ಕರ್ನಾಟಕ

ಮೈಸೂರಿನಿಂದ ಸುಮಲತಾಗೆ ಕಾಂಗ್ರೆಸ್​ ಟಿಕೆಟ್​

Pinterest LinkedIn Tumblr


ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ನಡುವೆ ಹಗ್ಗಜಗ್ಗಾಟ ಆರಂಭವಾಗಿದೆ. ಜೆಡಿಎಸ್​ 10 ಸೀಟನ್ನಾದರೂ ಕೊಡಿ ಎಂದು ಕೇಳುತ್ತಿದ್ದರೆ ರಾಜ್ಯ ಕಾಂಗ್ರೆಸ್​ ನಾಯಕರು 6 ಸೀಟುಗಳನ್ನು ಬಿಟ್ಟುಕೊಡಲು ಒಪ್ಪಿಕೊಂಡಿದ್ದಾರೆ. ಈ ಎಲ್ಲದರ ನಡುವೆ ಜೆಡಿಎಸ್​ ಅಧಿಕಾರದಲ್ಲಿರುವ ಮಂಡ್ಯ ಕ್ಷೇತ್ರವೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಹಿರಿಯ ನಟ ಅಂಬರೀಶ್​ ನಿಧನದ ನಂತರ ಸಕ್ರಿಯ ರಾಜಕೀಯಕ್ಕೆ ಕಾಲಿಟ್ಟಿರುವ ಸುಮಲತಾ ಮಂಡ್ಯ ಲೋಕಸಭೆಗೆ ಸ್ಪರ್ಧಿಸಲು ಕಾಂಗ್ರೆಸ್​ನಿಂದ ಟಿಕೆಟ್​ ಕೇಳುತ್ತಿದ್ದಾರೆ. ಆದರೆ ಕಾಂಗ್ರೆಸ್​ ಮೈತ್ರಿಯ ನೆಪವೊಡ್ಡಿ ಟಿಕೆಟ್​ ನೀಡಲು ಸಾಧ್ಯವಿಲ್ಲ ಎಂದಿದೆ. ಟಿಕೆಟ್​ ನೀಡದಿದ್ದರೂ ತಾವು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸುಮಲತಾ ಗಟ್ಟಿ ನಿರ್ಧಾರವನ್ನು ಈಗಾಗಲೇ ಪ್ರಕಟಿಸಿದ್ದಾರೆ. ಒಂದೆಡೆ ದೇವೇಗೌಡರ ಕುಟುಂಬದ ಕುಡಿ ನಿಖಿಲ್​ ಕುಮಾರಸ್ವಾಮಿಯವರನ್ನು ಮಂಡ್ಯದಿಂದ ಸಕ್ರಿಯ ರಾಜಕಾರಣಕ್ಕೆ ತರಲು ಜೆಡಿಎಸ್​ ಚಿಂತಿಸಿದೆ. ಇನ್ನೊಂದೆಡೆ ಸುಮಲತಾ ಅಡ್ಡಗಾಲಾಗಿ ನಿಂತಿದ್ದಾರೆ. ಅಂಬರೀಶ್​ ಅಗಲಿಕೆಯಿಂದ ಮಂಡ್ಯದ ಜನತೆ ಸುಮಲತಾ ಅವರನ್ನು ಗೆಲ್ಲಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಈ ಎಲ್ಲ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಂಡುಕೊಳ್ಳುವ ಸಲುವಾಗಿ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಎಚ್​ಡಿ ದೇವೇಗೌಡ ಮತ್ತು ಕಾಂಗ್ರೆಸ್​ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​ ಸಭೆ ಸೇರಿದ್ದರು. ಸಭೆಯಲ್ಲಿ ಎರಡೂ ಪಕ್ಷಗಳ ನಾಯಕರು ಸಮಸ್ಯೆಗೆ ಉತ್ತರ ಕಂಡುಕೊಂಡಿದ್ದು ಸುಮಲತಾ ಒಪ್ಪಿದರೆ ಮೈಸೂರಿನಿಂದ ಟಿಕೆಟ್​ ಕೊಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಸುಮಲತಾರಿಗೆ ಕಾಂಗ್ರೆಸ್​ನಿಂದಲೇ ಟಿಕೆಟ್​ ನೀಡುವ ಮೂಲಕ ಮನವೊಲಿಸುವ ತಂತ್ರಕ್ಕೆ ಕಾಂಗ್ರೆಸ್​ ಮುಖಂಡರು ಮುಂದಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಈ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಸೂಚನೆಯನ್ನೂ ನೀಡಿದೆ ಎನ್ನಲಾಗಿದೆ. ಕಾಂಗ್ರೆಸ್​ ಬೇಡದಿದ್ದರೆ ಜೆಡಿಎಸ್​ನಿಂದಲೂ ಮೈಸೂರಿನಿಂದ ಸ್ಪರ್ಧಿಸಲು ಟಿಕೆಟ್​ ನೀಡಲು ದೇವೇಗೌಡರು ಒಪ್ಪಿದ್ದಾರೆ ಎನ್ನಲಾಗಿದೆ. ಈ ಮೂಲಕ ಕೊಡಗು – ಮೈಸೂರು ಕ್ಷೇತ್ರದಲ್ಲಿನ ಒಕ್ಕಲಿಗ ಮತಗಳ ಕ್ರೋಢೀಕರಣಕ್ಕೆ ಮೈತ್ರಿ ಪಕ್ಷಗಳು ಮುಂದಾಗಲಿವೆ ಎನ್ನಲಾಗುತ್ತಿದೆ.

ಆದರೆ ಮೈಸೂರಿನಿಂದ ಕಾಂಗ್ರೆಸ್​ ಸಂಭಾವ್ಯ ಅಭ್ಯರ್ಥಿ ಎಂದೇ ಕರೆಸಿಕೊಳ್ಳುತ್ತಿರುವ ಸಿ.ಎಚ್​. ವಿಜಯ್​ ಶಂಕರ್​ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕು. ವಿಜಯ್​ ಶಂಕರ್​ ಎರಡು ಬಾರಿ ಸಂಸದರಾಗಿದ್ದವರು. ಈ ಬಾರಿ ಮೈಸೂರಿನಿಂದ ಸ್ಪರ್ಧಿಸಿದರೆ ಗೆಲುವು ನಿಶ್ಚಿತ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಆದರೆ ಈ ಹೊತ್ತಿನಲ್ಲಿ ಸುಮಲತಾರನ್ನು ಮೈಸೂರಿನಿಂದ ಕಣಕ್ಕಿಳಿಸುವ ಮಾತುಗಳು ಮೈತ್ರಿ ಪಕ್ಷಗಳ ಮುಖಂಡರಿಂದ ಕೇಳಿ ಬರುತ್ತಿದೆ. ಮೈತ್ರಿ ಪಕ್ಷಗಳ ಈ ನಿರ್ಧಾರದಿಂದ ಮಂಡ್ಯಕ್ಕಷ್ಟೇ ಸೀಮಿತವಾಗಿರುವ ಸಮಸ್ಯೆ ಪಕ್ಕದ ಜಿಲ್ಲೆ ಮೈಸೂರಿಗೂ ಹರಡುವ ಸಾಧ್ಯತೆಯಿದೆ ಎನ್ನುತ್ತಾರೆ ರಾಜಕೀಯ ಪಂಡಿತರು.

Comments are closed.