ಗುಡಿಗೆರೆ (ಮಂಡ್ಯ): ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಯೋಧ ಗುರು ಅಂತ್ಯಕ್ರಿಯೆ ಶನಿವಾರ ರಾತ್ರಿ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಂಡು, ಹುತಾತ್ಮ ಯೋಧನಿಗೆ ಸರ್ಕಾರದ ಪರವಾಗಿ ಗೌರವ ವಂದನೆ ಸಲ್ಲಿಸಿ, ಮೃತರ ಹೆಂಡತಿ ಕಲಾವತಿ ಅವರಿಗೆ 25 ಲಕ್ಷದ ಚೆಕ್ ಅನ್ನು ನೀಡಿದರು.
ಎಲ್ಲ ಕಾರ್ಯವನ್ನು ಮುಗಿಸಿಕೊಂಡು ಸಿಎಂ ಕುಮಾರಸ್ವಾಮಿ ಹೊರಡಲು ತಮ್ಮ ಕಾರಿನಲ್ಲಿ ಬಂದು ಕುಳಿತಾಗ, ನೆರೆದಿದ್ದ ಜನರು ಕಾರನ್ನು ಅಡ್ಡಗಟ್ಟಿದರು. ಹುತಾತ್ಮ ಯೋಧ ಗುರು ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ಸಿಎಂ ವಿರುದ್ಧ ದಿಕ್ಕಾರ ಕೂಗಿದರು.
ಕ್ಷಣದಲ್ಲೇ ನಡೆದ ಈ ಘಟನೆಯಿಂದ ವಿಚಲಿತರಾದ ಪೊಲೀಸರು ಜನರನ್ನು ಸಮಾಧಾನಪಡಿಸಲು ಮುಂದಾದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಸಿಎಂ ಕಾರು ಅಡ್ಡಗಟ್ಟಿದ ಜನರನ್ನು ಲಾಠಿ ಬೀಸಿ ಚದುರಿಸಿದರು. ನಂತರ ಪೊಲೀಸರ ಭದ್ರತೆಯಲ್ಲಿ ಅಂತ್ಯ ಸಂಸ್ಕಾರ ಸ್ಥಳದಿಂದ ಹೊರ ಬಂದರು.
ಮೋದಿ ಪರ ಘೋಷಣೆ
ಹುತಾತ್ಮ ಯೋಧನ ಅಂತ್ಯ ಸಂಸ್ಕಾರ ಮುಗಿಸಿಕೊಂಡು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೊರಡುವ ವೇಳೆ ಸ್ಥಳದಲ್ಲಿದ್ದ ಜನರು ಮೋದಿ ಮೋದಿ ಮೋದಿ… ಎಂದು ಘೋಷಣೆ ಕೂಗಿದರು.
Comments are closed.