ಕರ್ನಾಟಕ

ಕರ್ನಾಟಕ ಸರ್ಕಾರದ ಎಸ್‏ಸಿ, ಎಸ್‏ಟಿ ನೌಕರರ ಬಡ್ತಿ ಮೀಸಲಾತಿ ಕಾಯ್ದೆ ಎತ್ತಿಹಿಡಿದ ಸುಪ್ರೀಂ ಕೋರ್ಟ್

Pinterest LinkedIn Tumblr

ನವದೆಹಲಿ: ಎಸ್‍ಸಿ, ಎಸ್‍ಟಿ ನೌಕರರ ಬಡ್ತಿ ಮೀಸಲಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಾರಿ ತಂದಿದ್ದ ತತ್ಪರಿಣಾಮ ಜೇಷ್ಠತಾ ಮೀಸಲಾತಿ ಕಾನೂನು ಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಬಿ.ಕೆ. ಪವಿತ್ರ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಯು. ಯು. ಲಲಿತ್ ಹಾಗೂ ಡಿ.ವೈ. ಚಂದ್ರಚೂಡ್ ಅವರಿದ್ದ ಪೀಠವು ಇಂದು ತೀರ್ಪು ಪ್ರಕಟಿಸಿದೆ.

ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಶಾಸನಸಭೆಯು ರೂಪಿಸಿರುವ ನೂತನ ಕಾಯ್ದೆಗೆ ರಾಷ್ಟ್ರಪತಿಯವರು ಅಂಕಿತ ದೊರೆತಿದ್ದು, ಅದರ ಸಿಂಧುತ್ವಕ್ಕೆ ಪೂರಕ ಎಂದು ಅಭಿಪ್ರಾಯಪಟ್ಟರು.

ಕೆನೆ ಪದರದ ತತ್ವವೂ ಸಹ ಈ ಕಾಯ್ದೆಯ ಜಾರಿಯಲ್ಲಿ ಅನ್ವಯವಾಗದು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿರುವ ಗ್ರೂಪ್ ಡಿ ಹಂತದ ಸಿಬ್ಬಂದಿಗೆ ಮೀಸಲಾತಿ ನೀಡುವಾಗ ಮಾತ್ರ ಈ ತತ್ವ ಅನ್ವಯಿಸಬಹುದು. ಆದರೆ, ತತ್ಪರಿಣಾಮದ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆ ಆಗಿರುವುದರಿಂದ ಕೇವಲ ಉನ್ನತ ಮಟ್ಟದ ಅಧಿಕಾರಿಗಳು ಇದರ ಲಾಭ ಪಡೆಯುವುದರಿಂದ ಕಾಯ್ದೆಯನ್ನು ಮಾನ್ಯ ಮಾಡಲಾಗಿದೆ ನ್ಯಾಯಮೂರ್ತಿ ಚಂದ್ರಚೂಡ್ ತೀರ್ಪಿನಲ್ಲಿ ಉಲ್ಲೇಖಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿನಿಂದ ಸುಮಾರು ಮೂರು ಸಾವಿರಕ್ಕೂ ಅಧಿಕ ಎಸ್‍ಸಿ, ಎಸ್‍ಟಿ ನೌಕಕರಿಗೆ ಲಾಭ ಆಗಲಿದ್ದು ಹಿಂಬಡ್ತಿ ಹೊಂದುವ ಭಯದಲ್ಲಿದ್ದ ನೌಕರರು ನಿರಾಳರಾಗಿದ್ದಾರೆ. ಇನ್ನು ತೀರ್ಪುನಿಂದ ಅರ್ಜಿದಾರ ಬಿ.ಕೆ ಪವಿತ್ರ ಅವರಿಗೆ ಹಿನ್ನೆಡೆಯಾಗಿದ್ದು ಮರುಪರಿಶೀಲನಾ ಅರ್ಜಿ ಸಲ್ಲಿಸುವ ಕುರಿತು ಯೋಚಿಸಿದ್ದಾರೆ.

ಏನಿದು ಪ್ರಕರಣ?’
ಸರ್ಕಾರಿ ನೌಕರರ ಬಡ್ತಿಯಲ್ಲಿ ಮೀಸಲಾತಿ ವಿಧಾನ ಅನುಸರಿಸುವ ರಾಜ್ಯ ಸರ್ಕಾರದ 2002ರ ಕಾಯ್ದೆ ಯನ್ನು ರದ್ದುಪಡಿಸಿ ಸಿದ್ದರಾಮಯ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಹಿತಾಸಕ್ತಿ ಕಾಪಾಡಲು ಹೊಸ ಕಾಯ್ದೆ ರೂಪಿಸಿತ್ತು. ಈ ನೂತನ ಕಾಯ್ದೆಗೆ ರಾಷ್ಟ್ರಪತಿಯವರ ಅಂಕಿತ ದೊರೆತಿತ್ತು. ಈ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಬಿ.ಕೆ. ಪವಿತ್ರ ಮತ್ತಿತರರು ಮೇಲ್ಮನವಿ ಸಲ್ಲಿಸಿದ್ದರು. 2018ರ ಅಕ್ಟೋಬರ್ 23ರಿಂದ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ ಕಳೆದ ಮಾರ್ಚ್ 6 ರಂದು ಸುಪ್ರೀಂ ಕೋರ್ಟ್ ತೀರ್ಪು ಕಾದಿರಿಸಿತ್ತು.

Comments are closed.