ಕರ್ನಾಟಕ

ದಲಿತ ಪದ ಬಳಸಿ ಕರೆಯುವುದು ಅಪಮಾನದ ಸಂಕೇತವಲ್ಲ

Pinterest LinkedIn Tumblr


ಬೆಂಗಳೂರು: ‘ದಲಿತ’ ಪದ ಬಳಸಿ ಕರೆಯುವುದು ಅಪಮಾನದ ಸಂಕೇತವಲ್ಲ. ಹೀಗಾಗಿ ಸರಕಾರದ ಕೆಲ ಇಲಾಖೆ ಹಾಗೂ ಹೈಕೋರ್ಟ್‌ ಆ ಪದ ಬಳಸದಂತೆ ನಿರ್ಬಂಧ ಹೇರಿರುವುದು ಸರಿಯಾದ ಕ್ರಮವಲ್ಲ ಎಂದು ಸಮತಾ ಸೈನಿಕ ದಳ(ಎಸ್‌ಎಸ್‌ಡಿ)ದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಅಭಿಪ್ರಾಯಪಟ್ಟರು.

ಎಸ್‌ಎಸ್‌ಡಿ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ‘ದಲಿತ ಪದ ಬಳಕೆ ವಿವಾದ: ಒಂದು ಸಂವಾದ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ,‘‘ಅಮೆರಿಕದಲ್ಲಿ ಜನಾಂಗೀಯ ಸಮಸ್ಯೆಗೆ ಸಿಲುಕಿದ್ದ ಕರಿಯ ಜನರು ಒಗ್ಗೂಡಿ ‘ಬ್ಲ್ಯಾಕ್‌ ಪ್ಯಾಂಥರ್ಸ್‌’ ಸ್ಥಾಪಿಸಿದ್ದರು. ಇದನ್ನಾಧರಿಸಿ ದೇಶದಲ್ಲಿ ‘ದಲಿತ ಪ್ಯಾಂಥರ್ಸ್‌’ ಸಂಘಟನೆಯನ್ನು ಹುಟ್ಟುಹಾಕಲಾಯಿತು. ಎಪ್ಪತ್ತರ ದಶಕದ ನಂತರ ಇದು ದಲಿತ ಪದವಾಗಿ ಮಾರ್ಪಟ್ಟಿತು. ಈ ದಲಿತ ಪದ ರದ್ದು ಪಡಿಸುವ ಯತ್ನ ಸರಿಯಲ್ಲ,’’ ಎಂದು ಪ್ರತಿಪಾದಿಸಿದರು.

‘‘ಸ್ವಾತಂತ್ರ್ಯಕ್ಕೂ ಮುನ್ನ ದಲಿತರನ್ನು ‘ಹರಿಜನ’ ಎಂಬ ಪದದಿಂದ ಗುರುತಿಸುತ್ತಿದ್ದರು. ನಗರೀಕರಣದ ಹಿನ್ನೆಲೆಯಲ್ಲಿ ಆ ಪದವನ್ನು ನಿಷೇಧಿಸಿದ ಮಾದರಿಯಲ್ಲೇ ದಲಿತ ಪದವನ್ನು ಮೂಲೆಗುಂಪು ಮಾಡುವ ಯತ್ನಕ್ಕೆ ಮನುವಾದಿಗಳು ಷಡ್ಯಂತ್ರ ಹೂಡಿದ್ದಾರೆ,’’ ಎಂದು ವೆಂಕಟಸ್ವಾಮಿ ಆರೋಪಿಸಿದರು.

ನಿಯಂತ್ರಣ ಹೇಗೆ ಸಾಧ್ಯ?

ದಲಿತ ಚಿಂತಕ ಡಾ.ಎಂ.ನಾರಾಯಣಸ್ವಾಮಿ‘‘ಸಂವಿಧಾನದಲ್ಲಿ ದಲಿತ ಪದವನ್ನು ಉಲ್ಲೇಖಿಸದ ಕಾರಣ ಸರಕಾರದ ಪತ್ರ ವ್ಯವಹಾರಗಳಲ್ಲಿ ಬಳಸದಂತೆ ಮಧ್ಯಪ್ರದೇಶ ಹಾಗೂ ಮುಂಬೈ ಹೈಕೋರ್ಟ್‌ ಆದೇಶಿಸಿದೆ. ಇದರ ಹೊರತಾಗಿಯೂ ಸಾಹಿತ್ಯ, ಚಳವಳಿಗಳಲ್ಲಿ ಬಲವಾಗಿ ಬೇರೂರಿದೆ. ಇದನ್ನೆಲ್ಲವನ್ನು ಯಾರು, ಹೇಗೆ ನಿಯಂತ್ರಿಸಲು ಸಾಧ್ಯ,’’ ಎಂದು ಪ್ರಶ್ನಿಸಿದರು.

‘‘ಶೋಷಿತ ಜನರನ್ನು ನಿಂದಿಸುವಾಗ ಹಲವು ಪದಗಳನ್ನು ಬಳಸಲಾಗುತ್ತದೆ. ದಲಿತ ಪದವು ನಿಂದನೆಗೆ ಬಳಸದ ಕಾರಣ ಅದನ್ನು ನಿರ್ಬಂಧಿಸಿದರೆ ದಲಿತರಿಗೆ ಯಾವ ಲಾಭವೂ ಆಗದು. ಪರಿಶಿಷ್ಟರು ಒಟ್ಟಾಗಿ ಹೋರಾಟ ಕೈಗೊಳ್ಳಲು ಸಂಘಟಿತ ಶಕ್ತಿ ಪ್ರದರ್ಶಿಸಲು ದಲಿತ ಪದ ಬಳಕೆಯಲ್ಲಿದೆ,’’ ಎಂದು ಅವರು ವಿವರಿಸಿದರು.

ಸಾಮಾಜಿಕ ನ್ಯಾಯ ವೇದಿಕೆಯ ಅಧ್ಯಕ್ಷ ಅನಂತರಾಯಪ್ಪ, ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಡಾ.ಎಂ.ಸುಮಿತ್ರಾ, ಮುಖಂಡರಾದ ಮು.ತಿಮ್ಮಯ್ಯ, ಡಾ.ಎಚ್‌.ಆರ್‌.ಸುರೇಂದ್ರ, ಮತ್ತಿತರರಿದ್ದರು.

‘‘ಸರಕಾರದ ಕಡತಗಳಲ್ಲಿ ದಲಿತ ಪದ ತೆಗೆಯುವ/ಮುಂದುವರಿಸುವ ನಿರ್ಧಾರ ಅವರಿಗೆ ಬಿಟ್ಟಿದ್ದು. ಆದರೆ, ನಮ್ಮ ಜನಾಂಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರಕಾರ ‘ದಲಿತ ಪದ ತೆಗೆದಲ್ಲಿ ಆರ್‌ಪಿಐ ಪಕ್ಷ ಸುಪ್ರೀಂ ಮೊರೆ ಹೋಗಲಿದೆ’’ .

– ಎಂ. ವೆಂಕಟಸ್ವಾಮಿ, ಎಸ್‌ಎಸ್‌ಡಿ ರಾಜ್ಯಾಧ್ಯಕ್ಷ

Comments are closed.