ಕರ್ನಾಟಕ

ಕಾಂಗ್ರೆಸ್ಸಿನ ಶಾಸಕರು ರಾಜೀನಾಮೆ ನೀಡುವುದಿಲ್ಲ. ನಮ್ಮ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರೇ ರಾಜೀನಾಮೆ ಕೊಡಬಹುದು: ಸಚಿವ ಸಾರಾ ಮಹೇಶ್

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್ಸಿನ ಶಾಸಕರು ಯಾರೂ ರಾಜೀನಾಮೆ ನೀಡುವುದಿಲ್ಲ. ನಮ್ಮ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರೇ ರಾಜೀನಾಮೆ ಕೊಡಬಹುದು ಎಂದು ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಹೇಳಿದ್ದಾರೆ.

ಬಿಜೆಪಿಯವರ ಸಂಪರ್ಕದಲ್ಲಿ ಆರೆಂಟು ಶಾಸಕರೂ ಇಲ್ಲ. ಪಕ್ಷೇತರರು ಇಬ್ಬರು ಸೇರಿ ಮೂರ್ನಾಲ್ಕು ಶಾಸಕರು ಇದ್ದಿರಬಹುದು. ಎಲ್ಲವೂ ನಾಳೆ ಬಹಿರಂಗ ಆಗುತ್ತದೆ. ಜೆಡಿಎಸ್ ಪಕ್ಷದ ಶಾಸಕರು ಒಗ್ಗಟ್ಟಾಗಿದ್ದಾರೆ. ಸರ್ಕಾರ ಉಳಿಸಲು ನಾವು ಯಾವ ತ್ಯಾಗಕ್ಕೂ ಸಿದ್ಧ ಎಂದು ಅವರು ಈ ವೇಳೆ ತಿಳಿಸಿದರು.

ಆಪರೇಷನ್ ಕಮಲ ಇಲ್ಲ: ಕಾಂಗ್ರೆಸ್‍ನ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿ ಇರುವುದು ನಿಜ. ಆದರೆ ಬಿಜೆಪಿ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದ್ದಾರೆ.

ಚಿಕ್ಕೋಡಿಯಲ್ಲಿ ಮಾತನಾಡಿದ ಅವರು ಬಿಜೆಪಿಯ 104 ಶಾಸಕರು ದೆಹಲಿಯಲ್ಲಿ ಸೇರಿದ್ದು ನಿಜ. ಎಲ್ಲರೂ ಲೋಕಸಭಾ ಚುನಾವಣಾ ವಿಚಾರವಾಗಿ ನಡೆದ ಚರ್ಚೆಯಲ್ಲಿ ಭಾಗಿಯಾಗಿದ್ದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಲಹೆಯಂತೆ ಎಲ್ಲರೂ ಸಭೆ ನಡೆಸಿ, ಚರ್ಚೆ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿಯವರನ್ನು ಬಿಟ್ಟರೆ ಬೇರೆ ಪಕ್ಷದ ಶಾಸಕರು ದೆಹಲಿಗೆ ಬಂದಿಲ್ಲ. ನಾವು ಮಾತ್ರ ಲೋಕಸಭಾ ಚುನಾವಣೆಯ ವಿಚಾರವಾಗಿ ಅಷ್ಟೇ ಚರ್ಚೆ ಮಾಡಿದ್ದೇವೆ. ಆಪರೇಷನ್ ಕಮಲದ ಬಗ್ಗೆ ಮಾತುಕತೆಯಾಗಿಲ್ಲ ಎಂದು ತಿಳಿಸಿದರು.

Comments are closed.