ಬೆಂಗಳೂರು: ಮಳೆ ಪ್ರವಾಹಕ್ಕೆ ಉತ್ತರ ಕರ್ನಾಟಕದ ಜನರು ನಲುಗಿದ್ದಾರೆ. ಮನೆ, ಮಠ ಕಳೆದುಕೊಂದ ಸಂತ್ರಸ್ತರು ರಕ್ಷಣೆಗೆ ಎದುರು ನೋಡುತ್ತಿದ್ದಾರೆ. ಅವರ ನೆರವಿಗೆ ಧಾವಿಸುವುದು ನಮ್ಮ ಕರ್ತವ್ಯವಾಗಿದ್ದು, ತಕ್ಷಣಕ್ಕೆ ನೆರೆ ಸಂತ್ರಸ್ತರ ಕಷ್ಟಕ್ಕೆ ಮುಂದಾಗಿ ಎಂದು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಕಂಡರಿಯದ ಮಳೆ ಪ್ರವಾಹಕ್ಕೆ ಉತ್ತರ ಕರ್ನಾಟಕ ತುತ್ತಾಗಿದ್ದು, ಸಿದ್ದರಾಮಯ್ಯ ಕ್ಷೇತ್ರವಾದ ಬಾಲಕೋಟೆ ಜಿಲ್ಲೆಯಲ್ಲಿ ನೆರೆಗೆ 106ಗ್ರಾಮಗಳು ಮುಳುಗಿದೆ. ಬೆಳಗಾವಿ, ರಾಯಚೂರಿನಲ್ಲಿಯೂ ಕೃಷ್ಣೆ, ಮಲಪ್ರಭಾ, ಘಟಪ್ರಭಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಜನ-ಜಾನುವಾರುಗಳು ಪ್ರವಾಹದಿಂದ ಸಂಕಷ್ಟ ಸ್ಥಿತಿ ತಲುಪಿದ್ದಾರೆ.
ಈಗಾಗಲೇ ಪ್ರವಾಹದಿಂದ ಎಲ್ಲವನ್ನು ಕಳೆದುಕೊಂಡಿರುವ ಜನರು ಗಂಜಿಕೇಂದ್ರ ತಲುಪಿದ್ದು, ಅವರ ರಕ್ಷಣೆಗೆ ಅಗತ್ಯಕ್ರಮ ಕೈಗೊಳ್ಳಬೇಕಿದೆ. ನದಿ ಪಾತ್ರದ ನದಿಗಳು ನಡುಗಡ್ಡೆಗಳಾಗಿದ್ದು, ಅವರ ರಕ್ಷಣೆಗೆ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೊಲೀಸ್, ಅಗ್ನಿಶಾಮಕ ದಳ ಇನ್ನಿಲ್ಲದ ಹೋರಾಟ ನಡೆಸಿದೆ. ಅವರ ಜೊತೆ ನಾವು ಕೂಡ ಕೈ ಜೋಡಿಸಬೇಕಾದ ಅವಶ್ಯಕತೆ ಇದೆ. ಈ ಹಿನ್ನೆಲೆ ನೆರೆ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿ ಅವರ ಸಮಸ್ಯೆ ಆಲಿಸಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ಕಾರಣ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಏಕಾಏಕಿ ಅಪಾರ ಪ್ರಮಾಣ ನೀರು ಬಿಟ್ಟಿರುವುದು. ಮಹಾರಾಷ್ಟ್ರದಲ್ಲಿ ಇನ್ನು ಮಳೆಯಾಗುತ್ತಿದ್ದು, ಮತ್ತೆ ನೀರಿನ ಹರಿವು ಹೆಚ್ಚುವ ಸಾಧ್ಯತೆ ಇದೆ. ಈ ಹಿನ್ನೆಲೆ ಜಲಾಶಯದಿಂದ ನೀರು ಬಿಡುವುದನ್ನು ನಿಯಂತ್ರಿಸುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವಂತೆ ಸಲಹೆ ನೀಡಿದ್ದಾರೆ.
Comments are closed.