ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸೊಕ್ಕಿನ ಮಾತಿನಿಂದಲೇ ಚಾಮುಂಡಿ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿದರು. ಸೊಕ್ಕಿನಿಂದಾಗಿಯೇ 37 ಸಾವಿರ ಮತಗಳ ಅಂತರದಿಂದ ಸೋಲು ಕಂಡರು, ಅದೇ ಸೊಕ್ಕಿನಿಂದ ಸಿಎಂ ಸ್ಥಾನವನ್ನೂ ಕಳೆದುಕೊಂಡರು ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಟೀಕಿಸಿದ್ದಾರೆ.
ದಾವಣಗೆರೆಯಲ್ಲಿ ಇಂದು ಮಾತನಾಡಿರುವ ಕೆ.ಎಸ್. ಈಶ್ವರಪ್ಪ, ಸಿದ್ದರಾಮಯ್ಯನವರ ಸೊಕ್ಕಿನಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಸೋಲು ಕಂಡಿತು. ಅವರು ಅಹಿಂದ ವರ್ಗದ ನಾಯಕ ಅಲ್ಲ. ಅಹಿಂದ ಹೆಸರಿನಲ್ಲಿ ಅಧಿಕಾರ ಹಿಡಿದು ಆ ವರ್ಗಕ್ಕೆ ಮೋಸ ಮಾಡಿರುವ ಸಿದ್ದರಾಮಯ್ಯನವರಿಗೆ ನಾಚಿಗೆಯಾಗಬೇಕು. ಜಾತಿವಾದಿಗಳನ್ನ ರಾಜ್ಯದ ಜನ ತಿರಸ್ಕಾರ ಮಾಡಿದ್ದಾರೆ. ಅಹಿಂದ ಹೆಸರಿನಲ್ಲಿ ಇಷ್ಟು ವರ್ಷ ರಾಜಕೀಯ ಮಾಡಿರೋದು ಸಾಕು. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ತೆಗೆದು ಹಾಕಿದ್ದೇ ಸಿದ್ದರಾಮಯ್ಯ ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರ ಸೋಲಿಗೆ ಈಶ್ವರಪ್ಪ ಶ್ರಮಿಸುತ್ತಿದ್ದಾರೆ ಎಂಬ ಸಚಿವ ಎಚ್.ಡಿ. ರೇವಣ್ಣನವರ ಹೇಳಿಕೆಗೆ ತಿರುಗೇಟು ನೀಡಿರುವ ಈಶ್ವರಪ್ಪ, ಕೊಳೆತ ನಿಂಬೆಹಣ್ಣಿನ ರೇವಣ್ಣನ ಮಾತಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಬಿಜೆಪಿ ಪಕ್ಷ ನಮಗೆ ತಾಯಿ ಸಮಾನ . ನಾನೆಂದೂ ತಾಯಿಗೆ ಮೋಸ ಮಾಡೋದಿಲ್ಲ. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಖಚಿತ ಎಂದಿದ್ದಾರೆ.
ಸಚಿವ ಡಿ.ಕೆ. ಶಿವಕುಮಾರ್ ಬಗ್ಗೆಯೂ ಟೀಕಾಪ್ರಹಾರ ನಡೆಸಿರುವ ಈಶ್ವರಪ್ಪ, ಡಿ.ಕೆ. ಶಿವಕುಮಾರ್ ಕೇಡಿ ಶಿವಕುಮಾರ್ ಎಂದು ಹೆಸರು ಇಟ್ಟುಕೊಳ್ಳಬೇಕಿತ್ತು. ಕಳ್ಳ ಡಿಕೆಶಿ ಮನೆಯಲ್ಲಿ ಕೋಟ್ಯಾಂತರ ರೂ. ಬೇನಾಮಿ ಆಸ್ತಿ ಸಿಕ್ಕಿದೆ. ಲೋಕಸಭಾ ಚುನಾವಣೆಯಲ್ಲಿ ಸೋತ ಮೇಲೆ ಕಾಂಗ್ರೆಸ್ ಜೆಡಿಎಸ್ ಮೇಲೆ, ಜೆಡಿಎಸ್ ಕಾಂಗ್ರೆಸ್ ಮೇಲೆ ಆರೋಪ ಮಾಡಿಕೊಂಡು ಹೊಡೆದಾಡದಿದ್ದರೆ ಸಾಕು ಎಂದು ಹೇಳಿದ್ದಾರೆ.
Comments are closed.