ಬೆಂಗಳೂರು: ಕಾಂಗ್ರೆಸ್ನಿಂದ ಅತೃಪ್ತಗೊಂಡಿರುವ ಶಾಸಕರು ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ವಿಪ್ ಜಾರಿ ಮಾಡಿದರೂ ಮತ್ತೆ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಮಹೇಶ್ ಕುಮಟಹಳ್ಳಿ, ಬಿ ನಾಗೇಂದ್ರ ಗೈರಾಗುವ ಮೂಲಕ ಆಪರೇಷನ್ ಕಮಲ ನಡೆಯಲಿದೆ ಎಂಬ ಸುಳಿವನ್ನು ಬಿಟ್ಟುಕೊಂಡಿದ್ದಾರೆ. ಅಲ್ಲದೇ ಜಂಟಿ ಅಧಿವೇಶನದಂದು ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಮಾಡಿರುವ ಬಿಜೆಪಿ ಈ ಅನುಮಾನದ ಹೊಗೆಯನ್ನು ಮತ್ತಷ್ಟು ಗಟ್ಟಿ ಮಾಡಿದೆ.
ರಾಜ್ಯ ಬೆಳವಣಿಗೆ ಕುರಿತು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಈ ಆಪರೇಷನ್ ಕಮಲದ ಕುರಿತು ಹೈಕಮಾಂಡ್ಗೆ ನಿನ್ನೆ ವರದಿ ನೀಡಿದೆ. ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಈ ಕುರಿತು ಮಾಹಿತಿ ನೀಡಲಾಗಿದ್ದು, ಬಿಜೆಪಿ ಸರ್ಕಾರ ಬೀಳಿಸುವ ಅವಿರಹಿತ ಯತ್ನ ಮನದಟ್ಟು ಮಾಡಲಾಗಿದೆ. ಈಗಾಗಲೇ ಎರಡ್ಮೂರು ಬಾರಿ ಬಿಜೆಪಿಯ ಈ ತಂತ್ರವನ್ನು ವಿಫಲಗೊಳಿಸಿ ದೇಶದ ಮಟ್ಟದಲ್ಲಿ ಕಮಲ ನಡೆಗೆ ಟೀಕೆ ವ್ಯಕ್ತವಾದರೂ ಇದನ್ನೆ ಮುಂದುವರೆಸಿರುವ ಅವರ ಕ್ರಮಕ್ಕೆ ರಾಹುಲ್ ಕೂಡ ಆತಂಕ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಸರ್ಕಾರ ಬೀಳಿಸಲು ಬಿಡಬಾರದು ಎಂದು ಖಡಕ್ ಸಂದೇಶನವನ್ನು ವೇಣುಗೋಪಾಲ್ ಅವರಿಗೆ ನೀಡಿದ್ದಾರೆ.
ರಿವರ್ಸ್ ಆಪರೇಷನ್ ಕಮಲಕ್ಕೆ ಸಜ್ಜಾದ ಕಾಂಗ್ರೆಸ್
ಬಿಜೆಪಿಗೆ ಆಪರೇಷನ್ ಕಮಲ ನಿಲ್ಲಿಸುವುದಕ್ಕೆ ಮುಂದಾಗುತ್ತಿಲ್ಲ ಎಂಬ ಬಗ್ಗೆ ಅರಿತ ಕಾಂಗ್ರೆಸ್ ಅಧ್ಯಕ್ಷ ನಮ್ಮ ಸರ್ಕಾರ ಉಳಿಸಲು ಸಲುವಾಗಿ ರಿವರ್ಸ್ ಆಪರೇಷನ್ಗೆ ಮುಂದಾಗುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ನಮ್ಮ ಶಾಸಕರು ಬಿಜೆಪಿಗೆ ಹೋದರೆ ಬಿಜೆಪಿಯ ಶಾಸಕರನ್ನು ಕಾಂಗ್ರೆಸ್ಗೆ ಕರೆತನ್ನಿ. ಅಲ್ಲದೇ ಅವರಿಗೆ ಸಚಿವ ಸ್ಥಾನವನ್ನು ನೀಡುವುದಾಗಿ ತಿಳಿಸಿ ಎಂದಿದ್ದಾರೆ. ಮೈತ್ರಿ ಸರ್ಕಾರದಲ್ಲಿ ತಮ್ಮ ಪಾಲಿನ ಎಲ್ಲ ಸಚಿವ ಸ್ಥಾನಗಳನ್ನು ನೇಮಕ ಮಾಡಲಾಗಿದೆ. ಬಿಜೆಪಿಯಿಂದ ಬಂದ ಶಾಸಕರಿಗೆ ಸಚಿವ ಸ್ಥಾನ ಮಾಡಬೇಕಾದರೆ ನಮ್ಮ ಸಚಿವರು ಸ್ಥಾನ ತ್ಯಾಗಕ್ಕೆ ಮುಂದಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಚಿವರು ಸರ್ಕಾರ ಉಳಿಸಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಬೇಕು ಎಂದು ಸೂಚಿಸಿದ್ದಾರೆ.
