ಕರ್ನಾಟಕ

ತಮ್ಮ ಸರ್ಕಾರ ಬೀಳಿಸಿದವರ ಸೋಲಿಗೆ ಕುಮಾರಸ್ವಾಮಿ ರಣತಂತ್ರ

Pinterest LinkedIn Tumblr


ಬೆಂಗಳೂರು (ಸೆಪ್ಟೆಂಬರ್​.22); ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಆಯೋಗ ಉಪ-ಚುನಾವನೆಯನ್ನು ಘೋಷಣೆ ಮಾಡಿರುವ ಹಿನ್ನೆಲೆ, ತನ್ನ ಸರ್ಕಾರವನ್ನು ಕೆಡವಿದ ಅನರ್ಹ ಶಾಸಕರನ್ನು ಸೋಲಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವತಃ ಅಖಾಡಕ್ಕೆ ಧುಮುಕುವ ಸೂಚನೆ ನೀಡಿದ್ದಾರೆ.

ಕಳೆದ ಕೆಲ ದಿನಗಳಿಂದ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಮಾಜಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​. ವಿಶ್ವನಾಥ್ ಹಾಗೂ ಶಾಸಕ ಜಿ.ಟಿ. ದೇವೇಗೌಡ ಅವರಿಗೆ ಟಾಂಗ್ ನೀಡುವ ಸಲುವಾಗಿ ಹಾಗೂ ಮೈಸೂರಿನ ಭಾಗದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಸಭೆ ನಡೆಸುತ್ತಲೇ ಇದ್ದಾರೆ. ಈ ನಡುವೆ ಚುನಾವಣಾ ಆಯೋಗ ಶನಿವಾರ ಉಪ-ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡುತ್ತಿದ್ದಂತೆ, ರಾಜಧಾನಿಗೆ ಆಗಮಿಸಿರುವ ಕುಮಾರಸ್ವಾಮಿ ಸೋಮವಾರ ಬೆಂಗಳೂರಿನ ಯಶವಂತಪುರ ಹಾಗೂ ಮಹಾಲಕ್ಷ್ಮಿ ಲೇಔಟ್​ನಲ್ಲಿ ಮುಖಂಡರ ಸಭೆ ನಡೆಸಲು ಮುಂದಾಗಿದ್ದಾರೆ.

ಯಶವಂತಪುರ ಕಾಂಗ್ರೆಸ್​ ಶಾಸಕ ಎಸ್​.ಟಿ. ಸೋಮಶೇಖರ್​ ಹಾಗೂ ಮಹಾಲಕ್ಷ್ಮಿ ಲೇಔಟ್​ ಜೆಡಿಎಸ್​ ಶಾಸಕ ಕೆ. ಗೋಪಾಲಯ್ಯ ಕುಮಾರಸ್ವಾಮಿ ನೇತೃತ್ವದ ಕಳೆದ ಮೈತ್ರಿ ಸರ್ಕಾರವನ್ನು ಕೆಡವುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಈ ಇಬ್ಬರು ನಾಯಕರನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ ಮಾಜಿ ಸಿಎಂ ಕುಮಾರಸ್ವಾಮಿ ಈ ಎರಡೂ ಕ್ಷೇತ್ರದ ಮುಖಂಡರ ಜೊತೆ ನಾಳೆ ಜೆಪಿ ನಗರದ ಜೆಡಿಎಸ್​ ಭವನದಲ್ಲಿ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಉಪ ಚುನಾವಣೆ ಟಿಕೆಟ್​ ಆಕಾಂಕ್ಷಿಗಳು ಹಾಗೂ ಕ್ಷೇತ್ರದ ಮುಂಡರ ಜೊತೆ ಮಾಜಿ ಸಿಎಂ ಚರ್ಚೆ ನಡೆಸಲಿದ್ದು, ಪಕ್ಷವನ್ನು ಬೂತ್​ ಮಟ್ಟದಿಂದ ಬಲ ಪಡಿಸಲು ಮತ್ತು ಅನರ್ಹ ಶಾಸಕರ ಸೋಲಿಗೆ ರಣತಂತ್ರ ಹೆಣೆಯುವ ಸಾಧ್ಯತೆ ಇದೆ. ಅಲ್ಲದೆ, ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕುಮಾರಸ್ವಾಮಿ ತನ್ನ ರಾಜಕೀಯ ಚಟುವಟಿಕೆಗೆ ಈ ಎರಡೂ ಕ್ಷೇತ್ರಗಳನ್ನೇ ಮೊದಲು ಆಯ್ಕೆ ಮಾಡಿಕೊಂಡಿರುವುದು ಸಹ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಪಕ್ಷಾಂತರ ಕಾಯ್ದೆ ಅನ್ವಯ ಕಳೆದ ಜುಲೈ​ ತಿಂಗಳಲ್ಲಿ ಮಾಜಿ ಸ್ಪೀಕರ್​ ರಮೇಶ್ ಕುಮಾರ್​ ಕಾಂಗ್ರೆಸ್​ ಹಾಗೂ ಜೆಡಿಎಸ್ ಪಕ್ಷದ 17 ಶಾಸಕರನ್ನು ಉಪ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಿದ್ದರು. ಈ 17 ಕ್ಷೇತ್ರಗಳ ಪೈಕಿ ಇದೀಗ 15 ಕ್ಷೇತ್ರಗಳಿಗೆ ಚುನಾವಣೆಯನ್ನು ಘೋಷಣೆ ಮಾಡಲಾಗಿದೆ. ಆದರೆ, ಅನರ್ಹ ಶಾಸಕರು ತಮ್ಮ ವಿರುದ್ದ ತೀರ್ಪನ್ನು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಿದ್ದಾರೆ. ಅಕಸ್ಮಾತ್ ಕೋರ್ಟ್​ ಸ್ಪೀಕರ್​ ತೀರ್ಪನ್ನು ಎತ್ತಹಿಡಿದರೆ,​​ ಅನರ್ಹರು ತಮ್ಮ ಕುಟುಂಬದಲ್ಲೇ ಯಾರನ್ನಾದರೂ ಚುನಾವಣೆಗೆ ನಿಲ್ಲಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

Comments are closed.