ವಡೋದರ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ವಡೋದರ ಆಸ್ಪತ್ರೆಯಲ್ಲಿ ತೀವ್ರ ನಿಘಾ ಘಟಕದಲ್ಲಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಾಕೊಬ್ ಮಾರ್ಟಿನ್ ನೆರವಿಗೆ ಇದೀಗ ಬಿಸಿಸಿಐ ಸೇರಿದಂತೆ ಟೀಂ ಇಂಡಿಯಾಗರು ಧಾವಿಸಿದ್ದಾರೆ. ಮಾಜಿ ನಾಯಕ ಸೌರವ್ ಗಂಗೂಲಿ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಧರ್ಯ ತುಂಬಿದ್ದಾರೆ.
ಡಿಸೆಂಬರ್ 28 ರಂದು ನಡೆದ ರಸ್ತೆ ಅಪಘಾತದಲ್ಲಿ ಜಾಕೋಬ್ ಮಾರ್ಟಿನ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮಾರ್ಟಿನ್ ಪತ್ನಿ ಆರ್ಥಿಕ ನೆರವು ಕೋರಿ ಬಿಸಿಸಿಐಗೆ ಮನವಿ ಮಾಡಿದ್ದರು. ತಕ್ಷಣವೇ ಬಿಸಿಸಿಐ 5 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಇನ್ನು ಬರೋಡಾ ಕ್ರಿಕೆಟ್ ಸಂಸ್ಥೆ 3 ಲಕ್ಷ ರೂಪಾಯಿ ನೀಡಿದೆ.
ಸೌರವ್ ಗಂಗೂಲಿ ಕೂಡ ಆರ್ಥಿಕ ಸಹಾಯ ಮಾಡಿದ್ದಾರೆ. ಇದರ ಜೊತೆಗೆ ಮಾಜಿ ವೇಗಿ ಜಹೀರ್ ಖಾನ್, ಇರ್ಫಾನ್ ಪಠಾಣ್, ಯುಸೂಫ್ ಪಠಾಣ್, ಮುನಾಫ್ ಪಟೇಲ್, ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಸೇರಿದಂತೆ ಕ್ರಿಕೆಟ್ ದಿಗ್ಗಜರು ನೆರವು ನೀಡಿದ್ದಾರೆ. ಇಷ್ಟೇ ಅಲ್ಲ ಶೀಘ್ರದಲ್ಲಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.
ಸೌರವ್ ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ಮಾರ್ಟಿನ್, 10 ಏಕದಿನ ಪಂದ್ಯ ಆಡಿದ್ದಾರೆ. 5 ಪಂದ್ಯ ಗಂಗೂಲಿ ನಾಯಕತ್ವದಲ್ಲಿ ಆಡಿದ್ದರೆ, ಇನ್ನುಳಿದ 5 ಪಂದ್ಯವನ್ನ ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಆಡಿದ್ದರು.
Comments are closed.