ಕರ್ನಾಟಕ

ನಾಲ್ವರು ಶಾಸಕರ ಅನರ್ಹತೆ ವಿಚಾರಣೆ ಮುಂದೂಡಿದ ಸ್ಪೀಕರ್ ರಮೇಶ್​ ಕುಮಾರ್​

Pinterest LinkedIn Tumblr


ಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆಯಡಿ ನಾಲ್ವರು ಶಾಸಕರನ್ನು ಅನರ್ಹಗೊಳಿಸುವ ಪ್ರಕರಣದ ವಿಚಾರಣೆಯನ್ನು ಇಂದು ನಡೆಸಬೇಕಾಗಿದ್ದ ಸ್ಪೀಕರ್​ ರಮೇಶ್​ ಕುಮಾರ್​ ದಿಢೀರ್​ ಎಂದು ವಿಚಾರಣೆಯನ್ನು ಮುಂದೂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್​ನ ನಾಲ್ವರು ಶಾಸಕರಾದ ರಮೇಶ್ ಜಾರಕಿಹೊಳಿ‌, ಉಮೇಶ್ ಜಾಧವ್, ಬಿ. ನಾಗೇಂದ್ರ, ಮಹೇಶ್ ಕುಮಟಳ್ಳಿ ವಿರುದ್ಧ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ದೂರು ನೀಡಿದ್ದರು. ಇಂದು ಅವರೆಲ್ಲರೂ ಖುದ್ದು ಹಾಜರಾಗಿ ವಿಚಾರಣೆಯಲ್ಲಿ ಪಾಲ್ಗೊಳ್ಳಬೇಕೆಂದು ಸ್ಪೀಕರ್​ ರಮೇಶ್​ ಕುಮಾರ್​ ದಿನಾಂಕವನ್ನು ನಿಗದಿಪಡಿಸಿದ್ದರು. ಹಾಜರಾಗಿ ವಿವರಣೆ ನೀಡಬೇಕೆಂದು ನಾಲ್ವರಿಗೂ ಸೂಚನೆ ನೀಡಲಾಗಿತ್ತು. ಆದರೆ, ಇದ್ದಕ್ಕಿದ್ದಂತೆ ವಿಚಾರಣೆಯನ್ನು ಮುಂದೂಡಲಾಗಿದೆ.

ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಬಗ್ಗೆ ಈ ನಾಲ್ವರ ವಿರುದ್ಧ ಸಿದ್ದರಾಮಯ್ಯ ಸ್ಪೀಕರ್​ ರಮೇಶ್​ ಕುಮಾರ್​ ಅವರಿಗೆ ದೂರು ನೀಡಿದ್ದ ಬೆನ್ನಲ್ಲೇ ಅತೃಪ್ತ ಶಾಸಕ ಉಮೇಶ್​ ಜಾಧವ್​ ಕಾಂಗ್ರೆಸ್​ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಆದರೆ, ಆ ರಾಜೀನಾಮೆಯನ್ನು ಸ್ಪೀಕರ್​ ಇನ್ನೂ ಅಂಗೀಕಾರ ಮಾಡಿಲ್ಲ. ಸದ್ಯಕ್ಕೆ ಮುಂದಿನ ವಿಚಾರಣೆಯ ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ. ಸ್ಪೀಕರ್​ ವಿಚಾರಣೆಯನ್ನು ಮುಂದೂಡಿರುವುದರಿಂದ ಸದ್ಯಕ್ಕೆ ನಾಲ್ವರು ಶಾಸಕರಿಗೆ ರಿಲೀಫ್ ಸಿಕ್ಕಂತಾಗಿದೆ.

ಈ ನಡುವೆ ನಿನ್ನೆಯಷ್ಟೇ ಮತ್ತೆ ಕಾಂಗ್ರೆಸ್​ ಪರವಾಗಿ ಮಾತನಾಡಿದ್ದ ಅತೃಪ್ತ ಶಾಸಕ ರಮೇಶ್​ ಜಾರಕಿಹೊಳಿ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬೆಂಬಲ ನೀಡುವುದಾಗಿ ಹೇಳಿಕೊಂಡಿದ್ದು ಕುತೂಹಲ ಮೂಡಿಸಿತ್ತು. ಲೋಕಸಭೆಗೆ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂಬುದು ಹೈಕಮಾಂಡ್​ಗೆ ಬಿಟ್ಟ ವಿಚಾರ. ನಾನು ಅವರ ಆದೇಶದಂತೆ ಕೆಲಸ ಮಾಡುತ್ತೇನೆ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದರು.

Comments are closed.