ಕರ್ನಾಟಕ

ಸಂವಿಧಾನ ಬದಲಾವಣೆ ಮಾಡಲು ಮುಂದಾದರೆ ದೇಶದಲ್ಲಿ ರಕ್ತಪಾತ: ಸಿದ್ದರಾಮಯ್ಯ

Pinterest LinkedIn Tumblr


ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರು ಏನಾದ್ರೂ ಸಂವಿಧಾನ ಬದಲಾವಣೆ ಮಾಡಲು ಮುಂದಾದರೆ ದೇಶದಲ್ಲಿ ರಕ್ತಪಾತವಾಗುತ್ತದೆ. ಆ ರಕ್ತಪಾತದ ನೇತೃತ್ವವನ್ನು ನಾನು ವಹಿಸುತ್ತೇನೆಂದು ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ರಬಕವಿ-ಬನಹಟ್ಟಿ ನಗರದಲ್ಲಿ ಆಯೋಜಿಸಿದ್ದ ಮೈತ್ರಿ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿ, ಅಂಬೇಡ್ಕರ್ ಬರೆದ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆಂದರೆ ಏನ್ ಹುಡುಗಾಟ ಆಡ್ತಿರಾ? ಸಂವಿಧಾನ ಈ ದೇಶದ ಧರ್ಮಶಾಸ್ತ್ರ. ನಮಗೆ ಭಗವದ್ಗೀತೆ ಮುಸ್ಲಿಂರಿಗೆ ಕುರಾನ್, ಕ್ರಿಶ್ಚಿಯನ್ನರಿಗೆ ಬೈಬಲ್ ಇದೆ. ಆದರೆ ಈ ದೇಶದ ಎಲ್ಲ ಜನರಿಗೆ ಸಂವಿಧಾನವೇ ಕುರಾನ್, ಬೈಬಲ್, ಭಗವದ್ಗೀತೆ ಎಂದರು.

ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ, ದಲಿತರಿಗೆ, ರೈತರಿಗೆ ಬಿಜೆಪಿಯವರು ವಿರುದ್ಧವಾಗಿದ್ದಾರೆ. ಅದಕ್ಕೆ ಸಂವಿಧಾನ ಬದಲಾಯಿಸಲು ಹೊರಟಿದ್ದಾರೆಂದು ಎಂದು ಆರೋಪಿಸಿದರು. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಮೋದಿ ಸೋಲಬೇಕು. ಒಂದೊಮ್ಮೆ ಮತ್ತೆ ಗೆದ್ದರೆ ಹಿಟ್ಲರ್ ರೀತಿ ಸಾರ್ವಧಿಕಾರಿ ಆಗುತ್ತಾರೆ. ಮೋದಿ ಅವರನ್ನು ಸೋಲಿಸಿ, ಪಕ್ಷದ ಅಭ್ಯರ್ಥಿಗೆ ಮತ ನೀಡಿ ಎಂದು ಕರೆ ನೀಡಿದರು.

ಮಾಧ್ಯಮಗಳೊಂದಿಗೆ ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಮೋದಿ ಸೋಲಿನ ಭಯದಿಂದ ಅತಾಶರಾಗಿದ್ದು, ಇದರಿಂದಲೇ ಜೆಡಿಎಸ್, ಕಾಂಗ್ರೆಸ್ ಮುಖಂಡರ ಮೇಲೆ ದಾಳಿ ನಡೆಸುತ್ತಿದ್ದಾರೆ. ಆದರೆ ಇದು ಅವರಿಗೆ ತಿರುಗುಬಾಣ ಆಗಲಿದೆ ಎಂದರು.

Comments are closed.