ಬೆಂಗಳೂರು : ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ನಾಯಕತ್ವ ಸೂಚಿಸಿರುವ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಅವರಿಗೆ ಶತಾಯಗತಾಯ ಹುದ್ದೆ ತಪ್ಪಿಸಲು ಸಜ್ಜಾಗಿರುವ ಜೆಡಿಎಸ್ ನಾಯಕತ್ವವು ಮಂಡಳಿಯ ಅಧ್ಯಕ್ಷ ಹುದ್ದೆಗೆ ಇರುವ ಮಾನದಂಡಗಳನ್ನು ತರಾತುರಿಯಲ್ಲಿ ಬದಲಾಯಿಸಲು ಮುಂದಾಗಿದ್ದು, ಜ.15ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಳಿ ಅಧ್ಯಕ್ಷ ಹುದ್ದೆಗೆ ಪರಿಷ್ಕೃತ ಮಾನದಂಡಕ್ಕೆ ಒಪ್ಪಿಗೆ ಪಡೆಯಲು ಮುಂದಾಗಿದೆ ಎಂದು ಕಾಂಗ್ರೆಸ್ ಮೂಲಗಳು ಆರೋಪಿಸಿವೆ.
ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದಿಷ್ಟ ಮಾನದಂಡಗಳನ್ನು ರೂಪಿಸುವಂತೆ ಸುಪ್ರೀಂಕೋರ್ಟ್ ಆರು ತಿಂಗಳ ಹಿಂದೆ ನೀಡಿದ್ದ ನಿರ್ದೇಶನವನ್ನು ಇದೀಗ ತರಾತುರಿಯಲ್ಲಿ ಜಾರಿಗೆ ತರಲು ಸರ್ಕಾರ ಮುಂದಾಗಿದ್ದು, ಇದರ ಪರಿಣಾಮವಾಗಿ ಮಂಡಳಿ ಅಧ್ಯಕ್ಷ ಹುದ್ದೆಯ ಮಾನದಂಡವನ್ನು ಪರಿಷ್ಕರಿಸಲಾಗಿದೆ. ಅದಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆಯಲು ಸಜ್ಜಾಗಿದೆ. ಈ ಪರಿಷ್ಕೃತ ಮಾನದಂಡದ ಪ್ರಕಾರ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಎಂಜಿನಿಯರಿಂಗ್ ವಿಷಯದಲ್ಲಿ ಸ್ನಾತಕ ಪದವಿ ಪಡೆದವರು ಮಾತ್ರ ಈ ಹುದ್ದೆ ಅಲಂಕರಿಸಲು ಅರ್ಹರು ಎಂದು ಬದಲಾಯಿಸಲು ಸಜ್ಜಾಗಿದೆ ಎಂದು ಆರೋಪಿಸಲಾಗುತ್ತಿದೆ.
ನಿಯಮ ಬದಲಿಸಿದರೆ ಸುಧಾಕರ್ಗೆ ಹುದ್ದೆಯಿಲ್ಲ: ವಿಜ್ಞಾನ ಶಾಖೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಎಂಜಿನಿಯರಿಂಗ್ ಶಾಖೆಯಲ್ಲಿ ಸ್ನಾತಕ ಪದವಿ ಪಡೆದಿರುವವರು ಮಾತ್ರ ಅರ್ಹರು ಎಂದು ಮಾನದಂಡ ಬದಲಾದರೆ ಸಹಜವಾಗಿಯೇ ವೈದ್ಯ ಪದವಿ (ಎಂಬಿಬಿಎಸ್) ಪಡೆದಿರುವ ಡಾ.ಸುಧಾಕರ್ ಅವರು ಅನರ್ಹರಾಗುವಂತೆ ಮಾಡಿದಂತಾಗುತ್ತದೆ. ಜೆಡಿಎಸ್ ವರಿಷ್ಠರ ಈ ತರಾತುರಿ ನಿರ್ಧಾರದ ಹಿಂದೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿ ನಿಂತಿರುವ ಪ್ರಮುಖ ಒಕ್ಕಲಿಗ ಸಮುದಾಯದ ಶಾಸಕ ಸುಧಾಕರ್ ಅವರಿಗೆ ಹುದ್ದೆ ತಪ್ಪಿಸುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡುವ ಉದ್ದೇಶವಿದೆ ಎಂದು ಕಾಂಗ್ರೆಸ್ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ವಾಸ್ತವವಾಗಿ ಸುಪ್ರೀಂಕೋರ್ಟ್ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಆಯ್ಕೆಗೆ ಕೆಲ ಮಾನದಂಡಗಳನ್ನು ಸಲಹೆ ರೂಪದಲ್ಲಿ ನೀಡಿ ರಾಜ್ಯ ಸರ್ಕಾರಗಳು ಇಂತಹ ಮಾನದಂಡಗಳನ್ನು ರೂಪಿಸಬೇಕು ಎಂದು ತಿಳಿಸಿತ್ತು. ಹೀಗೆ ಹೇಳುವಾಗ ಎಂಜಿನಿಯರಿಂಗ್ನಂತಹ ವೃತ್ತಿಪರ ಶಿಕ್ಷಣದಲ್ಲಿ ಪದವಿ, ವಿಜ್ಞಾನ ವಿಷಯದಲ್ಲಿ ಪದವಿ, ಪರಿಸರ ಸಂರಕ್ಷಣೆಯಂತಹ ವಿಷಯದಲ್ಲಿ ಕೆಲಸ ಮಾಡಿದ ಅನುಭವ ಹಾಗೂ ವಿಶೇಷ ಪರಿಣತಿಗಳನ್ನು ಹೊಂದಿರಬೇಕು ಎಂದು ತಿಳಿಸಿತ್ತು.
