ಕರ್ನಾಟಕ

ನಾವು ಬಿಜೆಪಿಗೆ ಬೆಂಬಲ ನೀಡುವುದಿಲ್ಲ; ಕುಮಾರಸ್ವಾಮಿ ಸ್ಪಷ್ಟನೆ

Pinterest LinkedIn Tumblr


ಬೆಂಗಳೂರು(ಜುಲೈ.27): ಬಿಜೆಪಿಗೆ ಜೆಡಿಎಸ್​​ ಬೆಂಬಲ ನೀಡಲಿದೆ ಎಂಬ ವದಂತಿಗೆ ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. “ಬಿಜೆಪಿ ಜೊತೆಗೆ ಸಂಬಂಧ ಬೆಸೆಯುವ ಆಧಾರ ರಹಿತ ಸುದ್ದಿಗಳನ್ನು ಗಮನಿಸಿದ್ದೇನೆ. ಸತ್ಯಕ್ಕೆ ದೂರವಾದ ಈ ರೀತಿಯ ಊಹಾಪೋಹಗಳಿಗೆ ನಮ್ಮ ಶಾಸಕರು ಹಾಗೂ ಕಾರ್ಯಕರ್ತರು ಕಿವಿಗೊಡಬೇಕಾಗಿಲ್ಲ. ಜನಸೇವೆಯ ಮೂಲಕ ಪಕ್ಷವನ್ನು ಕಟ್ಟೋಣ. ನಮ್ಮ ಜನಪರ ಹೋರಾಟ ನಿರಂತರ” ಎಂದು ಟ್ವೀಟ್​​ ಮಾಡುವ ಮೂಲಕ ಯಾವುದೇ ಕಾರಣಕ್ಕೂ ಬಿಜೆಪಿ ಜತೆಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರದ ಪತದ ಬಳಿಕ ಅಧಿಕಾರಕ್ಕಾಗಿ ಬಿಜೆಪಿಗೆ ಬೆಂಬಲ ನೀಡುವಂತೆ ಜೆಡಿಎಸ್ ಶಾಸಕರು ಪಕ್ಷದ ವರಿಷ್ಠರಿಗೆ ಒತ್ತಡ ಹೇರಿದ್ದಾರೆ ಎನ್ನಲಾಗಿತ್ತು. ನಿನ್ನೆ ಸಂಜೇ ತಾಜ್ ವೆಸ್ಟ್​​ ಎಂಡ್ ಹೋಟೆಲ್​ನಲ್ಲಿ ಪಕ್ಷದ ಶಾಸಕರಿಗಾಗಿ ಆಯೋಜಿಸಿದ್ದ ಭೋಜನಕೂಟದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಗೆ ಈ ಒತ್ತಾಯ ಕೇಳಿ ಬಂದಿತ್ತು ಎಂದು ಹೇಳಲಾಗುತ್ತಿತ್ತು.

ಅಧಿಕಾರ ಕಳೆದುಕೊಂಡಿರುವ ನಮಗೆ ಆಪರೇಷನ್​ ಕಮಲ ಭೀತಿ ಎದುರಾಗಿದೆ. ನಮ್ಮ ಪಕ್ಷದ ಶಾಸಕರು ಆಪರೇಷನ್​ ಕಮಲಕ್ಕೆ ಒಳಗಾಗುವುದನ್ನು ತಪ್ಪಿಸಲು ನಾವೇ ಬಿಜೆಪಿ ಜೊತೆ ಕೈ ಜೋಡಿಸೋಣ. ಈ ಮೂಲಕ ಪಕ್ಷವನ್ನು ಉಳಿಸಿಕೊಳ್ಳಬಹುದು ಎಂಬ ಸಲಹೆ ಜೆಡಿಎಸ್​​ ಶಾಸಕರು ನೀಡಿದ್ದರು ಎನ್ನಲಾಗಿತ್ತು.

ಇನ್ನೂ ಈ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಕುಮಾರಸ್ವಾಮಿ ಶಾಸಕರಿಗೆ ಭರವಸೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಈ ಬೆನ್ನಲ್ಲೇ ಭಾರತೀಯ ಜನತಾ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡುತ್ತೇವೆ ಎಂದಿರುವ ಜೆಡಿಎಸ್​​ ಮುಖಂಡರಿಗೆ ಧನ್ಯವಾದಗಳು ತಿಳಿಸುತ್ತೇವೆ ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದರು. ಇದರಿಂದಾಗಿ ಬಿಜೆಪಿಗೆ ಜೆಡಿಎಸ್​​ ಬೆಂಬಲ ನೀಡಲಿದೆ ಎಂಬ ಸುದ್ದಿಗೆ ಮತ್ತಷ್ಟು ಮಹತ್ವ ಸಿಕ್ಕಿತ್ತು. ಇದೀಗ ಯಾವುದೇ ಕಾರಣಕ್ಕೂ ಬಿಜೆಪಿಗೆ ಬೆಂಬಲ ನೀಡೋಲ್ಲ ಎಂದು ಕಡ್ಡಿ ಮುರಿದಂತೆ ಎಚ್​​.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

Comments are closed.