ದಾವಣಗೆರೆ: ಆತ ಕುರಿ ಕದ್ದು ಮಾರಾಟ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ. ಸಾಕಷ್ಟು ಬಾರಿ ಸಿಕ್ಕಿಬಿದ್ದು ಜೈಲಿಗೂ ಹೋಗಿಬಂದಿದ್ದ. ಆದರೂ ಆತ ಬುದ್ಧಿ ಕಲಿತಿರಲಿಲ್ಲ. ಶನಿವಾರ ರಾತ್ರಿ ಕೂಡ ತನ್ನ ಕುರಿ ಕಳವಿನ ಕೈಚಳಕ ತೋರಲು ಹೋಗಿದ್ದ ಆತನ ರುಂಡವನ್ನು ಕುರಿಗಾಹಿಗಳು ಚೆಂಡಾಡಿದ್ದಾರೆ!
ಮಲೇಬೆನ್ನೂರು ನಿವಾಸಿ ಚಮನ್ಸಾಬ್ (48) ಕೊಲೆಯಾಗಿರುವವ. ಶನಿವಾರ ತಡರಾತ್ರಿ ಇಲ್ಲವೇ ಭಾನುವಾರ ಬೆಳಗಿನ ಜಾವ ಆತನನ್ನು ಕೊಲೆ ಮಾಡಿರುವ ಸಾಧ್ಯತೆ ಇರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮೂಗಿನಗುಂದಿ ಹಾಗೂ ಜಿ.ಟಿ. ಕಟ್ಟೆ ನಡುವೆ ಬರುವ ಹೊಲದಲ್ಲಿದ್ದ ಕುರಿ ದೊಡ್ಡಿಯಲ್ಲಿ ಕುರಿ ಕಳವು ಮಾಡಲು ಚಮನ್ಸಾಬ್ ತೆರಳಿದ್ದ. ಹೊಂಚು ಹಾಕಿ ಕುರಿಯನ್ನು ಕದಿಯುವ ಸಂದರ್ಭದಲ್ಲಿ ಕುರಿಗಾಹಿಗಳ ಕೈಗೆ ಸಿಕ್ಕಿಬಿದ್ದಿದ್ದ. ಆತನಿಗೆ ಚೆನ್ನಾಗಿ ಹೊಡೆದ ಬಳಿಕ ಕುರಿಗಾಹಿಗಳು ಆತನ ಕತ್ತನ್ನು ಕತ್ತರಿಸಿದರು ಎನ್ನಲಾಗಿದೆ. ಮಲೇಬೆನ್ನೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ
Comments are closed.