ಬೆಂಗಳೂರು: ತಮ್ಮ ಪಕ್ಷದ ವಿರುದ್ಧವೇ ಶಾಸಕ ರೋಷನ್ ಬೇಗ್ ಹೇಳಿಕೆ ವಿಚಾರವಾಗಿ ಮಾಜಿ ಡಿಸಿಎಂ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು ಇಂದು ಹೊಸ ಸಿನಿಮಾ ಟೀಸರ್ ಬಿಡುಗಡೆ ಮಾಡಿದ್ದಾರೆ ಅದರಲ್ಲಿ ಎರಡು ವಿಲನ್ಗಳನ್ನು ಫೋಕಸ್ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಮೈನ್ ವಿಲನ್ ಸಿದ್ದರಾಮಯ್ಯ, ಸಬ್ ವಿಲನ್ ದಿನೇಶ್ ಗುಂಡೂರಾವ್ ಹಾಗೂ ಕಾಮಿಡಿಯನ್ ಕೆ.ಸಿ. ವೇಣುಗೋಪಾಲ್ ಎಂದು ಅವರು ಕರ್ಮಷಿಯಲ್ ಸಿನಿಮಾ ಫಾರ್ಮೆಟ್ನಲ್ಲಿ ಹೋಲಿಕೆ ಮಾಡಿ ಹೇಳಿದ್ದಾರೆ.
ಇನ್ನು 23ರ ನಂತರ ಮೈನ್ ಫಿಲ್ಮ್ ರಿಲೀಸ್ ಅಗಲಿದೆ ಆಗ ಎಷ್ಟು ಜನ ವಿಲನ್ಗಳು ಬರ್ತಾರೋ ಗೊತ್ತಿಲ್ಲ, ಕಾಂಗ್ರೆಸ್ ಪಕ್ಷದಲ್ಲಿ ಹೀರೋಗಳು ಇಲ್ಲ, ಬರೀ ವಿಲನ್ಗಳು, ಕಾಮಿಡಿಯನ್ಗಳು ಮಾತ್ರ ಇದ್ದಾರೆ ಎಂದು ಅವರು ವ್ಯಂಗ್ಯವಾಗಿ ಮಾತನಾಡಿದ್ದಾರೆ.
ಮೇ 23, ಬಿಜೆಪಿಗೆ ಸಂಭ್ರಮದ ದಿನ, ಕಾಂಗ್ರೆಸ್ನವರಿಗೆ ರೆಸಾರ್ಟ್ ಕಡೆ ಓಡೋ ದಿನ. ಕಾಂಗ್ರೆಸ್ ನಡೆ ರೆಸಾರ್ಟ್ಗೆ ಓಡುವ ಕಡೆ ಆಗಲಿದೆ. ಇವತ್ತು ರೋಷನ್ ಬೇಗ್ ಸ್ಯಾಂಪಲ್ ಬಿಡುಗಡೆ ಮಾಡಿದ್ದಾರೆ. ಬಳ್ಳಾರಿ, ಬೆಳಗಾವಿಯ ಫಿಲ್ಮ್ಗಳು ಇನ್ನೂ ರಿಲೀಸ್ ಆಗಲು ಬಾಕಿ ಇವೆ ಎಂದು ಬಿಜೆಪಿ ಶಾಸಕ ಆರ್ ಅಶೋಕ್ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡಿದ್ದಾರೆ.
ಮಂಡ್ಯ, ತುಮಕೂರಿನ ರಿಸಲ್ಟ್ ಮೇಲೆ ಸಮ್ಮಿಶ್ರ ಸರ್ಕಾರದ ಭವಿಷ್ಯ ನಿಂತಿದೆ. ಲಾವರಸ ಉಕ್ಕಿ ಯಾರ ಮೇಲೆ ಹರಿಯುತ್ತದೋ ಗೊತ್ತಿಲ್ಲ, ಭೂಕಂಪ ಆಗಿ ಕಾಂಗ್ರೆಸ್ ಮನೆ ಬಿದ್ದು ಹೋಗಲಿದೆ. ಈ ಫಿಲ್ಮ್ ಪ್ರೊಡ್ಯೂಸರ್ಗಳು ಎಲ್ಲಾ ಕಾಂಗ್ರೆಸ್ನವರೇ ಎಂದರು.
23ರಂದು ಈ ಸರ್ಕಾರ ಡೆಡ್ ಅಂತಾ ಡಾಕ್ಟರ್ ಘೋಷಣೆ ಮಾಡಲಿದ್ದಾರೆ. ಕೇವಲ ರೋಷನ್ ಬೇಗ್ ಒಬ್ಬರ ಪ್ರಶ್ನೆ ಅಲ್ಲ, ಅನೇಕ ಜನ ದಾರಿ ಹುಡುಕುತ್ತಿದ್ದಾರೆ. ದಾರಿ ಯಾವುದಯ್ಯಾ ಎಂದು ಹುಡುಕುತ್ತಿರುವವರಿಗೆ ಬಿಜೆಪಿ ದಾರಿ ತೋರಿಸಲಿದೆ ಎಂದು ಬೆಂಗಳೂರಿನಲ್ಲಿ ಆರ್ ಅಶೋಕ್ ನುಡಿದರು.
Comments are closed.