ಕರ್ನಾಟಕ

ಮುಂಬರುವ ಸಾರ್ವತ್ರಿಕ ಸಂಸತ್ ಚುನಾವಣೆಗೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ: ದೇವೇಗೌಡ

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್‌ನ ಎಲ್ಲ ಕಾರ್ಯಕರ್ತರು ಮತ್ತು ಮುಖಂಡರು ಒಟ್ಟಾಗಿ ಕೆಲಸ ಮಾಡಿದ ಕಾರಣ 4 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ. ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ತಿಳಿಸಿದ್ದಾರೆ.

ಉಪ ಚುನಾವಣೆ ಫಲಿತಾಂಶ ನಂತರ ಬೆಂಗಳೂರಿನ ಪದ್ಮನಾಭನಗರದ ನಿವಾಸಕ್ಕೆ ಕಾಂಗ್ರೆಸ್‌ ನಾಯಕರಾದ ಕೆ.ಸಿ. ವೇಣುಗೋಪಾಲ್‌, ದಿನೇಶ್‌ ಗುಂಡೂರಾವ್‌, ಜೆಡಿಎಸ್‌ನ ಎಚ್‌. ವಿಶ್ವನಾಥ್‌ ಭೇಟಿ ನೀಡಿದ ನಂತರ ದೇವೇಗೌಡರು ಸುದ್ದಿಗಾರರೊಂದಿಗೆ ಮಾತನಾಡಿದರು.

ಶಿವಮೊಗ್ಗ ದಲ್ಲಿ ಅಭ್ಯರ್ಥಿ ಹಾಕಿದ್ದು ಕಡೇ ಗಳಿಗೆಯಲ್ಲಿ.. ಸ್ವಲ್ಪ ಮೊದಲೇ ಹಾಕಿದ್ದರೆ ಗೆಲ್ಲುವ ಅವಕಾಶ ಇತ್ತು. 50 ಸಾವಿರ ಮತಗಳ ಅಂತರದಿಂದ ಅಲ್ಲಿ ಸೋತಿರುವುದನ್ನು ಒಪ್ಪುತ್ತೇನೆ.

ಹಳೇ ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಕೆಲಸ ಮಾಡ್ತೀವಿ. ಮುಂದಿನ ಲೋಕಸಭೆ ಸಹ ಕಾಂಗ್ರೆಸ್ ಜತೆ ಚುನಾವಣೆ ಎದುರಿಸುತ್ತೇವೆ. ರಾಹುಲ್ ಗಾಂಧಿ ಸೇರಿದಂತೆ ಸ್ಥಳೀಯ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ಫೈನಲ್ ಮಾಡ್ತೀವಿ ಎಂದರು.

ಗುಂಡ್ಲುಪೇಟೆ ಮತ್ತು ನಂಜನಗೂಡು ಚುನಾವಣೆ ಇರಬಹುದು, ಬಿಬಿಎಂಪಿ ಇರಬಹುದು ಎಲ್ಲದರಲ್ಲೂ ನಾವು ಕಾಂಗ್ರೆಸ್ ಜತೆ ನಿಂತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬಗ್ಗೆ ಏನೇ ಮಾತನಾಡಿದ್ದರೂ, ಅವರು ನಮ್ಮ ಬಗ್ಗೆ ಏನೇ ಮಾತನಾಡಿದ್ದರೂ ಮರೆತು ಮುಂದುವರಿದಿದ್ದೇವೆ ಇದು ನನ್ನ ಬದುಕಿನ ಕಡೆಯ ಹೋರಾಟ ಎಂದು ಗೌಡರು ತಿಳಿಸಿದರು.

ಬಳ್ಳಾರಿ ಬಿಜೆಪಿ ಭದ್ರಕೋಟೆ ಅಂತಾ ಇದ್ರು. ಏನಾಯ್ತು? ಈಗ. ಕಾಂಗ್ರೆಸ್‌, ಜೆಡಿಎಸ್‌ ಸಂಘಟಿತರಾಗಿ ಹೋರಾಟ ನಡೆಸಿದರೆ ಮುಂದಿನ ಚುನಾವಣೆಯಲ್ಲೂ ನಮಗೆ ಯಶಸ್ಸು ದೊರೆಯುತ್ತದೆ ಎಂದರು.

ಸಚಿವ ಸಂಪುಟ ವಿಸ್ತರಣೆ ಇನ್ನು ವಿಳಂಬ ಆಗಲ್ಲ. ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಿದ್ದಾರೆ. ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಜತೆ ಮಾತನಾಡಿ ವಿಸ್ತರಣೆ ಮಾಡಲಿದ್ದಾರೆ. ನಿಗಮ ಮಂಡಳಿಗಳ ನೇಮಕ ಸಹ ಶೀಘ್ರದಲ್ಲೇ ಆಗತ್ತದೆ ಎಂದರು ದೇವೇಗೌಡರು ಸ್ಪಷ್ಟಪಡಿಸಿದರು.

Comments are closed.