ಶಿವಮೊಗ್ಗ: ಈಗ ನಿಖಿಲ್ ಎಲ್ಲಿದೀಯಪ್ಪಾ? ಮೇ 23 ರ ನಂತರ ಮಧು ಎಲ್ಲಿದೀಯಪ್ಪಾ ಎಂದು ವ್ಯಂಗ್ಯವಾಡುವ ಸನ್ನಿವೇಶ ಉದ್ಭವಿಸಲಿದೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಮೈತ್ರಿ ಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.
ಇಂದು ಶಿಕಾರಿಪುರದಲ್ಲಿ ನಡೆದ ಬಿಜೆಪಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ರಾಮನಗರ ಜಾತ್ರೆಯಲ್ಲಿರುವ ನಿಖಿಲ್ನನ್ನು ಎಲ್ಲರೂ ಎಲ್ಲಿದೀಯಪ್ಪಾ ಎಂದು ಹುಡುಕುತ್ತಿದ್ದಾರೆ. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರು ಮೋದಿ ಪ್ರಧಾನಿಯಾಗುವುದಿಲ್ಲ. ಅವರಪ್ಪನಾಣೆಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು.
ಈಗ ನಿಂಬೇಹಣ್ಣು ಹೆಚ್.ಡಿ.ರೇವಣ್ಣ ಸೇರಿದಂತೆ ಮೈತ್ರಿ ನಾಯಕರು, ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಗೆಲ್ಲುವುದಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಹಿಂದೆ ಸಿದ್ದರಾಮಯ್ಯ ಆಡಿದ ಮಾತುಗಳು ಹುಸಿಯಾದಂತೆ ಈ ಬಾರಿಯೂ ಅವರ ಮಾತುಗಳು ಸುಳ್ಳಾಗಲಿವೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
Comments are closed.