ಕರ್ನಾಟಕ

ಮುಖ್ಯಮಂತ್ರಿ ಮತಚಲಾಯಿಸಿದ ಮತಗಟ್ಟೆಯಲ್ಲೇ ತಿಂಡಿ​ಗಾಗಿ ಮತದಾನವೇ ಸ್ಥಗಿತ

Pinterest LinkedIn Tumblr


ಮಾಗಡಿ(ಬೆಂ.ಗ್ರಾಮಾಂತರ) : ಮತಗಟ್ಟೆ ಅಧಿಕಾರಿಗಳು ಸಾಮೂಹಿಕವಾಗಿ ತಿಂಡಿಗೆ ತೆರಳಿದ ಪರಿಣಾಮ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮತದಾನವನ್ನೇ ಸ್ಥಗಿತಗೊಳಿಸಿದ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಗಡಿ ತಾಲೂಕಿನ ಕೇತಗಾನಹಳ್ಳಿ ಇಂತಹ ನಾಚಿಕೆಗೇಡಿನ ಕೆಲಸಕ್ಕೆ ಸಾಕ್ಷಿಯಾಗಿರುವ ಮತಗಟ್ಟೆ.

ಕೇತಗಾನಹಳ್ಳಿ ಸ್ವತಃ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮತ ಚಲಾಯಿಸುವ ಮತಗಟ್ಟೆ. ಬೆಳಗ್ಗೆ 7.45ರ ರ ಸುಮಾರಿಗೆ ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ಮತ ಚಲಾಯಿಸಿ ಹಿಂದಿರುಗಿದ್ದಾರೆ. ಆದರೆ, ಅತ್ತಕಡೆ ಮುಖ್ಯಮಂತ್ರಿಗಳು ಮತಚಲಾಯಿಸಿ ಹಿಂದಿರುಗುತ್ತಿದ್ದಂತೆ ತಕ್ಷಣ ಇತ್ತಕಡೆ ಚುನಾವಣಾ ಅಧಿಕಾರಿಗಳು ಬೆಳಗ್ಗಿನ ತಿಂಡಿಗೆ ಸಾಮೂಹಿಕವಾಗಿ ತೆರಳಿದ್ದಾರೆ.

ಪರಿಣಾಮ ಅರ್ಧಗಂಟೆಗೂ ಹೆಚ್ಚಿನ ಕಾಲ ಮತದಾರರು ಮತಗಟ್ಟೆಯ ಹೊರಗೆ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂದಿದೆ. ಅಲ್ಲದೆ ಹಲವಾರು ಜನ ಮತ ಚಲಾಯಿಸದೆ ಮನೆಗೆ ಹಿಂದಿರುಗಿದ್ದಾರೆ. ಈ ಕುರಿತು ಸ್ಥಳೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಮತಗಟ್ಟೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Comments are closed.