ಕರ್ನಾಟಕ

ಬಿಜೆಪಿಯ ನಿಷ್ಕ್ರಿಯ ಮುಖಂಡರನ್ನು ಕಿತ್ತೊಗೆಯಲು ಯಡಿಯೂರಪ್ಪ ನಿರ್ಧಾರ!

Pinterest LinkedIn Tumblr


ಬೆಂಗಳೂರು: ಸದ್ಯದಲ್ಲೇ ರಾಜ್ಯ ಬಿಜೆಪಿಯಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯಲಿವೆ. ಜನವರಿ 15ರ ಬಳಿಕ ವಿವಿಧ ಮೋರ್ಚಾಗಳು, ಪದಾಧಿಕಾರಿಗಳ ಬದಲಾವಣೆ ಮಾಡಲು ಬೆಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪನವರು ನಿರ್ಧರಿಸಿದ್ದಾರೆ. ವಿವಿಧ ಸ್ಥಾನಗಳಲ್ಲಿದ್ದು, ಸಕ್ರಿಯವಾಗಿಲ್ಲದ ಸದಸ್ಯರ ಬದಲಾವಣೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಶೇ.40 ರಷ್ಟು ಬದಲಾವಣೆ ಮಾಡಲು ಚಿಂತನೆ ನಡೆಸಿದ್ದು, ಹೋರಾಟ ಮಾಡುವಲ್ಲಿ ವಿಫಲವಾದ ಮುಖಂಡರನ್ನು ಕಿತ್ತೊಗೆಯಲಿದ್ದಾರೆ. ಕೆಲವರು ಹೆಸರಿಗೆ ಮಾತ್ರ ಸ್ಥಾನ ಹೊಂದಿದ್ದಾರೆ. ಆದರೆ ಯಾವುದೇ ಹೋರಾಟ ರೂಪಿಸಲು ಮುಂದಾಗುತ್ತಿಲ್ಲ ಎಂದು ಬಿಎಸ್​ವೈಗೆ ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿ.ಎಸ್​ ಯಡಿಯೂರಪ್ಪನವರು ಲೋಕಸಭೆ ಚುನಾವಣೆಗೆ ಮುನ್ನ ತಮ್ಮ ಪಕ್ಷದಲ್ಲಿ ಮೇಜರ್​​ ಸರ್ಜರಿ ಮಾಡಲಿದ್ದಾರೆ ಎನ್ನುತ್ತಿವೆ ಮೂಲಗಳು.

ಲೋಕಸಭೆ ಚುನಾವಣೆಗೆ ಕೇವಲ ಆರು ತಿಂಗಳು ಬಾಕಿ ಇದೆ. ಈಗಾಗಲೇ ಮೋದಿ ವಿರೋಧಿ ಬಣ ಬಿಜೆಪಿಯನ್ನು ಸೆಡ್ಡು ಹೊಡೆಯಲು ತಯಾರಿ ನಡೆಸಿಕೊಂಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿಯಾಗಿ ಲೋಕಸಭೆ ಎದುರಿಸಲು ಮುಂದಾಗಿದೆ. ಇದೇ ಸಂದರ್ಭದಲ್ಲಿಯೇ ರಾಜ್ಯದ ಬಿಎಸ್​​ವೈ ನೇತೃತ್ವದ ಬಿಜೆಪಿ ಪಡೆ ಲೋಕಸಭೆ ಮೇಲೆ ಕಣ್ಣಿಟ್ಟಿದೆ. ಅದಕ್ಕಾಗಿ ಈಗಿನಿಂದಲೇ ಭರ್ಜರಿ ಸಿದ್ದತೆ ನಡೆಸಿಕೊಳ್ಳುತ್ತಿದೆ.

ಈಗಾಗಲೇ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬಿಜೆಪಿ, ಅದಕ್ಕಾಗಿ ಸ್ಥಳೀಯ ಮಟ್ಟದ ಕಾರ್ಯಕರ್ತರನ್ನು ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ಸಾಧನೆಗಳನ್ನು ರಾಜ್ಯದ ಪ್ರತಿ ಮನೆ ಮನೆಗೆ ಪ್ರಚಾರ ಮಾಡುವಂತೆ ಬಿಜೆಪಿ ವರಿಷ್ಠರು ಸೂಚನೆ ನೀಡಿದ್ದು, ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ.

ಕಳೆದ ರಾಜ್ಯ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​​ ಯಡಿಯೂರಪ್ಪನವರು ಮಿಷನ್​ 150 ಯೋಜನೆ ರೂಪಿಸಿದ್ದರು. ಆದರೆ, ಕೊನೆಗೂ 150 ಮಿಷನ್​ ಪೈಕಿ ಕೇವಲ 104 ಸೀಟುಗಳನ್ನು ಗೆಲ್ಲುವ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಇದೀಗ ವಿಧಾನಸಭೆಯಲ್ಲಿ ವಿಫಲವಾದ ಬಿಜೆಪಿ ಲೋಕಸಭೆಯಲ್ಲಿ ಸಫಲಗೊಳಿಸಲು ಚಿಂತಿಸಿದೆ. ಹೀಗಾಗಿಯೇ ಶತಾಯಗತಾಯ 20 ಸೀಟುಗಳನ್ನು ಗೆಲ್ಲಲು ಮುಂದಾಗಿದೆ.

ಲೋಕಸಭಾ ಚುನಾವಣಾ ಸಮರದ ಸಂಪೂರ್ಣ ಜವಾಬ್ದಾರಿ ಬಿಎಸ್​ ಯಡಿಯೂರಪ್ಪ ಹೆಗಲಿಗೆ ಹೊರಿಸಲಾಗಿದೆ. ಬಿಜೆಪಿ ಹೈಕಮಾಂಡ್​​ ಅಮಿತ್​ ಶಾ ಅವರು ಕೂಡ 20 ಪ್ಲಸ್​​​ ಯೋಜನೆಗೆ ರಣತಂತ್ರಗಳನ್ನು ರೂಪಿಸಿದ್ಧಾರೆ. ಅಲ್ಲದೇ ಯಡಿಯೂರಪ್ಪ ಸೂಚಿಸಿದ ವ್ಯಕ್ತಿಯೇ 2019 ರ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಎನ್ನಲಾಗಿದೆ. 28 ಲೋಕಸಭಾ ಕ್ಷೇತ್ರಕ್ಕೂ ಯಡಿಯೂರಪ್ಪ ಅವರೇ ಟಿಕೆಟ್ ಫೈನಲ್ ಮಾಡುವುದಾಗಿದ್ದು, ಯಾರಿಗೆ ಟಿಕೆಟ್​ ನೀಡಬೇಕು ಎಂಬ ಅಂತಿಮ ನಿರ್ಧಾರ ಅವರದೇ ಆಗಿದೆ ಎಂದು ತಿಳಿದು ಬಂದಿದೆ.

Comments are closed.