17 ಕ್ಷೇತ್ರಗಳ ಪೈಕಿ ಇದೀಗ 15 ಕ್ಷೇತ್ರಗಳಿಗೆ ಚುನಾವಣೆಯನ್ನು ಘೋಷಣೆ ಮಾಡಲಾಗಿದೆ. ಆದರೆ, ಅನರ್ಹ ಶಾಸಕರು ತಮ್ಮ ವಿರುದ್ದ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ. ಅಕಸ್ಮಾತ್ ಕೋರ್ಟ್ ಸ್ಪೀಕರ್ ತೀರ್ಪನ್ನು ಎತ್ತಹಿಡಿದರೆ, ಅನರ್ಹರು ತಮ್ಮ ಕುಟುಂಬದಲ್ಲೇ ಯಾರನ್ನಾದರೂ ಚುನಾವಣೆಗೆ ನಿಲ್ಲಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
Comments are closed.