ಕರ್ನಾಟಕ

ಆನೆ ಹಾವಳಿ ನಿಯಂತ್ರಣ ಮಾಡುವಂತೆ 4 ದಿನದಿಂದ ಪ್ರತಿಭಟನೆ: ಕುಮಾರಸ್ವಾಮಿಗೆ ಹಾಸನ ಮಹಿಳೆ ಅವಾಜ್

Pinterest LinkedIn Tumblr


ಹಾಸನ: ಕಳೆದ ನಾಲ್ಕು ದಿನಗಳಿಂದ ಆನೆ ಹಾವಳಿ ತಡೆಯುವಂತೆ ಪ್ರತಿಭಟನೆ ನಡೆಸುತ್ತಿದ್ದು, ಆದರೆ ಯಾವ ಅಧಿಕಾರಿಗಳು ಕೇರ್ ಮಾಡಿಲ್ಲ. ರೈತ ಪರ ಏನ್ನೋ ಸಿಎಂ ಎಲ್ಲಿ ಹೋದ್ರು ಎಂದು ಮಹಿಳೆಯೊಬ್ಬರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಆನೆ ಹಾವಳಿ ನಿಯಂತ್ರಣ ಮಾಡುವಂತೆ ಕಳೆದ 4 ದಿನಗಳಿಂದ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ರೈತರ ಸಮಸ್ಯೆ ಬಗ್ಗೆ ಅಸಡ್ಡೆ ತೋರುವ ಅಧಿಕಾರಿಗಳು ಹಾಗೂ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಪ್ರತಿಭಟನಾ ನಿರತ ಮಹಿಳೆ ಜ್ಯೋತಿ ಎಂಬವರು ಆಕ್ರೋಶ ವ್ಯಕ್ತಪಡಿಸಿದರು.

ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರ 5 ಲಕ್ಷ ಪರಿಹಾರ ನೀಡುತ್ತದೆ. ಆದರೆ ಗಂಡನ ಕಳೆದುಕೊಂಡ ಮಹಿಳೆ ಹಾಗೂ ಆ ಕುಟುಂಬದ ನೋವು ನಿಮಗೆ ತಿಳಿಯುತ್ತಾ? ಸತ್ತ ರೈತ ಬದುಕಿದ್ರೆ ಅದರ ಹತ್ತರಷ್ಟು ದುಡಿತಾನೆ. ನಾನು ರೈತರ ಪರ, ಜನರ ಪರ ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳುತ್ತಾರೆ. ಆದರೆ ಈಗ ಅವರು ಎಲ್ಲಿ ಹೋಗಿದ್ದಾರೆ? ಅವರೂ, ಅವರ ಹೆಂಡತಿ ಮಕ್ಕಳು ಎಸಿ ಕಾರಲ್ಲಿ ಓಡಾಡಿಕೊಂಡು ಸುಖವಾಗಿರೋದಲ್ಲ. ಇಲ್ಲಿಗೆ ಬಂದು ನಮಗೆ ನ್ಯಾಯ ಕೊಡಲಿ. ಪ್ರತಿಭಟನಾ ಸ್ಥಳಕ್ಕೆ ಸಿಎಂ ಕುಮಾರಸ್ವಾಮಿ ಅವರನ್ನ ಕರೆಸಿ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

ಹಾಸನ ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಆನೆ ಹಾಗೂ ಮಾನವನ ನಡುವಿನ ಸಂಘರ್ಷ ಮುಂದುವರಿದಿದ್ದು, ರೈತರ ಬೆಳೆಗೆ ಉಂಟಾಗಿರುವ ನಷ್ಟವನ್ನು ತುಂಬಿಕೊಡುವಂತೆ ಪ್ರತಿಭಟನೆ ನಡೆಸಲಾಗಿತ್ತು. ನಾಲ್ಕು ದಿನಗಳ ಬಳಿಕ ಇಂದು ವಲಯ ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತರ ಮನವೊಲಿಕೆ ಮಾಡಲು ಯತ್ನಿಸಿದರು. ಆದರೆ ಈ ವೇಳೆ ಅಧಿಕಾರಿಗಳ ಉತ್ತರಕ್ಕೆ ತೃಪ್ತರಾಗದ ಪ್ರತಿಭಟನಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Comments are closed.