ಹಾಸನ: ಲೋಕೋಪಯೋಗಿ ಸಚಿವ ಪ್ರತಿಯೊಂದು ಚಿಕ್ಕ ಪುಟ್ಟ ವಿಚಾರಗಳಲ್ಲೂ ವಾಸ್ತು ನೋಡಿ ಅದರ ಅನ್ವಯವೇ ಮುಂದುವರೆಯುತ್ತಾರೆಂಬ ವಿಚಾರ ಇಡೀ ರಾಜ್ಯಕ್ಕೇ ತಿಳಿದಿದೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ದೇಶದಾದ್ಯಂತ ಈ ವಿಚಾರ ಸದ್ದು ಮಾಡಿತ್ತು. ಯಾರು ಏನೇ ಹೇಳಿದರೂ ಲೋಕೋಪಯೋಗಿ ಸಚಿವರು ಮಾತ್ರ ವಾಸ್ತು ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದೇ ಇಲ್ಲ. ಸದ್ಯ ತಮ್ಮ ನಂಬಿಕೆಗೆ ಸರಿಯಾಗಿ ರೇವಣ್ಣಗೆ ಲಿಫ್ಟ್ನಲ್ಲೂ ವಾಸ್ತುದೋಷ ಎದುರಾಗಿದೆ.
ಹೌದು ಹಾಸನ ಜಿಲ್ಲಾ ಪಂಚಾಯತ್ನಲ್ಲಿ ಸಚಿವ ರೇವಣ್ಣಗೆ ಲಿಫ್ಟ್ ಕಾಟ ಮುಂದುವರೆದಿದೆ. ಇಂದು ಕೆಡಿಪಿ ಸಭೆ ಮುಗಿಸಿ ಬಂದ ರೇವಣ್ಣರವರು ಅಲ್ಲಿನ ಲಿಫ್ಟ್ನಲ್ಲಿ ಸಿಲುಕಿ ಪರದಾಡಿದ್ದಾರೆ. ಕೊನೆಗೆ ಅಧಿಕಾರಿಗಳು ಲಿಫ್ಟ್ ಬಾಗಿಲನ್ನು ಬಲವಂತವಾಗಿ ತೆರೆದು ರೇವಣ್ಣರನ್ನು ಹೊರ ಕರೆತಂದಿದ್ದಾರೆ. ಈ ಮೂಲಕ ಅವರು ಈ ಲಿಫ್ಟ್ನಲ್ಲಿ ಸತತ ಮೂರನೇ ಬಾರಿ ಸಿಲುಕಿಕೊಂಡಂತಾಗಿದೆ.
ಲಿಫ್ಟ್ ವಾಸ್ತು ಪ್ರಕಾರ ಇಲ್ಲಾ ಅಂತಾ ಹೇಳಿದ್ದ ರೇವಣ್ಣ
ಈ ಹಿಂದೆ ಹೆಚ್. ಡಿ ರೇವಣ್ಣ ಇಲ್ಲಿಗೆ ಭೇಟಿ ನೀಡಿದಾಗ, ಎರಡು ಬಾರಿ ಅದೇ ಲಿಫ್ಟ್ ನಲ್ಲಿ ಸಿಲುಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ ಲಿಫ್ಟ್ ವಾಸ್ತು ಪ್ರಕಾರ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ವಾಸ್ತುವಿನಲ್ಲಿ ಹೆಚ್. ಡಿ ರೇವಣ್ಣ ವಿಶೇಷ ನಂಬಿಕೆ ಇಟ್ಟಿದ್ದಾರೆ. ಇದು ಮೂಡನಂಬಿಕೆ ಎಂದು ಯಾರೆಷ್ಟೇ ಹೇಳಿದರೂ ಲೋಕೋಪಯೋಗಿ ಸಚಿವರು ಮಾತ್ರ ವಾಸ್ತು ಪ್ರಕಾರವೇ ಎಲ್ಲಾ ಕಾರ್ಯಗಳನ್ನು ಮಾಡುತ್ತಾರೆ. ಬಹುಶಃ ಅವರ ನಂಬಿಕೆಯಂತೆ ಲಿಫ್ಟ್ ವಾಸ್ತು ಪ್ರಕಾರವಿಲ್ಲದ ಕಾರಣದಿಂದಲೇ ಲಿಫ್ಟ್ ನಲ್ಲಿ ಸಿಲುಕಿಕೊಂಡ್ರಾ ಎಂಬ ಅನುಮಾನ ಇದೀಗ ಅಲ್ಲಿನ ಅಧಿಕಾರಿಗಳನ್ನೂ ಕಾಡಲಾರಂಭಿಸಿದೆ.
Comments are closed.