ಕರ್ನಾಟಕ

ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಲಿಂಗೈಕ್ಯ

Pinterest LinkedIn Tumblr


ಬೆಂಗಳೂರು: ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ. ಕೆಲವೇ ಘಂಟೆಗಳ ಹಿಂದೆ ನುರಿತ ತಜ್ಞ ಸುದರ್ಶನ್​ ಬಲ್ಲಾಳ್​ ಪತ್ರಿಕಾಗೋಷ್ಠಿ ನಡೆಸಿ ಮಾತೆ ಮಹಾದೇವಿ ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು, ಕೋಮಾ ಸ್ಥಿತಿಗೆ ತೆರಳಿದ್ದಾರೆ ಎಂಬ ಮಾಹಿತಿ ನೀಡಿದ್ದರು.

ಬೆಂಗಳೂರು ಎಚ್​ಎಎಲ್​ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದೊಂದು ವಾರದಿಂದ ಮಾತೆ ಮಹಾದೇವಿ ಚಿಕಿತ್ಸೆ ಪಡೆಯುತ್ತಿದ್ದರು. ಕಿಡ್ನಿವೈಫಲ್ಯ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಮಾ.9ರಂದು ಆಸ್ಪತ್ರೆಗೆ ದಾಖಲಾಗಿದ್ದ ಮಾತೆ ಮಹಾದೇವಿ, ಪ್ರಥಮ ಮಹಿಳಾ ಜಗದ್ಗುರು ಎಂಭ ಖ್ಯಾತಿಗೆ ಪಾತ್ರರಾಗಿದ್ದವರು.

ಉತ್ತಮ ವಾಗ್ಮಿ, ಸಾಹಿತಿಯಾಗಿ ಪ್ರಸಿದ್ಧರಾಗಿದ್ದ ಅವರು, ಪ್ರತಿ ವರ್ಷ ಶರಣ ಸಮ್ಮೇಳನ ಆಯೋಜನೆ ಮಾಡುತ್ತಿದ್ದರು. ಕೂಡಲಸಂಗಮ, ಬಸವಕಲ್ಯಾಣದಲ್ಲಿ ಕಾರ್ಯಕ್ರಮ ಆಯೋಜಿಸಿ, ಶರಣ ಧರ್ಮ ಪ್ರಚಾರದಲ್ಲಿ ಸಕ್ರಿಯರಾಗಿದ್ದರು. ಲಿಂಗಾನಂದ ಮಹಾಸ್ವಾಮಿಗಳಿಂದ ಇಷ್ಟಲಿಂಗ ಧೀಕ್ಷೆ ಪಡೆದಿದ್ದ ಅವರು ಜನಿಸಿದ್ದು 1946ರ ಮಾರ್ಚ್ 13ರಂದು. ಚಿತ್ರದುರ್ಗ ಜಿಲ್ಲೆಯ ಸಾಸಲಹಟ್ಟಿಯಲ್ಲಿ ಅವರು ಜನಿಸಿದ್ದರು.

ಬಸವ ತತ್ವ ದರ್ಶನ ಬೃಹತ್ ಕೃತಿ ರಚಿಸಿದ ಖ್ಯಾತಿ ಮಾತೆ ಮಹಾದೇವಿ ಅವರಿಗೆ ಸೇರುತ್ತದೆ. ಧಾರವಾಡದಲ್ಲಿ ಅಕ್ಕಮಹಾದೇವಿ ಆಶ್ರಮ ಸ್ಥಾಪನೆ, ಮೊದಲ ಮಹಿಳಾ ಜಗದ್ಗುರು ಪೀಠ ಸ್ಥಾಪನೆ, ಕುಂಬಳಗೋಡಿನಲ್ಲಿ ಬಸವ ಗಂಗೋತ್ರಿ ಆಶ್ರಮ, ರಾಜಾಜಿನಗರದಲ್ಲಿ ಬಸವ ಮಂಟಪ ಸ್ಥಾಪನೆ ಅವರ ಸಾಧನೆಗಳಲ್ಲೊಂದು.

ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಮುನ್ನಲೆಗೆ ಬಂದಾಗ ಹೋರಾಟದ ನೇತೃತ್ವ ವಹಿಸಿದ್ದು ಮಾತೆ ಮಹಾದೇವಿಯವರು. ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾನಮಾನ ಪಡೆಯುವವರೆಗೂ ಹೋರಾಟ ನಡೆಸುವುದಾಗಿ ಮಹಾದೇವಿ ಹೇಳಿದ್ದರು. ಜತೆಗೆ ದೆಹಲಿಯಲ್ಲೂ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು.

Comments are closed.