ಕರ್ನಾಟಕ

ಬಿಜೆಪಿ ನಾಯಕರಿಂದ ಸಿದ್ದರಾಮಯ್ಯ ವಿರುದ್ಧ ‘ತಿಲಕ’ ಸಮರ

Pinterest LinkedIn Tumblr


ಬೆಂಗಳೂರು: ಉದ್ದ ನಾಮ ಇಟ್ಟವರನ್ನು ಕಂಡರೆ ನನಗೆ ಭಯ ಎಂದು ಬಿಜೆಪಿ ಬಗ್ಗೆ ವ್ಯಂಗ್ಯವಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆರಂಭಿಸಿರುವ ‘ಸೆಲ್ಫಿ ವಿತ್‌ ತಿಲಕ್‌ ‘ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಟ್ವಿಟರ್‌ನಲ್ಲಿ ಬುಧವಾರ ನ್ಯಾಷನಲ್‌ ಟ್ರೆಂಡ್‌ ಆಗಿ ಪರಿಣಮಿಸಿದೆ. ಇದರ ಬೆನ್ನಲ್ಲೇ ಇದಕ್ಕೆ ಸ್ಪಷ್ಟೀಕರಣ ನೀಡಿರುವ ಸಿದ್ದರಾಮಯ್ಯ ಉದ್ದ ನಾಮ ಧರಿಸುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ ಬಿಜೆಪಿ ನಾಯಕರ ಕುರಿತು ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ನೀಡುತ್ತಿದ್ದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿತ್ತು. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮತ್ತೆ ಸಿದ್ದರಾಮಯ್ಯ ‘ಟ್ರೋಲ್‌’ ಆಗುತ್ತಿದ್ದಾರೆ. ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ತಿಲಕ ಧಾರಣೆ ಮಾಡಿ ಸೆಲ್ಫಿ ಫೋಟೊ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಅಫ್‌ಲೋಡ್‌ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

”ತಿಲಕಕ್ಕೂ ರಾಜಕಾರಣಕ್ಕೂ ಸಂಬಂಧವಿಲ್ಲ. ಭಾರತೀಯ ಸಂಸ್ಕೃತಿಯ ಪ್ರತೀಕವಾದ ತಿಲಕ ಧರಿಸುವುದಕ್ಕೆ ಹೆಮ್ಮೆ ಎನಿಸುತ್ತದೆ. ಕಾಂಗ್ರೆಸ್‌ ನಾಯಕರಿಗೆ, ಸಭ್ಯತೆ, ಆತ್ಮ ಗೌರವ ಹಾಗೂ ನಾಚಿಕೆ ಇಲ್ಲ. ಬೌದ್ಧಿಕವಾಗಿ ದಿವಾಳಿಯಾಗಿರುವ ಅವರಲ್ಲಿ ವಿಷಕಾರುವ ಮನಸ್ಥಿತಿ ಮಾತ್ರ ಉಳಿದಿದೆ ” ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವಿಟರ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

”ಚುನಾವಣೆ ಸಮಯದಲ್ಲಿ ಇದೇ ನಾಮ ನಿಮ್ಮ ಹಣೆಯ ಮೇಲೆ ಇತ್ತು. ಆಗ ನಿಮಗೆ ಭಯ ಇರಲಿಲ್ಲವೇ ? ಬೇಕಾದಾಗ ಕುಂಕುಮ, ತಿಲಕ ಹಚ್ಚಿ, ಬೇಡವಾದಾಗ ಅದೇ ಸಂಪ್ರದಾಯದ ವಿರುದ್ಧ ಮತಗಳಿಕೆಗೋಸ್ಕರ ಜನರನ್ನು ಎತ್ತಿ ಕಟ್ಟುವ ನಿಮ್ಮ ಕೀಳು ಮನಸ್ಥಿತಿಗೆ ಭಾರತದ ಯಾವ ಭಾಗದಲ್ಲೂ ಬೆಲೆಯಿಲ್ಲ. ಇನ್ನೂ ಎಷ್ಟು ನೀಚ ರಾಜಕಾರಣ ಮಾಡುತ್ತೀರಿ ಸಿದ್ದರಾಮಯ್ಯ ಸಾರ್‌ ” ಎಂದು ಶಾಸಕ ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ. ಜತೆಗೆ ತಮ್ಮ ಪುತ್ರನ ಜತೆಗೆ ಸಿದ್ದರಾಮಯ್ಯ ಕುಂಕುಮ ಧರಿಸಿ ದೇವಸ್ಥಾನದಲ್ಲಿ ಫೋಸು ನೀಡುತ್ತಿರುವ ಫೋಟೋವನ್ನು ಟ್ಯಾಗ್‌ ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ರಾಬರ್ಟ್‌ ವಾದ್ರಾ ಪ್ರಿಯಾಂಕ ವಾದ್ರಾ ತಿಲಕ ಧರಿಸಿರುವ ಫೋಟೊವನ್ನು ಶೇರ್‌ ಮಾಡಿ ಸಿದ್ದರಾಮಯ್ಯನವರೇ ಇವರನ್ನು ಕಂಡರೆ ಭಯವಿಲ್ಲವೇ ? ಎಂದು ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.

