ಕರ್ನಾಟಕ

ರೈತರ ಸಾಲ ಮನ್ನಾ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ವಾಸ್ತವದ ಅರಿವಿಲ್ಲ

Pinterest LinkedIn Tumblr


ಬೆಂಗಳೂರು: ರೈತರ ಸಾಲ ಮನ್ನಾ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ರಾಜ್ಯದ ರೈತರು ಸೇರಿದಂತೆ ಇಡಿ ದೇಶದ ದಾರಿ ತಪ್ಪಿಸುವಂತಿದೆ ಎಂದು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೋದಿಯವರ ಈ ಹೇಳಿಕೆ ದುರಾದೃಷ್ಟಕರ ಹಾಗೂ ದೇಶದ ದೌರ್ಭಾಗ್ಯ. ರಾಜ್ಯದ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರಕಾರ ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತಂದಿದೆ. ಅಲ್ಪ ಸಮಯದಲ್ಲೇ ಗಣನೀಯ ಪ್ರಗತಿ ಸಾಧಿಸಲಾಗಿದೆ. ಆದರೆ ಪ್ರಧಾನಿ ಮೋದಿ ವಾಸ್ತವದ ಅರಿವಿಲ್ಲದೇ ಈ ಯೋಜನೆಯನ್ನು ರೈತರ ಮೇಲೆ ಮಾಡಿರುವ ಕ್ರೂರ ವ್ಯಂಗ್ಯ ಎಂದಿರುವುದು ಬೇಸರದ ಸಂಗತಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಂಥ ಮಿಥ್ಯಾರೋಪ ಮಾಡುವುದಕ್ಕೆ ಮೊದಲು ನಮ್ಮ ಸರಕಾರ ಜಾರಿಗೆ ತಂದ ಸಾಲ ಮನ್ನಾ ಯೋಜನೆಯ ವಾಸ್ತವಾಂಶ ಹಾಗೂ ಪ್ರಗತಿಯನ್ನು ಅವರು ಗಮನಿಸಬೇಕು. ಇದು ತೆರೆದ ಪುಸ್ತಕದಂತಿದ್ದು, ದೇಶದಲ್ಲೇ ಮೊದಲ ಬಾರಿಗೆ ಆನ್‌ಲೈನ್‌ ವ್ಯವಸ್ಥೆಯ ಮೂಲಕ ಮಾಹಿತಿ ನೀಡಲಾಗುತ್ತಿದೆ. ನಮ್ಮ ಯೋಜನೆಯನ್ನು ಅಳವಡಿಸಿಕೊಳ್ಳುವುದಕ್ಕೆ ಇತರೆ ರಾಜ್ಯಗಳೂ ಮುಂದೆ ಬಂದಿವೆ.

ಈವರೆಗೆ ಸುಮಾರು 60 ಸಾವಿರ ರೈತರ 350 ಕೋಟಿ ರೂ. ಸಾಲ ಮನ್ನಾ ಮೊತ್ತವನ್ನು ನೇರವಾಗಿ ಅವರ ಖಾತೆಗೆ ವಿದ್ಯುನ್ಮಾನ ವ್ಯವಸ್ಥೆ ಮೂಲಕ ಜಮೆ ಮಾಡಲಾಗಿದೆ. ಪ್ರಧಾನಿ ಹುದ್ದೆಯಲ್ಲಿರುವವರು ಜವಾಬ್ದಾರಿ ಮರೆತು ಈ ಹೇಳಿಕೆ ನೀಡಿದ್ದು ದೇಶದ ದೌರ್ಭಾಗ್ಯ ಎಂದು ಆರೋಪಿಸಿದ್ದಾರೆ.

ರಾಜ್ಯದ ರೈತರ ನೆರವಿಗೆ ಬರುವಂತೆ ಹಲವು ಬಾರಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರೂ ಕಡೆಗಣಿಸಲಾಗಿದೆ. ಈಗ ರಾಜಕೀಯ ಲಾಭಕ್ಕಾಗಿ ದೇಶದ ಜನರ ದಿಕ್ಕು ತಪ್ಪಿಸುವ ಹೇಳಿಕೆ ನೀಡಿರುವುದು ವಿಷಾದನೀಯ. ಕೇಂದ್ರದ ನೀತಿಯಿಂದ ಹತಾಶೆಗೊಂಡಿರುವ ರೈತರು ದಿಲ್ಲಿಗೆ ತೆರಳಿ ಪ್ರತಿಭಟನೆ ನಡೆಸಿದರೂ ದಿವ್ಯ ಮೌನವಹಿಸಿದ್ದರು. ಆದರೆ ಈಗ ಇದಕ್ಕಿದ್ದಂತೆ ರಾಜ್ಯ ಸರಕಾರದ ಕ್ರಮದ ಬಗ್ಗೆ ವ್ಯಂಗ್ಯವಾಡಿರುವುದು ಖಂಡನಾರ್ಹ ಎಂದು ಹೇಳಿದ್ದಾರೆ.

Comments are closed.