ಜೆಡಿಎಸ್ನ ಎರಡು ಸ್ಥಾನ ಖಾಲಿ ಇದ್ದು, ಆ ಸ್ಥಾನವನ್ನು ಪಕ್ಷಕ್ಕೆ ಬಂದವರಿಗೆ ನೀಡುವ ಕುರಿತು ತಿಳಿಸಿದ್ದಾರೆ. ನಾಲ್ಕು ಶಾಸಕರು ಏನಾದರೂ ಕಾಂಗ್ರೆಸ್ ಕೈ ಹಿಡಿದರೆ ಈ ಶಾಸಕರಿಗೆ ಈ ನಾಲ್ಕು ಸಚಿವ ಸ್ಥಾನ ನೀಡುವ ಬಗ್ಗೆ ಮನದಟ್ಟು ಮಾಡುವಂತೆ ತಿಳಿಸಲಾಗಿದೆ.
ಡಿಕೆಶಿ, ಜೆಡಿಎಸ್ ನಾಯಕರಿಗೆ ಹೊಣೆ
ಆಪರೇಷನ್ ಕಮಲಕ್ಕೆ ಪ್ರತಿಯಾಗಿ ರಿವರ್ಸ್ ಆಪರೇಷನ್ ನಡೆಸಲು ಸೂಚನೆ ನೀಡಿರುವ ಹೈ ಕಮಾಂಡ್ ಇದರ ಹೊಣೆಯನ್ನು ಸಚಿವ ಡಿಕೆ ಶಿವಕುಮಾರ್ ಹಾಗೂ ಜೆಡಿಎಸ್ ನಾಯಕರಿಗೆ ವಹಿಸಿದ್ದಾರೆ.ಪಕ್ಷಕ್ಕೆ ಸೂಕ್ತವಾದ ಅಭ್ಯರ್ಥಿಗಳು ಯಾರು. ಯಾರನ್ನು ಬಿಜೆಪಿಯಿಂದ ಕರೆತರಬಹುದು ಎಂಬ ಬಗ್ಗೆ ಪಟ್ಟಿ ಮಾಡಿ ಅವರನ್ನು ಸಂಪರ್ಕಿಸುವಂತೆ ತಿಳಿಸಿದೆ.
ಸರ್ಕಾರ ಉಳಿಸುವ ಟ್ರಬಲ್ ಶೂಟರ್ ಆಗಿರುವ ಡಿಕೆ ಶಿವಕುಮಾರ್ , ಈ ಹಿಂದೆ ಮಾತನಾಡಿದ ಅವರು, ಸರ್ಕಾರ ಉಳಿಸಿಕೊಳ್ಳಲು ಅಗತ್ಯ ಬಿದ್ದರೆ ನಾನು ನನ್ನ ಸಚಿವ ಸ್ಥಾನ ಬಿಡಲು ಸಿದ್ದವಾಗಿದ್ದೇನೆ ಎಂದು ಹೇಳಿದ್ದರು. ಈಗ ಅವರ ಹೆಗಲಿಗೆ ಈ ಜವಬ್ದಾರಿ ಹೋಗಿದೆ
ಸುಳಿವು ಬಿಟ್ಟುಕೊಟ್ಟ ಡಿಸಿಎಂ
ರಿವರ್ಸ್ ಆಪರೇಷನ್ ಕಮಕ್ಕೆ ಕೈ ನಾಯಕರು ಮುಂದಾಗಿರುವ ಬಗ್ಗೆ ಉಪಮುಖ್ಯಮಂತ್ರಿ ಪರಮೇಶ್ವರ್ ಸುಳಿವು ನೀಡಿದ್ದಾರೆ. ಈ ಕುರಿತು ನ್ಯೂಸ್ 18 ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕೆ ಬಿಜೆಪಿ ನಾಯಕರು ಬೆಲೆ ತೆರಲಿದ್ದಾರೆ. ಆಮಿಷ ಒಡ್ಡಿ ಸರ್ಕಾರವನ್ನು ಪರೀಕ್ಷೆಗೊಳಪಡಿಸಿದ್ದಾರೆ ಎಂದರು
Comments are closed.