ಕರ್ನಾಟಕ

25 ಲಕ್ಷ ಸಾಲ ಪಡೆದವ ಸತ್ತ ಎಂದು ಸಾಲ ನೀಡಿದ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು: ಸಾಲ ಪಡೆದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟ ನಂತರ ಸಾಲ ಕೊಟ್ಟ ಕುಟುಂಬದ ನಾಲ್ವರು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹಣ ವಾಪಸು ಬಂದಿಲ್ಲ ಎಂದು ಮನನೊಂದು ವಿದ್ಯಾರಣ್ಯಪುರದ ನ್ಯೂ ಬಿ.ಇ.ಎಲ್ ರಸ್ತೆಯಲ್ಲಿದ್ದ ಮನೆಯಲ್ಲಿ ದಂಪತಿ ಜನಾರ್ದನ್ (52), ಸುಮಿತ್ರಾ(48), ಮಗಳು ಸುಧಾರಾಣಿ (29) ಮತ್ತು ಮೊಮ್ಮಗಳು ಸೋನಿಕಾ(6) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಟುಂಬದ ಸದಸ್ಯರು ಮೆಡಿಕಲ್​ ಶಾಪ್ ಇಟ್ಟುಕೊಂಡಿದ್ದು, ಇಂದು ಕೊಳೆತ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಹಣಕಾಸಿನ ವ್ಯವಹಾರದಲ್ಲಿ ನಮಗೆ ನಷ್ಟವಾಗಿದ್ದರಿಂದ ಕುಟುಂಬ ಸಮೇತ ನಿದ್ದೆ ಮಾತ್ರೆ ಸೇವಿಸಿದ್ದೇವೆ ಎಂದು ಡೆತ್​ನೋಟ್​ನಲ್ಲಿ ಬರೆದಿದ್ದಾರೆ.

ಪ್ರಕರಣದ ಕುರಿತು ಖುದ್ದು ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರೇ ವಿಚಾರಣೆ ನಡೆಸುತ್ತಿದ್ದು, ಸದ್ಯಕ್ಕೆ ಹಣಕಾಸಿನ ಸಮಸ್ಯೆಯಿಂದ ಮೃತಪಟ್ಟಿರುವುದು ತಿಳಿದು ಬಂದಿದೆ. ಆದರೆ ಅವರು ಹೇಗೆ ಸತ್ತಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ವ್ಯಕ್ತಿಯೊಬ್ಬರಿಗೆ ಮನೆ ಕಟ್ಟಲು 25 ಲಕ್ಷ ಕೊಟ್ಟಿದ್ದರು. ಆ ವ್ಯಕ್ತಿ ಅಪಘಾತದಿಂದ ಮೃತಪಟ್ಟಿದ್ದಾರೆ. ಆದರೆ, ಆ ವ್ಯಕ್ತಿ ಯಾರು ಎಂಬುದರ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಹೆಚ್ಚಿನ ತನಿಖೆ ನಂತರ ಪ್ರಕರಣದ ಕುರಿತು ಮಾಹಿತಿ ಹೊರಬೀಳಲಿದೆ ಎಂದು ಹೇಳಿದ್ದಾರೆ.

ಸದ್ಯ ಮೃತದೇಹಗಳನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

Comments are closed.