ಮಂಡ್ಯ: ಮಂಡ್ಯದಲ್ಲಿ ರಾಜಕಾರಣ ಕಡು ಬೇಸಿಗೆಯಂತೆಯೇ ಕಾವೇರುತ್ತಿದೆ. ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಇಡೀ ದೇಶವೇ ಮಂಡ್ಯದತ್ತ ತಿರುಗಿ ನೋಡುತ್ತಿದೆ. ಇಷ್ಟೆಲ್ಲಾ ಸದ್ದಿಗೆ ರಾಜ್ಯದ ಸಿಎಂ ಎಚ್.ಡಿ ಕುಮಾರಸ್ವಾಮಿಯವರ ಪುತ್ರ ಮತ್ತು ಸುಮಲತಾ ಅಂಬರೀಶ್ ಅವರು ಸ್ಪರ್ಧೆ ಮಾಡುತ್ತಿರುವುದೇ ಕಾರಣ. ಈ ಮಧ್ಯೆ ಜೆಡಿಎಸ್ ನಾಯಕರು ಸುಮಲತಾ ವಿರುದ್ಧ ನೀಡುತ್ತಿರುವ ಹೇಳಿಕೆಗಳು ಇಲ್ಲಿ ರಾಜಕೀಯದ ಕಾವಿಗೆ ಮತ್ತಷ್ಟು ಕಿಚ್ಚು ಹೊತ್ತಿಸಿದೆ. ಹೀಗಾಗಿ ಮಂಡ್ಯ ಜನ ಜೆಡಿಎಸ್ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
ಹೌದು, ಈ ಬಾರಿ ಕಡು ಬೇಸಿಗೆ ಜೊತೆಗೆ ಲೋಕಸಭೆ ಚುನಾವಣೆ ಬಿಸಿ ಕೂಡ ತಾರಕಕ್ಕೇರಿದೆ. ಒಂದೆಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು ಕಣಕ್ಕಿಳಿಯುತ್ತಿದ್ದಾರೆ. ಈಗಾಗಲೇ ಇಬ್ಬರು ಪ್ರಚಾರದಲ್ಲಿ ತೊಡಗಿರುವುದು ಚುನಾವಣಾ ಕಾವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ನಡುವೇ ಸುಮಲತಾ ವಿರುದ್ದ ಮುಗಿಬಿದ್ದು ಹೇಳಿಕೆ ನೀಡುತ್ತಿರುವ ಜೆಡಿಎಸ್ ನಾಯಕರ ಇಡೀ ಮಂಡ್ಯವೇ ಕಿಡಿಕಾರುತ್ತಿದೆ. ಜನರಿಂದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇನ್ನು ಅಂಬರೀಶ್ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರಂತೂ ಮಾಜಿ ಪ್ರಧಾನಿ ದೇವೆಗೌಡರ ವಿರುದ್ಧ ಕೆಂಡಮಂಡಲ ಆಗಿದ್ದಾರೆ.
ಇನ್ನು ದೇವೆಗೌಡರ ಕುಟುಂಬ ರಾಜಕಾರಣ ವಿರುದ್ಧ ಸಾಕಷ್ಟು ಚರ್ಚೆಯಾಗುತ್ತಿದೆ. ತಮ್ಮ ಪಕ್ಷದ ಕಾರ್ಯಕರ್ತರೇ ಗೌಡರ ಕುಟುಂಬ ರಾಜಕಾರಣ ಬಗ್ಗೆ ಚಕಾರ ಎತ್ತಿದ್ದಾರೆ. ಅಲ್ಲದೇ ಹಾಸನ ಅಭ್ಯರ್ಥಿಯನ್ನ ಮಂಡ್ಯಕ್ಕೆ ತಂದು ನಿಲ್ಲಿಸುತ್ತಿರೋದು ಕಾಂಗ್ರೆಸ್ನಲ್ಲಿ ಕೂಡ ಭಿನ್ನಮತ ಮೂಡಿಸಿದೆ.
ಈಗಾಗಲೇ ಮೈತ್ರಿ ಅಭ್ಯರ್ಥಿಗೆ ಕಾಂಗ್ರೆಸ್ಸಿಗರೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಮಲತಾ ಅವರಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿರುವುದು ಹೈಕಮಾಂಡ್ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಜತೆಗೆ ನಿಖಿಲ್ಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರೊಬ್ಬರು ನಾಳೆಯಿಂದ ಮೂರು ದಿನಗಳ ಕಾಲ ಉಪವಾಸ ಧರಣಿ ಆರಂಭಿಸಲಿದ್ದಾರೆ. ಜಿಲ್ಲೆಯ ಸ್ವಾಭಿಮಾನ ಉಳಿಸಲು ಸ್ಥಳೀಯರಿಗೆ ಟಿಕೇಟ್ ನೀಡಲು ಒತ್ತಾಯಿಸಲಿದ್ದಾರೆ. ಇಲ್ಲಿನ ಸಂಘಟನೆಗಳು ಕೂಡ ಧರಣಿಗೆ ಕೈ ಜೋಡಿಸುವ ಸಾಧ್ಯತೆಯಿದೆ.
Comments are closed.