ಕರ್ನಾಟಕ

ಆನೆಗೆ ಹೊಡೆದ ಗುಂಡಿನಿಂದ ಗೆಳೆಯನ ಸಾವು: ಹೈಕೋರ್ಟ್‌ ಜಾಮೀನು

Pinterest LinkedIn Tumblr


ಬೆಂಗಳೂರು: ಸ್ನೇಹಿತನಿಗೆ ಗುಂಡಿಕ್ಕಿ ಕೊಂದಿದ್ದ ವ್ಯಕ್ತಿಯನ್ನು ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಆನೆಗಳನ್ನು ಓಡಿಸಲು ಹಾರಿಸಿದ ಗುಂಡು, ಸ್ನೇಹಿತನಿಗೆ ತಗುಲಿ ಅಶ್ರಫ್‌ ಎಂಬಾತ ಮೃತಪಟ್ಟಿದ್ದ. ಈ ಘಟನೆ ಆಕಸ್ಮಿಕವಾಗಿ ನಡೆದಿದ್ದು, ಆರೋಪಿ ಅಬೂಬಕರ್‌ ಹಂತಕನಲ್ಲ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಹೀಗಾಗಿ ಬಂಧನದಲ್ಲಿದ್ದ ಅಬೂಬಕರ್‌ನನ್ನು ಬಿಡುಗಡೆ ಮಾಡಲಾಗಿದೆ.

ನಾಪೋಕ್ಲುವಿನಲ್ಲಿ ಏ.14, 2018ರಂದು ರಾತ್ರಿ ಅಬೂಬಕರ್‌, ಹನೀಫ್‌ ಹಾಜಿ ಹಾಗೂ ಅಶ್ರಫ್ ಎಸ್ಟೇಟ್‌ ಒಳಗೆ ನುಗ್ಗಿದ್ದ ಆನೆಗಳನ್ನು ಓಡಿಸಲು ತೆರಳಿದ್ದಾರೆ. ಹನೀಫ್‌ ಬಂದೂಕಿನ ಜತೆ ಬಂದಿದ್ದು, ಅಶ್ರಫ್‌ ಮೂತ್ರವಿಸರ್ಜನೆಗಾಗಿ ವಾಹನದಿಂದ ಕೆಳಗಿಳಿದಿದ್ದ. ಈ ವೇಳೆ ಆನೆಗಳನ್ನು ಕಂಡ ಅಬೂಬಕರ್‌, ಹನೀಫ್‌ ಕೈಯಲ್ಲಿದ್ದ ಬಂದೂಕನ್ನು ಪಡೆದು, ಗುಂಡು ಹಾರಿಸಿದ್ದಾನೆ. ಈ ಗುಂಡು ಅಶ್ರಫ್‌ಗೆ ತಗುಲಿದೆ. ತೀವ್ರ ಗಾಯವಾಗಿದ್ದರಿಂದ ಆತ ತುಸು ಹೊತ್ತಲ್ಲೇ ಪ್ರಾಣಬಿಟ್ಟಿದ್ದಾನೆ.

ಅಬ್ದುಲ್‌ ಖಾದರ್‌ ಎಂಬವರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಅಬೂಬಕರ್‌ನ್ನು ಬಂಧಿಸಲಾಗಿತ್ತು. ಅಬೂಬಕರ್‌ ಜಾಮೀನು ಅರ್ಜಿಯನ್ನು ಈ ಹಿಂದೆ ವಿಚಾರಣಾ ನ್ಯಾಯಾಲಯ ನಿರಾಕರಿಸಿತ್ತು. ಈ ಸಂಬಂಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಅಬೂಬಕರ್‌ಗೆ ಸ್ನೆಹಿತ ಅಶ್ರಫ್‌ನನ್ನು ಕೊಲೆ ಮಾಡುವ ಉದ್ಧೇಶ ಇರಲಿಲ್ಲ. ಆನೆ ಓಡಿಸಲು ಆತ ಗುಂಡು ಹಾರಿಸಿದ್ದ. ಸ್ನೇಹಿತನ ಕೊಲೆ ಯತ್ನ ಇದಲ್ಲ. ಹೀಗಾಗಿ ಅಬೂಬಕರ್‌ಗೆ ಜಾಮೀನು ನೀಡುವುದರಿಂದ ಯಾವುದೇ ಸಮಸ್ಯೆಯಾಗದು. ದೂರಿನಲ್ಲೇ ಸ್ಪಷ್ಟವಾಗಿ ನಮೂದಿಸಲಾಗಿದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟು, ಜಾಮೀನು ನೀಡಿದೆ.

Comments are closed.