ಕರ್ನಾಟಕ

ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲು ತೋರಿಸಿದ ಅವಸರವನ್ನು ಸಂಪುಟ ವಿಸ್ತರಣೆ ಮಾಡಲು ಏಕೆ ತೋರುತ್ತಿಲ್ಲ: ಸಿದ್ದರಾಮಯ್ಯ ಪ್ರಶ್ನೆ

Pinterest LinkedIn Tumblr

ಬೆಂಗಳೂರು: ಬಿ.ಎಸ್​.ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕರಿಸಿ ಹಲವು ದಿನಗಳೇ ಕಳೆದಿವೆ. ಆದರೆ ಇನ್ನೂ ಸಹ ಸಚಿವ ಸಂಪುಟ ರಚನೆ ಮಾಡಿಲ್ಲ. ಈ ಹಿನ್ನೆಲೆ ಕಾಂಗ್ರೆಸ್​​ ಮತ್ತು ಜೆಡಿಎಸ್​ ನಾಯಕರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ಧಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್​ ಮಾಡುವ ಮೂಲಕ ಬಿಜೆಪಿ ಸರ್ಕಾರ ಹಾಗೂ ಯಡಿಯೂರಪ್ಪ ವಿರುದ್ಧ ಟೀಕೆ ಮಾಡಿದ್ಧಾರೆ.

ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ತೋರಿಸಿದ ಅವಸರವನ್ನು ಸಂಪುಟ ವಿಸ್ತರಣೆ ಮಾಡಲು ಏಕೆ ತೋರುತ್ತಿಲ್ಲ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ ಬಿಎಸ್​​ವೈ ವಿರುದ್ಧ ಹರಿಹಾಯ್ದಿದ್ಧಾರೆ.

“ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ತೋರಿಸಿದ ಅತಿ ಅವಸರವನ್ನು ಸಂಪುಟ ವಿಸ್ತರಣೆಗೆ ತೋರುತ್ತಿಲ್ಲವೇಕೆ? ಅತಿವೃಷ್ಟಿ-ಅನಾವೃಷ್ಟಿಯಿಂದ ರಾಜ್ಯದ ಜನರು ಸಂಕಟದಲ್ಲಿದ್ದಾರೆ. ಆಡಳಿತ ಯಂತ್ರ ಸ್ತಬ್ಧವಾಗಿದೆ. ಇದೇನು ಪ್ರಜಾಪ್ರಭುತ್ವವೇ? ಏಕಚಕ್ರಾಧಿಪತ್ಯವೇ?” ಎಂದು ತೀವ್ರ ವಾಗ್ಧಾಳಿ ನಡೆಸಿದ್ಧಾರೆ.

ಇದೇ ವೇಳೆ ಅಧಿಕಾರಿಗಳ ವರ್ಗಾವಣೆ ಬಗ್ಗೆಯೂ ಸಿದ್ದರಾಮಯ್ಯ ಕಿಡಿಕಾರಿದ್ಧಾರೆ. “ಅತಿವೃಷ್ಟಿ-ಅನಾವೃಷ್ಟಿಗಳಿಗೆ ಸ್ಪಂದಿಸಬೇಕಾದ ಕಂದಾಯ,ಕೃಷಿ,ಗ್ರಾಮೀಣ ಅಭಿವೃದ್ದಿ ಇಲಾಖೆಗಳಿಗೆ ಸಚಿವರೇ ಇಲ್ಲ. ಆದ್ಯತೆ ಅಧಿಕಾರಿಗಳ ವರ್ಗಾವಣೆಯದ್ದೇ? ಸಂಪುಟ ವಿಸ್ತರಣೆಯದ್ದೇ?,” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ಧಾರೆ.

ರಾಜ್ಯಪಾಲ ವಜುಭಾಯ್​ ವಾಲ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ವಿಶ್ವಾಸ ಮತಯಾಚನೆಗೆ ಸಂದೇಶದ ಮೇಲೆ ಸಂದೇಶ ಕಳಿಸುತ್ತಿದ್ದ ಘನತೆವೆತ್ತ ರಾಜ್ಯಪಾಲರ ಗಮನಕ್ಕೆ, ಸಚಿವರಿಲ್ಲದ ಏಕವ್ಯಕ್ತಿ ಸಂಪುಟದಿಂದಾಗಿ ರಾಜ್ಯದ ಜನತೆ ಅನುಭವಿಸುತ್ತಿರುವ ಬವಣೆ ಕಾಣುತ್ತಿಲ್ಲವೇ?,” ಎಂದು ಟ್ವಿಟ್ಟರ್​​ನಲ್ಲಿ ರಾಜ್ಯಪಾಲರಿಗೆ ಪ್ರಶ್ನಿಸಿದ್ದಾರೆ.

ನಿನ್ನೆ ಕೂಡ ಕಾಂಗ್ರೆಸ್​ ಮತ್ತು ಜೆಡಿಎಸ್ ‘ಎಲ್ಲಿ ನಿಮ್ಮ ಸಚಿವ ಸಂಪುಟ’ ಎಂದು ಟ್ಟಿಟರ್​​ನಲ್ಲಿ​​​ ಸಿಎಂ ಯಡಿಯೂರಪ್ಪ ಅವರಿಗೆ ಪ್ರಶ್ನಿಸಿದ್ದರು.

ಜೆಡಿಎಸ್​ ಕೂಡ ಬಿಜೆಪಿ ಸರ್ಕಾರವನ್ನು ‘ಅತೃಪ್ತ ಆತ್ಮಗಳ ಸರ್ಕಾರವಾಗಿದೆ’ ಎಂದು ಟೀಕಿಸಿತ್ತು.

Comments are closed.