ಬೆಳಗಾವಿ: ಹೆಂಡತಿ ತವರು ಮನೆಯಿಂದ ಬಾರದಿದ್ದಕ್ಕೆ ಆಕ್ರೋಶಗೊಂಡ ಗಂಡನೋರ್ವ ಆಕೆಯ ತುಟಿ, ಮೂಗನ್ನು ಕತ್ತರಿಸಿರುವ ಅಮಾನವೀಯ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಡಿಸೆಂಬರ್. 6 ರಂದು ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಸುನಿತಾ ಸುರೇಶ್ ನಾಯಿಕ್(27) ಎಂಬಾಕೆ ತನ್ನ ಪತಿ ಸುರೇಶ್ ಪರಶುರಾಮ್ ನಾಯಿಕ್ ನಿಂದ ತೀವ್ರವಾಗಿ ಹಲ್ಲೆಗೊಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಶಿರೋಳ ತಾಲೂಕಿನ ಶೆಡಶ್ಯಾಳ ಗ್ರಾಮದ ನಿವಾಸಿ ಸುರೇಶ್ ಜೊತೆ ಸುನಿತಾಗೆ 2 ವರ್ಷದ ಹಿಂದೆ ವಿವಾಹವಾಗಿತ್ತು. ಮದುವೆಯಾದ ಬಳಿಕ ಆಗ್ಗಾಗೆ ಇಬರ ನಡುವೇ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆಯುತ್ತಿತ್ತು. ಈ ಕಾರಣದಿಂದಾಗಿ ಸುನಿತಾ ತನ್ನ ತವರು ಮನೆ ಸೇರಿದ್ದರು. ತವರು ಮನೆಗೆ ಹೋಗಿದ್ದ ಪತ್ನಿ ಸುನೀತಾ ಗಂಡನ ಮನೆಗೆ ವಾಪಾಸ್ಸು ಬರಲಿಲ್ಲ. ಇದರಿಂದ ಕೋಪಗೊಂಡ ಪತಿ ಸುರೇಶ್ ಪತ್ನಿಯ ಮನೆಗೆ ತೆರಳಿ ಅಲ್ಲಿಯೇ ಆಕೆಯ ತುಟಿ, ಮೂಗನ್ನು ಕತ್ತರಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಗಾಯಾಳು ಸುನೀತಾರನ್ನು ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಈ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ಸದ್ಯದಲ್ಲೇ ಆರೋಪಿಯನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
Comments are closed.