
ಬದಾಮಿ: ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆ ಮಾಡುವ ಸಂಸದ ಅನಂತ ಕುಮಾರ್ ಹೆಗಡೆಗೆ ಕನಿಷ್ಠ ಸಂಸ್ಕಾರ ಇಲ್ಲ. ಆತ ಮನುಕುಲಕ್ಕೆ ಅವಮಾನ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬದಾಮಿಯಲ್ಲಿ ಮಾತನಾಡಿದ ಅವರು, ಅನಂತ ಕುಮಾರ ಹೆಗಡೆಗೆ ಮನುಷ್ಯ ಭಾಷೆ ಗೊತ್ತಿಲ್ಲ. ಅವರಿಗೆ ನಾಚಿಕೆ ಆಗಬೇಕು. ಅಂತಹವರಿಗೆ ಕೇಂದ್ರ ಸಚಿವ ಸ್ಥಾನ ನೀಡಲಾಗಿದೆ. ಅವರಿಗೆ ಸಚಿವ ಸ್ಥಾನ ನೀಡಿರುವ ಪ್ರಧಾನಿ ಮೋದಿಗೂ ಕೂಡ ಮಾನ ಮರ್ಯಾದೆ ಇಲ್ಲ. ಇಂಥವರಿಗೆ ಯಾವುದೇ ಕಾರಣಕ್ಕೂ ಮತ ಹಾಕಬೇಡಿ. ಇವರು ಒಂದು ರೀತಿಯ ಕ್ಯಾನ್ಸರ್ ಇದ್ದಂತೆ. ಅವರ ಮಾತಿನ ಮೂಲಕ ದೇಶವನ್ನು ಹಾಳು ಮಾಡುತ್ತಾರೆ. ಬಿಜೆಪಿಯ ಅಪಪ್ರಚಾರದಿಂದ ನಾವು ಈ ಸೋಲುವಂತೆ ಆಯಿತು ಎಂದು ಹರಿಹಾಯ್ದರು.
ಮೊಳಕಾಲ್ಮೂರು ಶಾಸಕ ಶ್ರೀರಾಮುಲು ವಿರುದ್ಧ ಕೂಡ ಹರಿಹಾಯ್ದ ಅವರು, ಬದಾಮಿ ಕ್ಷೇತ್ರ ನನಗೆ ಹೊಸದಾಗಿರಬಹುದು. ಆದರೆ ಇದು ನನ್ನ ಕ್ಷೇತ್ರ ನಾನು ಅಭಿವೃದ್ಧಿ ಮಾಡುತ್ತೇನೆ. ಇದೇ ರೀತಿ ಶ್ರೀರಾಮುಲು ಕೂಡ ಮೊಳಕಾಲ್ಮೂರಿನಲ್ಲಿ ಅಭಿವೃದ್ಧಿ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.
ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತ ಸಮಾಜದ ಸ್ವಾಸ್ಥ್ಯವನ್ನು ಅನಂತ ಕುಮಾರ್ ಹೆಗಡೆ ಹಾಳು ಮಾಡುತ್ತಿದ್ದಾರೆ. ಅವರೊಬ್ಬ ನಾಲಾಯಕ್ ಸಚಿವ. ಆತ ಒಬ್ಬ ಗ್ರಾಮ ಪಂಚಾಯತಿ ಸದಸ್ಯನಾಗಲು ಕೂಡ ಯೋಗ್ಯತೆಯನ್ನು ಹೊಂದಿಲ್ಲ ಎಂದು ಈ ಹಿಂದೆ ಕೂಡ ಮಾಜಿ ಸಿಎಂ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಅನಂತ ಕುಮಾರ್ ಹೆಗಡೆ ಮೋದಿ ಸರ್ಕಾರದಲ್ಲಿ ಕೌಶಲ್ಯಾಭಿವೃದ್ಧಿ ಸಚಿವರಾದ ಬಳಿಕ ಒಂದಿಲ್ಲೊಂದು ವಿವಾದ ಹುಟ್ಟು ಹಾಕುತ್ತಲೆ ಇದ್ದು, ತಮ್ಮ ಹೇಳಿಕೆ ಮೂಲಕ ಕೇಂದ್ರ ಸರ್ಕಾರವನ್ನು ಕೂಡ ಇಕ್ಕಟ್ಟಿಗೆ ಸಿಲುಕಿಸಿದ್ದರು.
ಮುಗಿಯದ ‘ಅನಂತ’ ವಿವಾದ:
ಸಂವಿಧಾನ ಕಾಲ ಕಾಲಕ್ಕೆ ಬದಲಾಗಬೇಕು. ಸಂವಿಧಾನ ಬದಲಾವಣೆಗೆ ನಾವು ಅಧಿಕಾರಕ್ಕೆ ಬಂದಿರುವುದು. ಜ್ಯಾತ್ಯಾತೀತರಿಗೆ ಅಪ್ಪ-ಅಮ್ಮ ಗೊತ್ತಿಲ್ಲ. ಪುಕ್ಕಟೆ ಉಪವಾಸ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದಲ್ಲ ಹೀಗೆ ಅನೇಕ ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕ ಹೆಗಡೆ ಚರ್ಚೆಗೆ ಕಾರಣವಾಗಿದ್ದರು.
ಅಷ್ಟೇ ಅಲ್ಲದೇ ನಾನು ಕಂಡ ದರಿದ್ರ ಮುಖ್ಯಮಂತ್ರಿ ಎಂದರೆ ಸಿದ್ದರಾಮಯ್ಯ. ಜಾತಿಗಳನ್ನು ಒಡೆಯುವ ಮೂಲಕ ಜನರ ಬದುಕಿಗೆ ಬೆಂಕಿ ಇಟ್ಟಿದ್ದಾರೆ ಎಂದು ಕೂಡ ಸಿದ್ದರಾಮಯ್ಯ ವಿರುದ್ಧ ಅನಂತ್ ಕುಮಾರ್ ಹೆಗಡೆ ದಾಳಿ ನಡೆಸಿದ್ದರು.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡಲು ಮುಂದಾದಾಗ ನನ್ನ ಹೆಸರನ್ನು ಯಾವುದೇ ಕಾರಣಕ್ಕೂ ಆಹ್ವಾನ ಪತ್ರಿಕೆಯಲ್ಲಿ ಹಾಕಿಸಿಬೇಡಿ ನಾವು ಬರುವುದಿಲ್ಲ ಎಂದು ಮನವಿ ಮಾಡಿದ್ದರು. ಆದರೆ ಸರ್ಕಾರದ ಶಿಷ್ಟಾಚಾರ ಪಾಲನೆ ಮಾಡುವುದು ನಮ್ಮ ಕೆಲಸ ಎಂದು ಅವರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು.
Comments are closed.