ಕರ್ನಾಟಕ

ನಿಖಿಲ್​ ರಾಜಕೀಯ ಭವಿಷ್ಯ ಕಷ್ಟ!; ದ್ವಾರಕಾನಾಥ್ ಗುರೂಜಿ

Pinterest LinkedIn Tumblr


ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್​ ನೀಡುವ ಮೂಲಕ ಅವರ ರಾಜಕೀಯ ಪ್ರವೇಶಕ್ಕೆ ಸಿಎಂ ಕುಮಾರಸ್ವಾಮಿ ವೇದಿಕೆ ಸಜ್ಜುಗೊಳಿಸಿದ್ದಾರೆ. ಆದರೆ, ಇದೇ ಕ್ಷೇತ್ರದಿಂದ ಸುಮಲತಾ ಅಂಬರೀಷ್​ ಸ್ಪರ್ಧೆ ಮಾಡುತ್ತಿರುವುದರಿಂದ ಮಗನ ರಾಜಕೀಯ ಭವಿಷ್ಯದ ಬಗ್ಗೆ ಕುಮಾರಸ್ವಾಮಿ ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನೆನ್ನೆ ಕುಮಾರಸ್ವಾಮಿ ಅವರು ಮಗನೊಂದಿಗೆ ದ್ವಾರಕಾನಾಥ್​​ ಗುರೂಜಿ ಅವರನ್ನು ಭೇಟಿಯಾಗಿ, ಮಗನ ರಾಜಕೀಯ ಭವಿಷ್ಯ ಕೇಳಿದ್ದಾರೆ.

ಭೇಟಿ ವೇಳೆ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯ ಕಷ್ಟ ಎಂದು ದ್ವಾರಕಾನಾಥ್ ಗುರೂಜಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ. “ನಿಖಿಲ್ ಚುನಾವಣೆಗೆ ಸ್ಪರ್ಧೆ ಮಾಡಿಬಿಟ್ಟಿದ್ದಾರೆ. ಈಗ ನಾನು ನಿಖಿಲ್​ಗೆ ಆಶೀರ್ವಾದ ಮಾಡಲೇಬೇಕು. ಅಂತೆಯೇ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ,” ಎಂದು ದ್ವಾರಕಾನಾಥ್ ಹೇಳಿದ್ದಾರೆ. ಗುರೂಜಿಯವರ ಈ ಮಾತಿನಿಂದ ಸಿಎಂ ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರಂತೆ.

ನಿಖಿಲ್​ ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಬಗ್ಗೆ ಕುಮಾರಸ್ವಾಮಿ ತುಂಬಾನೇ ತಲೆಕೆಡಿಸಿಕೊಂಡಿದ್ದರು. ಮೊದಲ ಚಿತ್ರ ‘ಜಾಗ್ವಾರ್​’ಗೋಸ್ಕರ ಸಾಕಷ್ಟು ಹಣವನ್ನು ವೆಚ್ಚ ಮಾಡಿದ್ದರು. ಇದೀಗ ರಾಜಕೀಯದಲ್ಲಿ ನಿಖಿಲ್ ಭವಿಷ್ಯ ಏನಾಗಲಿದೆ ಎನ್ನುವ ಬಗ್ಗೆ ಕುಮಾರಸ್ವಾಮಿಗೆ ಚಿಂತೆ ನಡೆಸಿದ್ದಾರೆ ಎನ್ನಲಾಗಿದೆ.

ಆದರೆ, ನಿಖಿಲ್​ ವಿರುದ್ಧ ಸುಮಲತಾ ಸ್ಪರ್ಧಿಸಲಿದ್ದಾರೆ ಎಂದಾಗಲೇ ಅವರ ಮನಸ್ಸಲ್ಲಿ ಆತಂಕ ಮನೆ ಮಾಡಿತ್ತು. ಈಗ ದ್ವಾರಕನಾಥ್​ ಅವರ ಹೇಳಿಕೆಯಿಂದ ಕುಮಾರಸ್ವಾಮಿ ಮತ್ತಷ್ಟು ಚಿಂತೆಗೆ ಒಳಗಾಗಿದ್ದಾರೆ.

ಸಿಎಂ ಕುಮಾರಸ್ವಾಮಿ ಮತ್ತು ಎಚ್​.ಡಿ. ರೇವಣ್ಣ ಅವರು ಜ್ಯೋತಿಷ್ಯವನ್ನು ಬಹಳ ನಂಬುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೇ ಕಾರಣಕ್ಕೆ ಡಿಕೆ ಶಿವಕುಮಾರ್​ ಅವರ ಆಪ್ತರಾಗಿರುವ ರಾಜಗುರು ದ್ವಾರಕಾನಾಥ್​ ಅವರ ಮನೆಗೆ ನಿನ್ನೆ ರಾತ್ರಿ ತಮ್ಮೊಂದಿಗೆ ಮಗ ನಿಖಿಲ್ ಅವರನ್ನೂ ಕರೆದುಕೊಂಡು ಹೋಗಿರುವ ಸಿಎಂ ಕುಮಾರಸ್ವಾಮಿ, ದ್ವಾರಕನಾಥ್​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಆಶೀರ್ವಾದ ಪಡೆದಿದ್ದರು.

Comments are closed.