ಬೆಂಗಳೂರು: ಮತದಾನ ಮಾಡದೇ ನಮ್ಮ ಕರ್ತವ್ಯ ಮರೆತು ಬೇರೆಯವರು ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡಿಲ್ಲ ಎಂದು ಪ್ರಶ್ನೆ ಮಾಡುವುದು ಸರಿಯಲ್ಲ ಹಾಗಾಗಿ ಮೊದಲು ನಾವು ನಮ್ಮ ಮತದಾನ ಮಾಡುವ ಕರ್ತವ್ಯ ನಿರ್ವಹಿಸೋಣ ನಂತರ ಪ್ರಶ್ನಿಸೋಣ ಎಂದು ನಟ ಯಶ್ ಮತದಾರರಿಗೆ ಕರೆ ನೀಡಿದ್ದಾರೆ.
ಹೊಸಕೆರೆ ಹಳ್ಳಿಯ ಸರ್ಕಾರಿ ಶಾಲೆಯ ಮತಗಟ್ಟೆ 1 ರಲ್ಲಿ ನಟ ಯಶ್ ಮತದಾನ ಮಾಡಿದರು. ಮಧ್ಯಾಹ್ನ 1.30 ರ ಸಮಯಕ್ಕೆ ಆಗಮಿಸಿದ ಯಶ್ ತಮ್ಮ ಹಕ್ಕು ಚಲಾಯಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಶ್, ಮತದಾನ ಬಹಳ ಮುಖ್ಯ, ನಾವು ಯಾರನ್ನದಾರೂ ಪ್ರಶ್ನೆ ಮಾಡಬೇಕು ಎಂದರೆ ಮೊದಲು ಮತದಾನ ಮಾಡುವ ನಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಬೇಕು, ನಾವೇ ಸರಿಯಾಗಿ ನಮ್ಮಕರ್ತವ್ಯ ಮಾಡದೇ ಮತ್ತೊಬ್ಬರ ಬಗ್ಗೆ ಬೆರಳು ತೋರಿಸುವುದು ಸರಿಯಲ್ಲ. ಹಾಗಾಗಿ ಮತ ಹಾಕಬೇಕು, ನಂತರ ಅವರಿಂದ ಕೆಲಸ ಮಾಡಿಸಬೇಕು, ಮತದಾನ ಮಾಡಿ ಮೊದಲು ನಾವು ಜವಾಬ್ದಾರಿ ತಗೊಳೋಣ, ನಂತರ ಕೆಲಸ ಮಾಡಿಸೋಣ ಎಂದರು.
ಈ ಬಾರಿ ಮತದಾನದ ಪ್ರಮಾಣ ಉತ್ತಮವಾಗಿದೆ ಬಿಸಿಲು ಏರುವ ಮುನ್ನ ಸಾಕಷ್ಟು ಸಂಖ್ಯೆಯಲ್ಲಿ ಜನರು ಮತ ಚಲಾಯಿಸಿದ್ದಾರೆ ಸಂಜೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಯಾರೂ ಕೂಡ ಮತದಾನದಿಂದ ದೂರ ಉಳಿಯದೇ ಹಕ್ಕು ಚಲಾಯಿಸಿ ಎಂದು ಕರೆ ನೀಡಿದರು.
ಮೊದಲ ಹಂತದ ಚುನಾವಣೆಯಲ್ಲಿ ಮಂಡ್ಯದಿಂದ ಕಣಕ್ಕಿಳಿದಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡಿದ್ದು ಎರಡನೇ ಹಂತದಲ್ಲಿ ಎಲ್ಲಿಯೂ ಪ್ರಚಾರ ಮಾಡುತ್ತಿಲ್ಲ ಎಂದು ಯಶ್ ಸ್ಪಷ್ಟಪಡಿಸಿದರು.
Comments are closed.