ಯಾದಗಿರಿ: ಕುಡಿಯುವ ನೀರಿಗೆ ವಿಷ ಮಿಶ್ರಣ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪಂಪ್ ಆಪರೇಟರ್ ಸಹಿತ ಇಬ್ಬರು ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ.
ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಮುದನೂರ ಕೆ. ಗ್ರಾಮದ ಕುಡಿಯುವ ನೀರಿಗೆ ವಿಷ ಬೆರೆಸಿದ್ದ ಪಂಪ್ ಆಪರೇಟರ್ ಮೌನೇಶ್ ಹಾಗೂ ಅರಕೇರಾ ಜೆ ಗ್ರಾಮದ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಾಂತಗೌಡ ಎಂಬುವವರನ್ನು ಪೋಲೀಸರು ಬಂಧಿಸಿದ್ದಾರೆ.
ಈ ವೇಳೆ ಆರೋಪಿಗಳು ತಾವು ಅರಕೇರಾ ಜೆ ಗ್ರಾಮದ ಪಿಡಿಒ ಅನ್ನು ವರ್ಗಾವಣೆ ಮಾಡಿಸುವ ಸಲುವಾಗಿ ನೀರಿಗೆ ವಿಷ ಬೆರೆಸಿದ್ದೆವು ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಘಟನೆ ಸಂಬಂಧ ಎಸ್ಪಿ ಯಡಾ ಮಾರ್ಟಿನ್ ಅವರು ಸುರಪುರ ಡಿವೈಎಸ್ಪಿ ಶಿವನಗೌಡ ಪಾಟೀಲ ನೇತೃತ್ವದ 5 ಪೋಲೀಸ್ ಅಧಿಕಾರಿಗಳ ತಂಡ ತನಿಖೆ ಕೈಗೊಂಡಿತ್ತು.
ಜನವರಿ 9ರಂದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮುದನೂರ ಕೆ ಗ್ರಾಮದ ಕುಡಿಯುವ ನೀರಿನ ಬಾವಿಗೆ ಕ್ರಿಮಿನಾಶಕ ಬೆರೆಸಲಾಗಿತ್ತು. ನೀರು ಪೂರೈಕೆಯಾಗುವ ಪೈಪ್ ಗೆ ವಿಷ ಹಾಕಲಾಗಿದ್ದು ಇದೇ ವಿಷಯುಕ್ತ ನೀರನ್ನು ತೆಗ್ಗಹಳ್ಳಿ ಹಾಗೂ ಶಖಾಪುರ ಗ್ರಾಮಗಳಿಗೆ ಬಿಡಲಾಗಿತ್ತು.ಈ ನೀರು ಸೇವನೆ ಮಾಡಿದ ತೆಗ್ಗಹಳ್ಳಿ ಗ್ರಾಮದ ಹೊನ್ನಮ್ಮ ಎಂಬಾಕೆ ಅಸುನೀಗಿದ್ದು ಆರೋಪಿಯಾದ ಪಂಪ್ ಆಪರೇಟರ್ ಮೌನೇಶ್, ಹಾಗೂ ಆತನ ತಾಯಿ ನಾಗಮ್ಮ ಸೇರಿ 17 ಜನ ವಿಷದ ನೀರ್ತು ಸೇವನೆಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಮೌನೇಶ್ ತಾನೇ ವಿಷ ಬೆರೆಸಿದ್ದರೂ ದುಷ್ಕರ್ಮಿಗಳು ನೀರಿಗೆ ವಿಷ ಹಾಕಿದ್ದಾರೆ, ನಾನು ಗ್ರಾಮದಲ್ಲಿ ಡಂಗುರ ಸಾರಿ ನೀರು ಕುಡಿಯದಂತೆ ಹೇಳುವ ಮೂಲಕ ಅನೇಕರ ಪ್ರಾಣ ಉಳಿಸಿದ್ದೆ ಎಂದು ಈ ಮುನ್ನ ನಾಟಕವಾಡಿದ್ದನು. ಆದರೆ ಇದೀಗ ಪೋಲೀಸರಿಂದ ಅವನ ಬಂಧನವಾಗಿದ್ದು ಪ್ರಮುಖ ಆರೋಪಿ ಅವನೇ ಎಂಬುದು ಸಾಬೀತಾಗಿದೆ.
Comments are closed.