ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಕಲ ರೀತಿಯಲ್ಲಿ ಸಜ್ಜು ನಡೆಸುತ್ತಿದೆ. ಸಮರದಲ್ಲಿ ಗೆಲುವು ಸಾಧಿಸಲು ಹೊಸ ರಣತಂತ್ರ ರೂಪಿಸಲು ಮುಂದಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಮೂರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲು ನಿರ್ಧರಿಸಿದೆ.
ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ದಿನೇಶ್ ಗುಂಡೂರಾವ್ ಹಾಗೂ ಎಸ್.ಆರ್.ಪಾಟೀಲ್ ಕಾರ್ಯಾಧ್ಯಕ್ಷರಾಗಿದ್ದರು. ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಎಸ್.ಆರ್.ಪಾಟೀಲ್ ಹಾಗೂ ಈಶ್ವರ್ ಖಂಡ್ರೆ ಇಬ್ಬರನ್ನು ಕಾರ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿತ್ತು. ಆದರೆ ಎಸ್.ಆರ್. ಪಾಟೀಲ್ ಅವರು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಕಾರಣ ನೀಡಿ ರಾಜೀನಾಮೆ ನೀಡಿದ್ದರು. ಇವರ ರಾಜೀನಾಮೆ ಬಳಿಕ ಒಬ್ಬರಿಗೆ ಸ್ಥಾನ ನೀಡಲಾಗಿತ್ತು. ಸದ್ಯ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ ಒಬ್ಬರೇ ಇದ್ದಾರೆ.
ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಒಟ್ಟು 4 ಕಾರ್ಯಾಧ್ಯಕ್ಷರನ್ನು ನೇಮಿಸಲು ಕಾಂಗ್ರೆಸ್ ನಿರ್ಧರಿಸಿದೆ. ಭರ್ತಿಯಾಗಿರುವ ಒಂದನ್ನು ಹೊರತುಪಡಿಸಿ ಇನ್ನುಳಿದ ಮೂವರು ಕಾರ್ಯಾಧ್ಯಕ್ಷರ ನೇಮಕಕ್ಕೆ ಚಿಂತನೆ ನಡೆಸಿದೆ.
ಎಸ್ಸಿ ಎಸ್ಟಿ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಹೆಚ್.ಎಸ್.ಮಹದೇವಪ್ಪನವರಿಗೆ ಒಂದು ಕಾರ್ಯಾಧ್ಯಕ್ಷ ಸ್ಥಾನ ನೀಡಲು ತೀರ್ಮಾನ ಮಾಡಿದೆ. ಆ ಮೂಲಕ ಹೆಚ್ಚು ಎಸ್ಸಿ ಎಸ್ಟಿ ಮತಗಳನ್ನು ಪಡೆಯಲು ರಣತಂತ್ರ ನಡೆಸಿದೆ. ಮತ್ತೊಂದು ಹುದ್ದೆಯನ್ನು ಒಕ್ಕಲಿಗರಿಗೆ ನೀಡುವಂತೆ ಒತ್ತಾಯವಿದೆ ಎನ್ನಲಾಗಿದೆ. ಇನ್ನೊಂದು ಸ್ಥಾನ ಲಿಂಗಾಯತರಿಗೆ ಬೇಕಿದೆ. ಆದರೆ ಈಗಾಗಲೇ ಲಿಂಗಾಯತ ಈಶ್ವರ್ ಖಂಡ್ರೆಗೆ ಸ್ಥಾನ ನೀಡಿರುವ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದ ನಾಯಕರನ್ನು ನೇಮಿಸಲು ನಿರ್ಧರಿಸಿದೆ. ಅದರೆ ಯಾರೆಂಬುದು ಇನ್ನೂ ಖಚಿತವಾಗಿಲ್ಲ.
ಒಕ್ಕಲಿಗರು, ಲಿಂಗಾಯತರು ಹಾಗೂ ಎಸ್ಸಿ, ಎಸ್ಟಿ ಸಮುದಾಯಗಳನ್ನು ಸೆಳೆಯಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ನಡೆಸಿದೆ. ಚುನಾವಣೆಯಲ್ಲಿ ಮೂವರೂ ಕಾರ್ಯಾಧ್ಯಕ್ಷರಿಗೂ ಪ್ರತ್ಯೇಕ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ.
Comments are closed.