
ಬೆಂಗಳೂರು: ಪ್ರವಾಹ ಸಂತ್ರಸ್ಥರಿಗೆ ಪರಿಹಾರ ಸಾಮಾಗ್ರಿ ಕಳುಹಿಸಲು ಬಂದಿದ್ದ ದಂಪತಿ ಮೇಲೆ ಟ್ರಾವೆಲ್ ಏಜೆನ್ಸಿ ಸಿಬ್ಬಂದಿ ಹಲ್ಲೆ ನಡೆಸಿ ಪರಿಹಾರ ಸಾಮಾಗ್ರಿಗಳ ಬಾಕ್ಸ್ಗಳನ್ನು ಬಿಸಾಡಿ ಹೋಗಿರುವ ಬಗ್ಗೆ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳದ ಜಿಲ್ಲಾ ನ್ಯಾಯಾಧೀಶರೊಬ್ಬರ ಮಗ ಮತ್ತು ಸೊಸೆ ಹಲ್ಲೆಗೆ ಒಳಗಾದವರಾಗಿದ್ದು, ಇವರು ಕೊಟ್ಟ ದೂರಿನ ಮೇಲೆ ಮಡಿವಾಳದ ಅಟ್ಲಸ್ ಟ್ರಾವೆಲ್ಸ್ ಸಿಬ್ಬಂದಿ ಮುಬಾರಕ್, ಬೋವೆಲ್, ಸಾಬು ಸೇರಿ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ನಡೆದದ್ದೇನು ?
ಕೇರಳದ ಪ್ರವಾಹ ಪೀಡಿತರಿಗಾಗಿ ನಾನಾ ರೀತಿಯ ಪದಾರ್ಥಗಳಿರುವ 12 ಬಾಕ್ಸ್ಗಳನ್ನು ದಂಪತಿ ಮಂಗಳವಾರ ಬೆಳಗ್ಗೆ ತೆಗೆದುಕೊಂಡು ಅಟ್ಲಸ್ ಟ್ರಾವೆಲ್ಸ್ನ ಬಸ್ ಮೂಲಕ ಕೇರಳಕ್ಕೆ ಸಾಗಿಸಲು ಕಚೇರಿ ಬಳಿ ತೆರಳಿದ್ದರು. ಈ ವೇಳೆ ಸಿಬ್ಬಂದಿ ಬಾಕ್ಸ್ಗಳನ್ನು ತೆಗೆದುಕೊಂಡು ಹೋಗಲು ನಿರಾಕರಿಸಿದ್ದರು. ಇದಕ್ಕೆ ದಂಪತಿ ತಕರಾರು ವ್ಯಕ್ತಪಡಿಸಿದ್ದರು. ಆ ನಂತರ ಕೇವಲ ನಾಲ್ಕು ಬಾಕ್ಸ್ಗಳನ್ನು ಮಾತ್ರ ತೆಗೆದುಕೊಂಡ ಸಿಬ್ಬಂದಿ ಉಳಿದ ಬಾಕ್ಸ್ಗಳನ್ನು ರಸ್ತೆಯಲ್ಲೇ ಎಸೆಯಲು ಮುಂದಾದರು. ಈ ವೇಳೆ ದಂಪತಿ ಬಸ್ಸಿಗೆ ಅಡ್ಡ ನಿಂತು ಪ್ರಶ್ನಿಸಿದ್ದಕ್ಕೆ ಅವರನ್ನು ಒದ್ದಿದ್ದಲ್ಲದೆ, ಇಬ್ಬರನ್ನೂ ನೆಲಕ್ಕೆ ತಳ್ಳಿ ಬೀಳಿಸಿ ಗಾಯಗೊಳಿಸಿದ್ದಾರೆ. ಮಂಗಳವಾರ ಬೆಳಗ್ಗೆ 8.45ರ ಸುಮಾರಿನಲ್ಲಿ ಘಟನೆ ನಡೆದಿದ್ದು 10 ಗಂಟೆ ಸುಮಾರಿಗೆ ಮಡಿವಾಳ ಠಾಣೆಗೆ ಆಗಮಿಸಿದ ದಂಪತಿ ದೂರು ದಾಖಲಿಸಿದ್ದಾರೆ.
”ನನ್ನ ತಾಯಿ ಕೇರಳದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದಾರೆ. ಅಲ್ಲಿನ ವಕೀಲರ ಸಂಘ ಪರಿಹಾರ ಸಾಮಾಗ್ರಿಗಳನ್ನು ಕೊಡಲು ಕೋರಿತ್ತು. ಅದರಂತೆ ನನ್ನ ತಾಯಿಯ ಪರವಾಗಿ 12 ಬಾಕ್ಸ್ಗಳಲ್ಲಿ ಪರಿಹಾರ ಸಾಮಗ್ರಿ ಸಿದ್ದಪಡಿಸಿ ಯಾವ ಯಾವ ಪರಿಹಾರ ಕ್ಯಾಂಪ್ಗಳಿಗೆ ಅವುಗಳನ್ನು ತಲುಪಿಸಬೇಕು ಎಂದೂ ಬಾಕ್ಸ್ಗಳ ಮೇಲೆ ನಮೂದಿಸಿ ನನ್ನ ತಾಯಿಯ ಹೆಸರು ಮತ್ತು ವಿಳಾಸವನ್ನೇ ಅದರ ಮೇಲೆ ದಾಖಲಿಸಿದ್ದೆ. ಆದರೆ ಸಿಬ್ಬಂದಿ ಬಾಕ್ಸ್ಗಳನ್ನು ತೆಗೆದುಕೊಂಡು ಹೋಗಲು ನಿರಾಕರಿಸಿದ್ದರು. ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ” ಎಂದು ಹಲ್ಲೆಗೊಳಗಾದ ದಂಪತಿ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು , ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments are closed.