ಚಾಮರಾಜನಗರ: ಅನಂತ ಕುಮಾರ್ಗೆ ಪಕ್ಷ ಎಲ್ಲವನ್ನು ಕೊಟ್ಟಿದೆ. ಕೇಂದ್ರ ಸಚಿವ ಸ್ಥಾನದಿಂದ ಎಲ್ಲ ಹುದ್ದೆಗಳನ್ನು ಅವರು ಅಲಂಕರಿಸಿದ್ದಾರೆ. ಅದನ್ನೇ ಅವರ ಹೆಂಡತಿಗೂ ನೀಡಬೇಕೆಂದರೆ ಹೇಗೆ ಎಂದು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಪ್ರಶ್ನಿಸಿದ್ದಾರೆ.
ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿದ ಕುರಿತು ಇದೇ ಮೊದಲ ಬಾರಿ ಅನಂತ ಕುಮಾರ್ ಅಭಿಮಾನಿಗಳ ಪ್ರಶ್ನೆಗೆ ಅವರು ಉತ್ತರಿಸಿದರು.
ತೇಜಸ್ವಿನಿ ಅವರಿಗೆ ನಾನು ಟಿಕೆಟ್ ತಪ್ಪಿಸಿದ್ದು ಎನ್ನುವುದು ಸುಳ್ಳು. ಅವರ ಬಗ್ಗೆ ಗೌರವವಿದೆ. ಅವರ ಸಾಮರ್ಥ್ಯವನ್ನು ಲೆಕ್ಕಹಾಕಿ ರಾಜ್ಯದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದೆ ಎಂದು ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿದ್ದನ್ನು ಸಮರ್ಥಿಸಿಕೊಂಡರು.
ಪಕ್ಷ ಕಟ್ಟಿದವರಲ್ಲಿ ಅನಂತಕುಮಾರ್ ಕೂಡ ಒಬ್ಬರು. ರಾಜಕಾರಣದಲ್ಲಿ ಇನ್ನು 20-30 ವರ್ಷ ಕ್ಷೇತ್ರದಲ್ಲಿ ಮುಂದುವರೆಯಬೇಕು ಎಂದರೆ ಸಮರ್ಥ ಅಭ್ಯರ್ಥಿಗೆ ಟಿಕೆಟ್ ನೀಡಬೇಕು. ಅದನ್ನು ಪಕ್ಷ ಮಾಡಿದೆ. ಅದನ್ನು ಬಿಟ್ಟು ಜೀನ್ಸ್, ಡಿಎನ್ಎ ಆಧಾರದ ಮೇಲೆ ಟಿಕೆಟ್ ಕೊಡುತ್ತಾ ಹೋದರೆ ಹೇಗೆ? ಹಾಗಾದರೆ ಪಕ್ಷದ ಸದಸ್ಯತ್ವಕ್ಕೆ ಬೆಲೆ ಇರುವುದಿಲ್ಲ ಎಂದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ತೇಜಸ್ವಿನಿ ಅನಂತ್ಕುಮಾರ್ ಅವರ ಟಿಕೆಟ್ ಕೈ ತಪ್ಪಲು ಬಿಎಲ್ ಸಂತೋಷ್ ಕಾರಣ. ಅವರೇ ತೇಜಸ್ವಿ ಸೂರ್ಯಗೆ ಟಿಕೆಟ್ ಕೊಡಿಸಲು ಕಾರಣ ಎಂಬ ಮಾತುಗಳನ್ನು ಬಿಜೆಪಿ ನಾಯಕರೇ ಆಡಿದ್ದರು. ಆದರೆ, ಈ ಬಗ್ಗೆ ಅವರು ಎಲ್ಲಿಯೂ ಬಾಯ್ಬಿಟ್ಟಿರಲಿಲ್ಲ. ಈ ಕುರಿತು ಇದೇ ಮೊದಲ ಬಾರಿಗೆ ಸಂತೋಷ್ ಮಾತನಾಡಿದ್ದಾರೆ.
ತೇಜಸ್ವಿ ಸೂರ್ಯಗೆ ಟಿಕೆಟ್ ಸಿಕ್ಕ ಕೂಡಲೇ ಅವರು ಸಂತೋಷ್ ಅವರಿಗೆ ಧನ್ಯವಾದ ತಿಳಿಸಿ, ಟ್ವೀಟ್ ಮಾಡಿದ್ದರು. ಅನುಕಂಪದ ಅಧಾರದ ಮೇಲೆ ಟಿಕೆಟ್ ನೀಡಿದರೆ ಪಕ್ಷ ಸಂಘಟನೆ ಮಾಡುವುದು ಹೇಗೆ. ಪಕ್ಷ ಮುಂದಿನ ಜನಾಂಗವನ್ನು ಬೆಳಸಲು ಯುವಕರಿಗೆ ಟಿಕೆಟ್ ನೀಡುವುದು ಅವಶ್ಯ ಎಂಬ ವಾದವನ್ನು ಕೂಡ ಸಂತೋಷ್ ದೆಹಲಿ ಹೈ ಕಮಾಂಡ್ ಮುಂದಿಟ್ಟಿದ್ದರು ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬಂದಿದ್ದವು.
Comments are closed.