ಆದರೆ, ರಾಜ್ಯ ಸರ್ಕಾರ ಇಂತಹ ಮಾನದಂಡವನ್ನು ಕಳೆದ ಆರು ತಿಂಗಳಿನಿಂದ ರೂಪಿಸಿರಲಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯ ಹಿಂದಿನ ಅಧ್ಯಕ್ಷ ಲಕ್ಷ್ಮಣ್ ಅವರ ಅವಧಿ ಮುಗಿದ ನಂತರ ಕೆಲ ಕಾಲ ಈ ಹುದ್ದೆ ನೇರವಾಗಿ ಮುಖ್ಯಮಂತ್ರಿ ಅವರ ಸುಪರ್ದಿಗೆ ಬಂದಿತ್ತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಕಾರ್ಯದರ್ಶಿ ಶಾಂತಕುಮಾರ್ ಅವರು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಹುದ್ದೆ ನೇಮಕಾತಿಗೆ ಪರಿಷ್ಕೃತ ಮಾನದಂಡ ರೂಪಿಸುವ ಪ್ರಕ್ರಿಯೆ ನಡೆಸಿದ್ದರು. ಇದೀಗ ಈ ಪ್ರಕ್ರಿಯೆ ಒಂದು ಹಂತಕ್ಕೆ ಬಂದಿದ್ದು, ಸಚಿವ ಸಂಪುಟದ ಒಪ್ಪಿಗೆ ಪಡೆಯುವುದು ಬಾಕಿಯಿದೆ ಎಂದು ಕಾಂಗ್ರೆಸ್ ನಾಯಕರು ವಿವರಿಸುತ್ತಾರೆ.
ಕಾಂಗ್ರೆಸ್ ನಾಯಕರ ಪ್ರಕಾರ ಪ್ರಕಾರ ಅರಣ್ಯ ಇಲಾಖೆಯ ಕಾರ್ಯದರ್ಶಿ ಶಾಂತಕುಮಾರ್ ಅವರು ಜೆಡಿಎಸ್ನ ಉನ್ನತ ನಾಯಕರೊಬ್ಬರ ಕ್ಲಾಸ್ಮೇಟ್ ಕೂಡ ಆಗಿದ್ದು, ಆತ್ಮೀಯ ಸಂಬಂಧ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ನ ಸದರಿ ನಾಯಕರ ಸೂಚನೆ ಮೇರೆಗೆ ಮಾನದಂಡ ಪರಿಷ್ಕರಿಸಲಾಗಿದೆ. ಅಲ್ಲದೆ, ಶೀಘ್ರವೇ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾಗಲಿರುವ ಶಾಂತಕುಮಾರ್ ಅವರಿಗೂ ಸಹ ಮಾಲಿನ್ಯ ನಿಯಂತ್ರಣ ಮಂಡಳಿ ಹುದ್ದೆಯ ಮೇಲೆ ಕಣ್ಣಿದೆ ಎಂದು ಹೇಳಲಾಗುತ್ತಿದೆ.
ವಾಸ್ತವವಾಗಿ ಜೆಡಿಎಸ್ ನಾಯಕತ್ವವು ಈ ಹುದ್ದೆಯನ್ನು ಮಾಜಿ ಕುಲಪತಿ ಪ್ರೊ.ರಂಗಪ್ಪ ಅವರಿಗೆ ನೀಡಲು ಬಯಸಿದೆ. ರಂಗಪ್ಪ ಅವರ ಬಗ್ಗೆ ಹಲವು ಆರೋಪಗಳಿರುವುದರಿಂದ ಏನಾದರೂ ಅಡ್ಡಿ ಉಂಟಾದರೆ ಆಗ ಸದರಿ ಹುದ್ದೆಯನ್ನು ಶಾಂತಕುಮಾರ್ ಅವರಿಗೆ ನೀಡುವುದು ಜೆಡಿಎಸ್ ನಾಯಕತ್ವದ ಉದ್ದೇಶ ಎಂದು ಕಾಂಗ್ರೆಸ್ಸಿಗರು ಅನುಮಾನ ವ್ಯಕ್ತಪಡಿಸುತ್ತಾರೆ.
Comments are closed.