ತಿರುಗೇಟು

ಸರಣಿ ಟ್ವೀಟ್‌ ಮೂಲಕ ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ”ಹೌದು, ತಿಲಕ ಇಟ್ಟುಕೊಂಡವರನ್ನು ನೋಡಿದರೆ ಭಯವಾಗುತ್ತದೆ ಎಂದು ಹೇಳಿರುವುದು ನಿಜ. ಬಹಳಷ್ಟು ಕ್ರಿಮಿನಲ್‌ಗಳು ತಮ್ಮ ರಕ್ಷಣೆಗಾಗಿ ತಿಲಕ ಧರಿಸಿ ಮೆರೆದಾಡುತ್ತಿದ್ದಾರೆ. ಇವರು ಧರ್ಮದ್ರೋಹಿಗಳು ಮಾತ್ರವಲ್ಲ, ಸಮಾಜ ದ್ರೋಹಿಗಳೂ ಕೂಡಾ. ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೆ ಹೇಳಿದ್ದೇನೆ, ಏನಿವಾಗ ? ” ಎಂದು ಪ್ರಶ್ನಿಸಿದ್ದಾರೆ. ”ನಾನು ಬಿಜೆಪಿ ನಾಯಕರಿಗಿಂತ ಒಳ್ಳೆಯ ಹಿಂದು. ನಾನೆಂದೂ ತಿಲಕ, ಕಾವಿಯನ್ನು ರಾಜಕೀಯಕ್ಕೆ ದುರುಪಯೋಗಪಡಿಸಿಕೊಂಡಿಲ್ಲ. ನನ್ನದು ಜನಪರ ರಾಜಕಾರಣ. ದೇವರು, ಧರ್ಮ ನನ್ನ ಮನೆಯೊಳಗಿನ ನಂಬಿಕೆ ” ಎಂದು ಸಮರ್ಥಿಸಿಕೊಂಡಿದ್ದಾರೆ.

”ಉತ್ತರ ಪ್ರದೇಶದಲ್ಲೊಬ್ಬರು ಮುಖ್ಯಮಂತ್ರಿ ಇದ್ದಾರೆ. ಮೈ ತುಂಬಾ ಕಾವಿ ಬಟ್ಟೆ , ಮುಖ ತುಂಬಾ ಕುಂಕುಮ ಬಳಿದುಕೊಳ್ಳುತ್ತಾರೆ. ಆದರೆ ಅವರ ವಿರುದ್ಧ ಹತ್ತಾರು ಕ್ರಿಮಿನಲ್‌ ಕೇಸ್‌ಗಳಿವೆ. ಈ ಕುಂಕುಮಧಾರಿಯನ್ನು ಕಂಡಾಗ ಜನರಿಗೆ ಭಯ ಹುಟ್ಟದೆ ಗೌರವ ಹುಟ್ಟುತ್ತಾ ?,” ಎಂದು ಯೋಗಿ ಆದಿತ್ಯನಾಥ ಉದ್ದೇಶಿಸಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

Comments are closed.