ಕರ್ನಾಟಕ

ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದವನನ್ನ ನಿಂತು ನೋಡಿದ ಜನ!

Pinterest LinkedIn Tumblr


ಹಾವೇರಿ: ಬೈಕ್ ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಸವಾರ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದು ನರಳುತ್ತಿದ್ದರೂ ಯಾರೊಬ್ಬರೂ ಆಸ್ಪತ್ರೆಗೆ ಸೇರಿಸದೇ ಅಮಾನವೀಯತೆ ಮೆರೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಹಾನಗಲ್ ತಾಲೂಕಿನ ಹಿರೇಕಾಂಶಿ ಗ್ರಾಮದ ನಿವಾಸಿ ಗದಿಗೆಯ್ಯ ಹಿರೇಮಠ (38) ಗಂಭೀರವಾಗಿ ಗಾಯಗೊಂಡಿದ್ದ ಸವಾರ. ಗದಿಗೆಯ್ಯ ಅವರು ಅಕ್ಕಿಆಲೂರು ಮಾರ್ಗವಾಗಿ ಹಾನಗಲ್‍ನಿಂದ ಸ್ವಗ್ರಾಮಕ್ಕೆ ಬೈಕ್ ಹೊರಟಿದ್ದರು. ಈ ವೇಳೆ ಅಕ್ಕಿಆಲೂರು ಬಳಿ ಟಿಪ್ಪರ್ ಬಂದು ಡಿಕ್ಕಿಹೊಡೆದಿದೆ. ಪರಿಣಾಮ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಬಿದ್ದಿದ್ದರು. ಇದನ್ನು ನೋಡಿದ ಸ್ಥಳೀಯರು ಯಾವುದೇ ಸಹಾಯಕ್ಕೆ ನಿಲ್ಲದೇ ಪ್ರಥಮ ಚಿಕಿತ್ಸೆ ನೀಡದೇ ಅಮಾನವೀಯತೆ ಮೆರೆದಿದ್ದಾರೆ.

ಕೆಲವರು ಮೊಬೈಲ್‍ನಲ್ಲಿ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಸ್ಥಳೀಯರೊಬ್ಬರು ಆಂಬುಲೆನ್ಸ್ ಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಘಟನೆ ಸಂಭವಿಸಿ ಅರ್ಧ ಗಂಟೆಯ ಬಳಿಕ ಅಕ್ಕಿಆಲೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದರಿಂದ ಗದಿಗೆಯ್ಯ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಅದೃಷ್ಟವಶಾತ್ ಗದಿಗೆಯ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಹಾನಗಲ್ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟಿಪ್ಪರ್ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Comments are closed.